ಕನ್ನಡಪ್ರಭ ವಾರ್ತೆ ಮೂಲ್ಕಿ
ಜಾಗತಿಕ ಬಂಟರ ಸಂಘದ ವತಿಯಿಂದ ಬಹು ನಿರೀಕ್ಷೆಯ ನೂತನ ತೆರೆದ ಸಭಾಭವನ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣವಾಗುತ್ತಿದೆ ಎಂದು ಜಾಗತಿಕ ಬಂಟರ ಸಂಘದ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು.ಮೂಲ್ಕಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ತೆರೆದ ಸಭಾಭವನದ ಕೆಲಸ ಕಾರ್ಯಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಮದುವೆ, ಮೆಹಂದಿ, ಯಕ್ಷಗಾನ, ನಾಟಕ ಮತ್ತಿತರ ಯಾವುದೇ ಕಾರ್ಯಕ್ರಮಗಳಿಗೆ ಅನೂಕೂಲವಾಗುವಂತೆ ಸಭಾಭವನ ನಿರ್ಮಾಣವಾಗುತ್ತಿದೆ. ಈಗಾಗಲೇ ಕಾರ್ಯಕ್ರಮದ ಮುಂಗಡ ಬುಕಿಂಗ್ ಕೂಡ ಬಂದಿದೆ, ಐಕಳ ಹರೀಶ್ ಶೆಟ್ಟಿ ಅವರು ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸಂಘ ಮತ್ತಷ್ಟು ವಿಶೇಷ ಯೋಜನೆಗಳಿಂದ ಗಮನ ಸೆಳೆಯುತ್ತದೆ, ಶಿಕ್ಷಣ ಆರೋಗ್ಯ, ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ನೀಡುತ್ತಿದ್ದು ಇದಕ್ಕಾಗಿ ಸಾಕಷ್ಟು ಹಣ ವ್ಯಯಿಸಲಾಗಿದೆಯೆಂದು ಹೇಳಿದರು.
ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ ಜಾಗತಿಕ ಬಂಟರ ಸಂಘಕ್ಕೆ ಸ್ವಂತ ಕಚೇರಿ ಮತ್ತು ಒಂದು ಉತ್ತಮ ಸಭಾಭವನದ ಅಗತ್ಯತೆ ಇತ್ತು ಅದು ದಾನಿಗಳ ಸಹಕಾರದಿಂದ ಪೂರ್ಣಗೊಳ್ಳುತ್ತಿದೆ. ಐಕಳ ಹರೀಶ್ ಶೆಟ್ಟಿಯವರು ಸಮಾಜಕ್ಕಾಗಿ ತಮ್ಮನ್ನು ಮುಡಿಪಾಗಿಸಿದ್ದು ಸಂಘಕ್ಕೆ ಬೇಕಾದ ಅಗತ್ಯತೆಗಳನ್ನು ನೀಡುತ್ತಿದ್ದಾರೆ ಎಂದರು.ಈ ಸಂದರ್ಭ ಐಕಳ ಹರೀಶ್ ಶೆಟ್ಟಿ, ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಸಾಯಿರಾಧ ಗ್ರೂಪ್ನ ರವಿ ಎಸ್. ಶೆಟ್ಟಿ, ಜಾಗತಿಕ ಬಂಟರ ಸಂಘದ ಒಕ್ಕೂಟದ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಜಾಗತಿಕ ಬಂಟರ ಸಂಘದ ಒಕ್ಕೂಟದ ನಿರ್ದೇಶಕ ಇನ್ನಂಜೆ ಶಶಿಧರ ಶೆಟ್ಟಿ, ಜೀವನ್ ಶೆಟ್ಟಿ ಮೂಲ್ಕಿ, ಶರತ್ ಶೆಟ್ಟಿ ಕಿನ್ನಿಗೋಳಿ, ರವಿರಾಜ್ ಶೆಟ್ಟಿ ಜತ್ತಬೆಟ್ಟು, ಕೊಲ್ಲಾಡಿ ಬಾಲಕೃಷ್ಣ ರೈ, ಸಭಾಭವನದ ಗುತ್ತಿಗೆದಾರ ಗುರುಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.