ಗಣರಾಜ್ಯ ಸಂಭ್ರಮ । ದೇಶದ 76ನೇ ಗಣತಂತ್ರದ ಹಬ್ಬ, ಧ್ವಜಾರೋಹಣ । ಸರ್ಕಾರಿ ನೌಕರರಿಗೆ ಪುರಸ್ಕಾರ
ಕನ್ನಡಪ್ರಭ ವಾರ್ತೆ ಸೊರಬಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ|| ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ದೇಶವಾಸಿಗಳಿಗೆ ಸಮಾನತೆಯನ್ನು ಕಲ್ಪಿಸಿದ್ದು, ದೇಶದಲ್ಲಿ ಸಂವಿಧಾನ ಜಾರಿಯಾದ ದಿನವನ್ನು ಗಣರಾಜ್ಯೋತ್ಸವ ಎಂದು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ತಹಸೀಲ್ದಾರ್ ಮಂಜುಳಾ ಹೆಗಡಾಳ್ ನುಡಿದರು.
ಭಾನುವಾರ ಪಟ್ಟಣದ ಡಾ.ರಾಜ್ ರಂಗಮಂದಿರ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ೭೬ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಸಂವಿಧಾನ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳನ್ನು ಕಲ್ಪಿಸಿದ್ದು, ಅಂತೆಯೇ ಕರ್ತವ್ಯಗಳನ್ನು ಪಾಲಿಸಿವುದು ಎಲ್ಲರ ಹೊಣೆಯಾಗಿದೆ. ಗಣರಾಜ್ಯೋತ್ಸವವು ಪ್ರತಿಯೊಬ್ಬ ಭಾರತೀಯರೂ ಒಗ್ಗೂಡಿ ಆಚರಿಸುವ ಹಬ್ಬವಾಗಿದೆ ಎಂದರು.
ದೇಶ ಗಣತಂತ್ರವಾಗಲು ಅನೇಕ ಮಹನೀಯತ ತ್ಯಾಗವಿದೆ. ೧೨ನೇ ಶತಮಾನದಲ್ಲಿ ಬಸವಣ್ಣನವರು ನುಡಿದಂತೆ ಸರ್ವರಿಗೂ ಸಮಾನತೆ ಬೋಧಿಸಿದರು. ಆದರೆ, ಸ್ವಾತಂತ್ರ್ಯ ನಂತರದಲ್ಲಿ ರಚನೆಯಾದ ಸಂವಿಧಾನವು ದೇಶದ ಅತ್ಯಂತ ಪವಿತ್ರ ಗ್ರಂಥವಾಗಿದೆ. ಸಂವಿಧಾನವು ಎಲ್ಲರಿಗೂ ಸಮಾನತೆಯನ್ನು ನೀಡಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸರ್ವರೂ ನಾವೆಲ್ಲಾ ಒಂದೆ ಎನ್ನುವ ಭಾವನೆಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ತಿಳಿಸಿದರು.ಗಣರಾಜ್ಯೋತ್ಸವದ ಸಂಭ್ರಮದ ಆಚರಣೆಯ ಜೊತೆಗೆ ದೇಶದ ಸ್ವಾತಂತ್ರ್ಯ ಮತ್ತು ದೇಶ ಕಟ್ಟುವಲ್ಲಿ ಹಿರಿಯರು ನೀಡಿದ ಕೊಡುಗೆಗಳನ್ನು ಸ್ಮರಿಸುವ ಸುದಿನವಾಗಿದೆ. ಸ್ವಾತಂತ್ರ್ಯ ನಂತರದಲ್ಲಿ ದೇಶವು ಹಲವು ಪ್ರಾಂತ್ಯಗಳಾಗಿ ಹಂಚಿಹೋಗಿತ್ತು. ಸಂವಿಧಾನವು ಜಾರಿಯಾದ ತರುವಾಯ ಇಡೀ ದೇಶ ಒಂದೇ, ದೇಶವಾಸಿಗಳು ಎಲ್ಲರೂ ಸಮಾನರು ಎನ್ನುವ ಭಾವನೆ ಮೂಡಿತು. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ಸಂವಿಧಾನದಿಂದ ಮಾತ್ರ ಸಾಧ್ಯ. ಜಾತಿ, ಮತಗಳ ಭೇದವನ್ನು ಮರೆತು ಒಗ್ಗೂಡಿದಾಗ ದೇಶ ಬಲಿಷ್ಠವಾಗುತ್ತದೆ ಎಂದರು.
ಪುರಸಭಾ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಂ.ಡಿ. ಉಮೇಶ್ ಮಾತನಾಡಿ, ಬಡವ, ಶ್ರೀಮಂತ ಎಂಬ ಬೇಧಭಾವವಿಲ್ಲದೇ ಎಲ್ಲರೂ ಕಾನೂನಿನ ಮುಂದೆ ಸರಿ ಸಮಾನರಾಗಿದ್ದಾರೆ. ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗದಂತೆ ಪ್ರತಿಯೊಬ್ಬರು ಕರ್ತವ್ಯಗಳನ್ನು ಪಾಲಿಸಬೇಕು ಎಂದರು.ವಿವಿಧ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಸರ್ಕಾರಿ ನೌಕರರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ, ಸಾಂಸ್ಕೃತಿಕ ನೃತ್ಯ ರೂಪಕ ಕಾರ್ಯಕ್ರಮಗಳು ಜರುಗಿದವು.
ತಾಪಂ ಕಾರ್ಯನಿರ್ವಾಹಣಾಧಿಕಾರಿ ಡಾ. ಪ್ರದೀಪ್ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪುಷ್ಪಾ, ವೃತ್ತ ನಿರೀಕ್ಷಕ ಎಲ್. ರಾಜಶೇಖರ್, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಎಚ್.ವಿ. ಚಂದನ್ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ದೈಹಿಕ ಶಿಕ್ಷಣ ಸಂಯೋಜಕ ಲಿಂಗರಾಜ ಒಡೆಯರ್, ಪುರಸಭೆ ಸದಸ್ಯರಾದ ಈರೇಶ್ ಮೇಸ್ತ್ರಿ, ಮಧುರಾಯ್ ಜಿ. ಶೇಟ್, ನಟರಾಜ ಉಪ್ಪಿನ, ಶ್ರೀರಂಜಿನಿ ಪ್ರವೀಣ್ಕುಮಾರ್, ಅನ್ಸರ್ಅಹ್ಮದ್, ಪ್ರೇಮಾ ಟೋಕಪ್ಪ, ಆಫ್ರೀನಾ ಮೆಹಬೂಬ್ ಬಾಷಾ, ಸುಲ್ತಾನಾ ಬೇಗಂ ಇತರರು ಇದ್ದರು.