ಸಂವಿಧಾನವೇ ಈ ದೇಶದ ದೊಡ್ಡ ಶಕ್ತಿ: ಎಂ.ಶ್ರೀನಿವಾಸ್

KannadaprabhaNewsNetwork | Updated : Feb 10 2024, 02:32 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಮಹದೇ‍ವಪ್ಪ ಸಾರ್ವಜನಿಕರಿಗೆ, ಮಕ್ಕಳಿಗೆ ಸಂವಿಧಾನದ ಮಹತ್ವ ತಿಳಿಸಬೇಕು ಎಂಬ ಉದ್ದೇಶದಿಂದಲೇ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಏರ್ಪಡಿಸಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಶ್ರೀನಿವಾಸ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಟೀ ಮಾರುವ ಹುಡುಗ ಈ ದೇಶದ ಪ್ರಧಾನಿಯಾಗಿದ್ದರೆ ಅದಕ್ಕೆ ನಮ್ಮ ದೇಶದ ಸಂವಿಧಾನದ ಶಕ್ತಿ ಕಾರಣವಾಗಿದೆ ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ಎಂ.ಶ್ರೀನಿವಾಸ್‌ ತಿಳಿಸಿದರು.

ಅವರು ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರ ಸಮೀಪದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ, ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪಾರ್ಚನೆ ಮಾತನಾಡಿದರು. 

ನಮ್ಮ ದೇಶದ ಸಂವಿಧಾನಕ್ಕೆ ದೊಡ್ಡ ಶಕ್ತಿ ಇದೆ. ಇದನ್ನು ಉಳಿಸಿಕೊಂಡು ಹೋಗುವ ಜವಬ್ದಾರಿ ಈ ದೇಶದ ಪ್ರಜೆಗಳ ಮೇಲಿದೆ ಎಂದರು. ನಂತರ ವಾಟರ್‌ ಟ್ಯಾಂಕ್ ಸಮೀಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ಈ ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಮಹದೇ‍ವಪ್ಪ ಅವರು ಸಾರ್ವಜನಿಕರಿಗೆ, ಮಕ್ಕಳಿಗೆ ಸಂವಿಧಾನದ ಮಹತ್ವ ತಿಳಿಸಬೇಕು ಎಂದು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಏರ್ಪಡಿಸಿದ್ದಾರೆ. 

ಈಗ ರಾಜ್ಯಾದ್ಯಂತ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಸಂವಿಧಾನ ಜಾಥಾ ಬರುತ್ತಿದೆ. ಬಹಳ ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಕೆಳ ವರ್ಗದವರನ್ನು ಶೋಷಣೆ ಮಾಡಲಾಗುತ್ತಿತ್ತು. 

ಡಾ.ಅಂಬೇಡ್ಕರ್ ಸಂವಿಧಾನ ರಚಿಸಿದ ನಂತರ ಸಮ ಸಮಾಜ ನಿರ್ಮಾಣವಾಗುತ್ತಿದೆ ಎಂದರು. ವಕೀಲ ಜಿ.ದಿವಾಕರ ಮಾತನಾಡಿ, ಪ್ರಪಂಚದಲ್ಲೇ ಭಾರತದ ಸಂವಿಧಾನ ಅತಿ ಶ್ರೇಷ್ಠ ಸಂವಿಧಾನವಾಗಿದೆ. 

ರಾಜಕೀಯ ಲಾಭಕ್ಕಾಗಿ ಕೆಲವರು ಸಂವಿಧಾನದ ಬಗ್ಗೆ ಕೇ‍ವಲವಾಗಿ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಭಾರತದ ಸಂವಿಧಾನವನ್ನು ತಿಳಿದುಕೊಂಡಿರಲಿ ಎಂದು ಪ್ರತಿ ಗ್ರಾಮಗಳಲ್ಲೂ ಸಂವಿಧಾನ ಜಾಥಾ ಸಂಚರಿಸುತ್ತಿದೆ ಎಂದರು. 

ಪಟ್ಟಣ ಪಂಚಾಯಿತಿ ಸದಸ್ಯ ಮುಕುಂದ ಸಂವಿಧಾನ ಪೀಠಿಕೆ ಬೋಧಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್‌ ತನುಜ ಟಿ.ಸವದತ್ತಿ, ಸಂವಿಧಾನ ಜಾಗೃತಿ ಜಾಥಾ ನೋಡಲ್‌ ಅಧಿಕಾರಿ ಉಮೇಶ್, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ನಿರಂಜನ ಮೂರ್ತಿ, ಸಿ.ಡಿ.ಪಿ.ಓ.ವೀರಭದ್ರಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್‌, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್‌.ಎನ್‌.ಮಂಜುನಾಥ್, ಪಟ್ಟಣ ಪಂಚಾಯಿತಿ ಸದಸ್ಯರಾದ ಜುಬೇದ,ಮುನಾವರ್‌ ಪಾಷಾ, ಮಹಮ್ಮದ್ ವಸೀಂ, ಕುಮಾರಸ್ವಾಮಿ, ಸೋಜ, ಕುಮಾರಸ್ವಾಮಿ, 

ಉಮಾ, ರೇಖಾ, ರೀನಾ, ತಾಲೂಕು ಪಂಚಾಯಿತಿ ಇ.ಓ.ನವೀನ್‌ ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್‌.ಪುಷ್ಪ, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ, ತಾಲೂಕು ಕ.ಸಾ.ಪ ಅಧ್ಯಕ್ಷ ಪೂರ್ಣೇಶ್, ಡಿ.ಎಸ್‌.ಎಸ್‌. ಮುಖಂಡರಾದ ಎಚ್‌.ಎಂ.ಶಿವಣ್ಣ, ಶೆಟ್ಟಿಕೊಪ್ಪ ಮಹೇಶ್‌, ವಾಲ್ಮೀಕಿ ಶ್ರೀನಿವಾಸ್‌, ಡಿ.ರಾಮು, ವಕೀಲ ಸಂಘದವರು, 

ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಇದ್ದರು.ಪ್ರವಾಸಿ ಮಂದಿರದಿಂದ ಅಂಬೇಡ್ಕರ್‌ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಪಟ್ಟಣದ ಎಲ್ಲಾ ಪ್ರೌಢಶಾಲೆ, ಪ್ರಾಥಮಿಕ ಶಾಲೆಯ ಸಾವಿರಾರು ಮಕ್ಕಳು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಸಿಂಸೆಯ ವಿರಾಟ್ ವಿಶ್ವ ಕರ್ಮ ಚಂಡೆ ಬಳಗದವರ ಆಕರ್ಷಕವಾದ ಚಂಡೆ ಗಮನ ಸೆಳೆಯಿತು. 

ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪೂರ್ಣ ಕುಂಭದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.