ಹಾರೋಹಳ್ಳಿ: ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಹಾಗೂ ರೈತರ ಅನುಕೂಲಕ್ಕಾಗಿ ಅಟಲ್ ಭೂಜಲ ಯೋಜನೆಯಡಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ವಿವಿಧ ಕಾಮಗಾರಿಗಳಿಗೆ ಚಾಲನೆ: ಹಾರೋಹಳ್ಳಿ ಹೋಬಳಿಯ ಮುತ್ತರಾಯನಪುರ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ, ಬಡೇಸಾಬರದೊಡ್ಡಿ, ಚಿಕ್ಕಸಾದೇನಹಳ್ಳಿ ಮತ್ತು ದೊಡ್ಡಸಾದೇನಹಳ್ಳಿಯಲ್ಲಿ ರಸ್ತೆ ಕಾಮಗಾರಿ, ಅಣೆದೊಡ್ಡಿ ಹಾಗೂ ಸೊಂಟೇನಹಳ್ಳಿ ಸಮೀಪ ತೂಗುಕಾಲುವೆ ಅಭಿವೃದ್ಧಿ ಕಾಮಗಾರಿ ಹಾಗೂ ಹೊನ್ನಾಗಲದೊಡ್ಡಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದರು.
ಸ್ಮಶಾನಕ್ಕೆ ಬೇಗನೆ ಜಾಗ ಗುರುತಿಸಿ: ಇದೇ ವೇಳೆ ಅಣೆದೊಡ್ದ ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು ಸ್ಮಶಾನದ ಜಾಗವಿಲ್ಲ ಎಂದು ಅಣೆದೊಡ್ದ ಗ್ರಾಮಸ್ಥರು ಶಾಸಕರ ಬಳಿ ಅಳಲು ತೋಡಿಕೊಂಡರು. ಇದಕ್ಕೆ ಶಾಸಕರು ಗ್ರಾಮ ಲೆಕ್ಕಾಧಿಕಾರಿಗಳಿಗೆ ಆದಷ್ಟು ಬೇಗನೆ ಜಾಗ ಗುರುತಿಸುವಂತೆ ಸೂಚನೆ ನೀಡಿದರು.ಜೆ.ಸಿ.ಬಿ ಅಶೋಕ್, ಬಮುಲ್ ನಿರ್ದೇಶಕ ಎಚ್.ಎಸ್.ಹರೀಶ್ಕುಮಾರ್, ಶಿವಾನಂದ, ದಿನೇಶ್, ಸುಶೀಲ್, ಸೋಮಣ್ಣ, ಕೋಟೆ ಕುಮಾರ, ಸುರೇಶ್ ಹಾಜರಿದ್ದರು.