ಐಗೂರು ಗ್ರಾಮದಲ್ಲಿ ರೂ. 10 ಕೋಟಿ ವೆಚ್ಚದ ನೂತನ ಸೇತುವೆ ನಿರ್ಮಾಣಕ್ಕೆ ಚಾಲನೆ

KannadaprabhaNewsNetwork |  
Published : Jan 12, 2025, 01:19 AM IST
ಐಗೂರು ಗ್ರಾಮದಲ್ಲಿ ರೂ. 10 ಕೋಟಿ ವೆಚ್ಚದ ನೂತನ ಸೇತುವೆ ನಿರ್ಮಾಣಕ್ಕೆ ಚಾಲನೆ - ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ | Kannada Prabha

ಸಾರಾಂಶ

ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯ ಐಗೂರು ಗ್ರಾಮದಲ್ಲಿ ರು. 10 ಕೋಟಿ ವೆಚ್ಚದ ನೂತನ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶನಿವಾರ ಚಾಲನೆ ನೀಡಿ ಭೂಮಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಹಿಂದೆ ಧರ್ಮದ ಆಧಾರದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಪ್ರಸ್ತುತ ಸನ್ನೀವೇಶ ಬದಲಾಗಿದ್ದು, ಇಂದು ಅಭಿವೃದ್ಧಿಯ ಆಧಾರದಲ್ಲಿ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮರಾಠಿ ,ಕನ್ನಡ ಎಂದು ಮತಗಳು ಚಲಾವಣೆಯಾಗುತ್ತಿದ್ದವು. ಆ ಪರಿಸ್ಥಿತಿ ಇಂದು ಬದಲಾಗಿದ್ದು, ಅಲ್ಲಿಯೂ ಕೂಡ ಅಭಿವೃದ್ಧಿ ಆಧಾರದಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಕೊಡಗು ಸೇರಿದಂತೆ ಹಲವಡೆ ಧರ್ಮದ ಆಧಾರದಲ್ಲಿ ನಡೆಯುತ್ತಿದ್ದ ಪರಿಸ್ಥಿತಿ ಬದಲಾಗಿದೆ ಎಂದರು.

ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯ ಐಗೂರು ಗ್ರಾಮದಲ್ಲಿ ರು. 10 ಕೋಟಿ ವೆಚ್ಚದ ನೂತನ ಸೇತುವೆ ನಿರ್ಮಾಣಕ್ಕೆ ಶನಿವಾರ ಚಾಲನೆ ನೀಡಿ, ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಾಕಷ್ಟು ರಸ್ತೆ ಅಭಿವೃದ್ಧಿಗೆ ಬೇಡಿಕೆ ಇದೆ. ಎಲ್ಲ ರಸ್ತೆಗಳೂ ಉತ್ತಮವಾಗಿರಬೇಕೆಂಬ ಚಿಂತನೆಯೊಂದಿಗೆ ಇಲಾಖೆ ಕೆಲಸ ಮಾಡುತ್ತಿದೆ. ಇನ್ನೂ ನಮ್ಮ ಸರ್ಕಾರಕ್ಕೆ ಮೂರು ವರ್ಷಗಳ ಅವಧಿ ಇರುವುದರಿಂದ, ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣ ಮಾಡಿರುವ ಸೇತುವೆ 100 ವರ್ಷಗಳಿಗೂ ಹೆಚ್ಚಿನ ಕಾಲ ಬಾಳಿಕೆ ಬಂದಿದ್ದು, ಈಗ ಆಧುನಿಕ ಯೋಜನೆಗಳನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ವರ್ಷಗಳು ಜನರ ಉಪಯೋಗಕ್ಕೆ ಬರುವಂತಹ ಸೇತುವೆ ನಿರ್ಮಾಣ ಮಾಡುವ ಮೂಲಕ ಇತಿಹಾಸದಲ್ಲಿ ಉಳಿಯುವಂತಾಗಬೇಕೆಂದರು.

ಜಿಲ್ಲೆಯಲ್ಲಿ ಬುದ್ಧ, ಬಸವಣ್ಣ, ಡಾ. ಅಂಬೇಡ್ಕರ್, ನಾರಾಯಣ ಗುರು ಸೇರಿದಂತೆ ಸಾಧಕರ ಪುಸ್ತಕಗಳನ್ನು ಓದುವಂತಹ ಪರಿಸ್ಥಿತಿ ನಿರ್ಮಾಣ ಮಾಡುವ ಮೂಲಕ ಪುಸ್ತಕ ಕ್ರಾಂತಿ ಮಾಡಬೇಕಾಗಿದೆ ಎಂದರು.

ಶಾಸಕ ಡಾ. ಮಂತರ್ ಗೌಡ ಮಾತನಾಡಿ, 100 ವರ್ಷಗಳ ಹಿಂದೆ ಬ್ರಿಟಿಷರು ಆಡಳಿತ ನಡೆಸುತ್ತಿದ್ದ ಸಂದರ್ಭ ಲಾರ್ಡ್ ಲೂಯಿಸ್ 1837ರಲ್ಲಿ ನಿರ್ಮಿಸಿದ್ದ ಸೇತುವೆ ದುರ್ಬಲಗೊಂಡಿರುವುದರಿಂದ ನೂತನ ಸೇತುವೆ ನಿರ್ಮಾಣಕ್ಕೆ ಮುಂದಾಗಲಾಗಿದೆ. ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದ್ದು, ಯೋಜನೆಗಳ ಯಶಸ್ವಿಗೆ ಸ್ಥಳೀಯರು ಸಹಕಾರ ಮುಖ್ಯವಾಗಿದೆ ಎಂದರು.

ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಹಾಗೂ ಸದಸ್ಯರು, ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹರೊಜ್ ಖಾನ್, ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಮುಖರಾದ ವೀಣಾ ಅಚ್ಚಯ್ಯ, ಎಚ್.ಎಸ್. ಚಂದ್ರಮೌಳಿ, ವಿ.ಪಿ. ಶಶಿಧರ್, ಕೆ.ಎ. ಯಾಕೂಬ್, ಹಾಸನ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಇಂಜೀನಿಯರ್ ಕೆ.ಎನ್. ನಳಿನಿ, ಕೊಡಗು ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನೀಯರ್ ಎಂ.ಪಿ. ಮುತ್ತಪ್ಪ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!