ಕನ್ನಡಪ್ರಭ ವಾರ್ತೆ ಬೆಂಗಳೂರು
ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕನಕಪುರ ಮುಖ್ಯರಸ್ತೆಯ ಚೂಡಹಳ್ಳಿ, ನಾಗನಾಯಕನಹಳ್ಳಿ, ಗುಡಿಪಾಳ್ಯ, ಮಲ್ಲಿಪಾಳ್ಯ, ವಡ್ಡರಪಾಳ್ಯ, ನಾರಾಯಣಪುರ, ನೆಲಗುಳಿ, ಚಿನ್ನಕುರ್ಚಿ, ಸೀಗೆಹಳ್ಳಿ, ಉತ್ತರಿ, ಕರೇನಹಳ್ಳಿ, ಕೊಡಿಯಾಲ ಕರೇನಹಳ್ಳಿ, ಚಿಕ್ಕಕುಂಟನಹಳ್ಳಿ, ದೊಡ್ಡಕುಂಟನಹಳ್ಳಿ ಸೇರಿದಂತೆ ಸುತ್ತಮುತ್ತಲ 15 ಗ್ರಾಮಗಳ ರೈತರ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಕೊಡಲು ನಿರಾಕರಿಸಿರುವ ರೈತರು ಸರಕಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಹೋರಾಟ ತೀವ್ರಗೊಳಿಸಿದ್ದಾರೆ. ಹೋರಾಟದ ಭಾಗವಾಗಿ ರೈತರು ಬೀದಿಗಿಳಿದು ಪ್ರತಿಭಟನೆ ಮಾಡಿ ಸಹಿ ಸಂಗ್ರಹಿಸಿದರು.
ವಿಮಾನ ನಿಲ್ದಾಣಕ್ಕೆ ಭೂಮಿ ಕೊಡಬೇಕೆ ಅಥವಾ ಬೇಡವೇ ಎಂದು ಅಭಿಪ್ರಾಯ ಸಂಗ್ರಹಿಸಲು ಪ್ರತಿಯೊಂದು ಗ್ರಾಮದಲ್ಲಿ ಸಭೆ ನಡೆಸಲಾಗುತ್ತಿದೆ. ಯೋಜನೆ ವಿರೋಧಿಸಿ ಸಹಿ ಸಂಗ್ರಹಿಸಿದ ನಂತರ ಸಮಿತಿ ರಚಿಸುತ್ತೇವೆ. ಯೋಜನೆ ವಿರೋಧಿಸಿ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತೇವೆ. ಬಳಿಕ ಸೂಕ್ತ ಜಾಗದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಸಂಘದ ರಾಜ್ಯಾಧ್ಯಕ್ಷ ನದೀಮ್ ಪಾಷಾ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ರೈತ ಮುಖಂಡರಾದ ಕುಮಾರಸ್ವಾಮಿ, ಕಾಣಿಕ್ರಾಜ್, ವೆಂಕಟೇಶ್, ಕೆಂಚಯ್ಯ, ಸೀನಪ್ಪ, ರಾಮಯ್ಯ, ಕೆಂಚಪ್ಪ, ನರಸಿಂಹಯ್ಯ ಹಾಗೂ ವಿವಿಧ ಗ್ರಾಮದ ಮುಖಂಡರು, ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.