ಶಾಲಾ ಆವರಣದಲ್ಲಿ ಪಂಚವಟಿ ನಿರ್ಮಾಣ ಒಳ್ಳೆಯ ಕಾರ್ಯ: ಅಶೋಕ ಎ.ಎಚ್.

KannadaprabhaNewsNetwork | Published : Jun 23, 2024 2:05 AM

ಸಾರಾಂಶ

ಶಾಲೆಗೊಂದು ಪಂಚವಟಿ ಆಂದೋಲನದ ಅಂಗವಾಗಿ ಮುಂಡರಗಿ ತಾಲೂಕಿನ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಗಿಡಗಳನ್ನು ನೆಡಲಾಯಿತು. ಈ ಆಂದೋಲನದಡಿ ಬಿಲ್ವ, ಬನ್ನಿ, ಬೇವು, ಅರಳೆ ಮತ್ತು ಅತ್ತಿ ಗಿಡಗಳನ್ನು ಒಂದೆಡೆ ನೆಡಲಾಗುತ್ತದೆ.

ಮುಂಡರಗಿ: ನಿತ್ಯ ನೂರಾರು ವಿದ್ಯಾರ್ಥಿಗಳು ಬಂದು ಅಕ್ಷರಾಭ್ಯಾಸ ಮಾಡುವ ಶಾಲೆಗಳ ಆವರಣದಲ್ಲಿ ಪಂಚವಟಿ ನಿರ್ಮಾಣ ಮಾಡುವುದು ಒಂದು ಒಳ್ಳೆಯ ಕಾರ್ಯವಾಗಿದೆ ಎಂದು ಗದಗ ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಎ.ಎಚ್. ಹೇಳಿದರು.

ಅವರು ಶುಕ್ರವಾರ ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಪ್ಪತಗುಡ್ಡ ವಲಯ ಅರಣ್ಯ ಇಲಾಖೆ, ಕಪ್ಪತಗುಡ್ಡ ಪರಿಸರ ಸಂರಕ್ಷಣಾ ಸಂಘ, ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಜರುಗಿದ ತಾಲೂಕಿನಾದ್ಯಂತ ಶಾಲೆಗೊಂದು ಪಂಚವಟಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಂಚವಟಿ ವ್ಯಾಪ್ತಿಯಲ್ಲಿ ಬರುವ ಗಿಡ, ಮರಗಳು ನಮಗೆ ತುಂಬಾ ಉಪಕಾರಿಯಾಗಿವೆ. ಅವುಗಳಲ್ಲಿ ಅಪಾರವಾದ ಔಷಧೀಯ ಗುಣಗಳಿವೆ. ಈ ಕಾರಣದಿಂದ ನಮ್ಮ ಸಮಾಜದಲ್ಲಿ ಗಿಡ, ಮರಗಳನ್ನು ದೇವರೆಂದು ಪೂಜಿಸಲಾಗುತ್ತದೆ ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಂ.ಎ. ರಡ್ಡೇರ ಮಾತನಾಡಿ, ಪಂಚವಟಿ ಗಿಡಗಳು ಧಾರ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿ ಮಹತ್ವ ಪಡೆದುಕೊಂಡಿವೆ. ಹೀಗಾಗಿ ಮುಂಡರಗಿ ತಾಲೂಕಿನಲ್ಲಿ ಆಯ್ದ 60 ಶಾಲೆಗಳಲ್ಲಿ ಪಂಚವಟಿ ನಿರ್ಮಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಮುಂಡರಗಿ ತಾಲೂಕಿನಲ್ಲಿ ಪ್ರಾರಂಭಿಸಿರುವ ಈ ಕಾರ್ಯಕ್ರಮವನ್ನು ಮುಂಬರುವ ದಿನಗಳಲ್ಲಿ ಅರಣ್ಯ ಇಲಾಖೆಯ ನೆರವಿನೊಂದಿಗೆ ಜಿಲ್ಲೆಯ ಎಲ್ಲ ಶಾಲೆಗಳಿಗೂ ವಿಸ್ತರಿಸುವ ಕುರಿತು ಯೋಚಿಸಲಾಗುವುದು ಎಂದರು.

ಗದಗ ಜಿಲ್ಲಾ ವನ್ಯಜೀವಿ ಪರಿಪಾಲಕ, ಪರಿಸರವಾದಿ ಪ್ರೊ. ಸಿ.ಎಸ್. ಅರಸನಾಳ ಮಾತನಾಡಿ, ಪಂಚವಟಿ ಗಿಡಗಳು ವೈಜ್ಞಾನಿಕವಾಗಿ ಮಹತ್ವ ಪಡೆದುಕೊಂಡಿವೆ. ಬಿಲ್ವ, ಬನ್ನಿ, ಬೇವು, ಅರಳೆ ಮತ್ತು ಅತ್ತಿ ಇವುಗಳೇ ಪಂಚವಟಿ ಮರಗಳು. ಇವುಗಳನ್ನು ಒಂದೇ ದೊಡ್ಡದಾದ ಗುಂಡಿ ತೆಗೆದು ಎಲ್ಲವನ್ನೂ ಕೂಡಿಯೋ ನೆಡುವುದು ಅಥವಾ 4ರಿಂದ 5 ಅಡಿ ಅಂತರದಲ್ಲಿ ಸಾಲಾಗಿ 5 ಮರಗಳನ್ನು ಬೆಳೆಸಬಹುದು. ಪಂಚವಟಿ ವ್ಯಾಪ್ತಿಯ ಗಿಡ, ಮರಗಳು ಪರಿಸರ ಸಂರಕ್ಷಣೆಯಲ್ಲಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತವೆ. ಈ ಮರಗಳಿಗೆ ಶಬ್ದ ಮಾಲಿನ್ಯ ತಡೆಗಟ್ಟುವ ಶಕ್ತಿ ಸಹ ಇದೆ. ಆದ್ದರಿಂದ ಎಲ್ಲರೂ ಶಾಲಾ ಆವರಣದಲ್ಲಿ ಪಂಚವಟಿ ಗಿಡಗಳನ್ನು ಕಾಳಜಿ ಪೂರ್ವಕವಾಗಿ ಬೆಳೆಸಿದರೆ ಶುದ್ದವಾದ ಪರಿಸರ ನಿರ್ಮಾಣ ಮಾಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ, ಗೋಡಂಬಿ ಬೆಳೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಈಶ್ವರಪ್ಪ ಹಂಚಿನಾಳ, ಉಪನಿರ್ದೇಶಕ ಎಂ.ಎ. ರಡ್ಡೇರ, ತಹಸೀಲ್ದಾರ್ ಧನಂಜಯ ಮಾಲಗತ್ತಿ ಅವರನ್ನು ಗೌರವಿಸಲಾಯಿತು.

ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಲ್ಲಣ್ಣ ಹಳೇಮನಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಧನಂಜಯ ಮಾಲಗತ್ತಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಪನೇಶಿ, ಕರಬಸಪ್ಪ ಹಂಚಿನಾಳ, ವಿ. ಸೀತಾರಾಮರಾಜು, ನಾಗೇಶ ಹುಬ್ಬಳ್ಳಿ, ಎಂ.ಎಸ್. ಶಿವಶೆಟ್ಟರ, ಪರಮೇಶ ನಾಯಕ, ದೇವರಡ್ಡಿ ಇಮ್ರಾಪುರ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ವಚನ ನೃತ್ಯ ಜರುಗಿತು. ಗಂಗಾಧರ ಅಣ್ಣಿಗೇರಿ ಸ್ವಾಗತಿಸಿದರು. ಗುಡದಪ್ಪ ಲಿಂಗಶೆಟ್ಟರ ಕಾರ್ಯಕ್ರಮ ನಿರೂಪಿಸಿದರು.

Share this article