- ಇನ್ನು ಪದೇಪದೇ ಸಿಸಿ ರಸ್ತೆ, ಫೇವರ್ಸ್ ಅಗೆಯಲು ಅವಕಾಶ ಇಲ್ಲ: ಡಿಸಿ ಗಂಗಾಧರಸ್ವಾಮಿ ತಾಕೀತು - - -
ಅಂತರ್ಜಲ ಸಂರಕ್ಷಣೆಗೆ ಆದ್ಯತೆ ನೀಡುವ ಜೊತೆಗೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಂದು ಹೊಸ ಕೆರೆ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನೆಲ-ಜಲ, ಪರಿಸರ ವೃದ್ಧಿ, ಮಳೆನೀರು ಕೊಯ್ಲು, ಸಸಿ ನೆಡುವುದು ಮತ್ತು ಜಿಲ್ಲೆಯ ಕೆರೆಗಳ ಸಮರ್ಪಕ ನಿರ್ವಹಣೆ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೆರೆಗಳ ಹೂಳೆತ್ತುವ ಕಾಮಗಾರಿಗಳ ಜೊತೆಗೆ ಅಗತ್ಯ ಇರುವ ಕಡೆ ಹೊಸ ಕೆರೆಗಳನ್ನು ನಿರ್ಮಿಸಲು ಆದ್ಯತೆ ನೀಡಲಿದೆ. ತಹಸೀಲ್ದಾರರು ಆಯಾ ತಾಲೂಕಿನಲ್ಲಿ ಸ್ಥಳ ಪರಿಶೀಲಿಸಬೇಕು ಎಂದರು.ಊರಿಗೊಂದು ಕೆರೆ ಮಾಡಲು ಸಾಧ್ಯ ಆಗದಿದ್ದರೂ, ತಾಲೂಕಿಗೆ ಒಂದಾದರೂ ಹೊಸ ಕೆರೆ ನಿರ್ಮಿಸಬೇಕು. ಹೊಸ ಕೆರೆ ನಿರ್ಮಾಣಕ್ಕೆ ಜಾಗದ ಲಭ್ಯತೆ ಪರಿಶೀಲಿಸಿ ವರದಿ ನೀಡಲು ತಹಸೀಲ್ದಾರರಿಗೆ ಸೂಚಿಸಿದೆ. ಜಿಲ್ಲೆಯ ವಿವಿಧ ಕೆರೆಗಳ ಪುನಶ್ಚೇತನ ಕಾರ್ಯ ಭರದಿಂದ ಸಾಗಿದೆ. ಈಗ ದಾವಣಗೆರೆ ತಾ. ಹೊಸಹಳ್ಳಿ, ಚನ್ನಗಿರಿಯ ಬಸಾಪುರ, ನ್ಯಾಮತಿಯ ಕೊಡಚಗೊಂಡನಹಳ್ಳಿ 3 ಪ್ರಮುಖ ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಹೊಸ ಇಂಗು ಕೆರೆಗಳ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಹೊಸ ಇಂಗು ಕೆರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಿ ಕಳಿಸಲಾಗಿದೆ. ಕೆರೆಗಳ ನಿರ್ಮಾಣ, ಮಳೆ ನೀರನ್ನು ಇಂಗಿಸುವುದರಿಂದ ಅಂತರ್ಜಲ ವೃದ್ಧಿಯಾಗುವ ಜೊತೆಗೆ ಸಾಕಷ್ಟು ಅನುಕೂಲವೂ ಆಗಲಿದೆ. ಈಗಾಗಲೇ ತಹಸೀಲ್ದಾರರಿಗೆ ಹೊಸ ಕೆರೆಗಳ ನಿರ್ಮಾಣಕ್ಕೆ ಸೂಕ್ತ ಸ್ಥಳಗಳ ಪರಿಶೀಲನೆಗೆ ಸೂಚನೆ ನೀಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಉದ್ಯಾನವನಗಳು ಮತ್ತು ರಸ್ತೆಗಳ ಬದಿಯಲ್ಲಿ ಗಿಡ ನೆಡುವುದಷ್ಟೇ ಅಲ್ಲದೇ, ಅವುಗಳಿಗೆ ನಿರಂತರ ನೀರುಣಿಸಿ ಪೋಷಿಸುವುದು ಇಲಾಖೆಗಳ ಜವಾಬ್ದಾರಿ. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮರಗಳ ಬುಡದಲ್ಲಿ ಕಾಂಕ್ರೀಟ್ ಹಾಕಿ ಮರಗಳು ಉಸಿರಾಡಲು ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಕಂದಾಯ, ಅರಣ್ಯ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್, ಉಪವಿಭಾಗಾಧಿಕಾರಿ ಸಂತೋಷಕುಮಾರ, ಹೊನ್ನಾಳಿ ಎಸಿ ಎಚ್.ಬಿ.ಚನ್ನಪ್ಪ, ಡಿವೈಎಸ್ಪಿ ಶರಣ ಬಸವೇಶ್ವರ, ಪಾಲಿಕೆ ಆಯುಕ್ತ ಡಾ. ಎನ್.ಮಹಾಂತೇಶ, ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ, ಡಿಎಚ್ಒ ಡಾ.ಷಣ್ಮುಖಪ್ಪ, ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ರೈತ ಮುಖಂಡ ಬಲ್ಲೂರು ರವಿಕುಮಾರ, ತಹಸೀಲ್ದಾರರು, ರೈತ ಮುಖಂಡರು, ಅಧಿಕಾರಿಗಳು ಇದ್ದರು.
(ಬಾಕ್ಸ್) * ನಾಲೆ ಹೂಳೆತ್ತಲು ಪ್ರಸ್ತಾವನೆ ಭದ್ರಾ ಕಾಲುವೆಯಲ್ಲಿ ಬೆಳೆದಿರುವ ಗಿಡ- ಮರಗಳು, ಜೊಂಡು ಹುಲ್ಲು(ವೀಡ್ಸ್)ಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಸಮ್ಮತಿಸಿದ್ದು, ನಾಲೆಗೆ ನೀರು ಹರಿಸಿದಾಗ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ತಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು, ಯಂತ್ರೋಪಕರಣದ ಸಹಾಯದಿಂದ ತ್ವರಿತವಾಗಿ ಹೂಳು ತೆಗೆಯಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಡಿಸಿ ಗಂಗಾಧರ ಸ್ವಾಮಿ ಹೇಳಿದರು.
- - -
- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.
- - --20ಕೆಡಿವಿಜಿ1, 2: ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನೆಲ-ಜಲ, ಪರಿಸರ ವೃದ್ಧಿ, ಮಳೆ ನೀರು ಕೊಯ್ಲು, ಸಸಿ ನೆಡುವುದು ಮತ್ತು ಜಿಲ್ಲೆಯ ಕೆರೆಗಳ ಸಮರ್ಪಕ ನಿರ್ವಹಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.