ಸುವರ್ಣ ಮಂಡ್ಯ ನಿರ್ಮಾಣ ನನ್ನ ಕನಸು: ಶಾಸಕ ಪಿ.ರವಿಕುಮಾರ್

KannadaprabhaNewsNetwork |  
Published : Feb 24, 2026, 02:30 AM IST
೨೩ಕೆಎಂಎನ್‌ಡಿ-೬ಮಂಡ್ಯ ತಾಲೂಕಿನ ಹೊಸಬೂದನೂರಿನಲ್ಲಿ ನಡೆದ ಬೂದನೂರು ಉತ್ಸವದಲ್ಲಿ ಹಕ್ಕುಪತ್ರ ವಿತರಿಸಿದ ಶಾಸಕ ಪಿ.ರವಿಕುಮಾರ್ ಅವರನ್ನು ಫಲಾನುಭವಿಗಳು ಅಭಿನಂದಿಸಿದರು. | Kannada Prabha

ಸಾರಾಂಶ

ಮಂಡ್ಯ ನಗರ ಅಭಿವೃದ್ಧಿಗೆ ೨೦೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ರೈತರ ನೀರಾವರಿ ಸಮಸ್ಯೆ ನಿವಾರಿಸಲು ೨೩೦ ಕೋಟಿ ರು. ಅನುದಾನದಲ್ಲಿ ಕಾಲುವೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ನನ್ನ ಆಡಳಿತಾವಧಿಯಲ್ಲಿ ಸುವರ್ಣ ಮಂಡ್ಯ ಕಟ್ಟುವ ಕನಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸುವರ್ಣ ಮಂಡ್ಯ ನಿರ್ಮಾಣ ನನ್ನ ಕನಸು. ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಹಲವು ಯೋಜನೆ ರೂಪಿಸಿದ್ದೇನೆ. ಅವುಗಳನ್ನು ಸಾಕಾರಗೊಳಿಸುವ ಮೂಲಕ ವಿದೇಶಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದು ನನ್ನ ಗುರಿ ಎಂದು ಶಾಸಕ ಪಿ.ರವಿಕುಮಾರ್ ವಿಶ್ವಾಸದಿಂದ ನುಡಿದರು.

ತಾಲೂಕಿನ ಬೂದನೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಇಷ್ಟು ವರ್ಷಗಳಲ್ಲಿ ಮಂಡ್ಯ ದೊಡ್ಡ ಹಳ್ಳಿಯಾಗಿತ್ತು. ಮುಂದಿನ ಆರು ತಿಂಗಳಲ್ಲಿ ಮಂಡ್ಯ ನಗರವನ್ನು ವಿದೇಶಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪಣ ತೊಟ್ಟಿದ್ದು, ಮಂಡ್ಯ ನಗರಕ್ಕೆ ರಿಂಗ್ ರಸ್ತೆ ನಿರ್ಮಾಣ, ಕ್ರೀಡಾಪಟುಗಳ ಆಶಯದಂತೆ ಅಂತಾರಾಷ್ಟ್ರೀಯ ಮಟ್ಟದ ಕ್ರೆಡಾಂಗಣ ಮತ್ತು ಜೆ.ಸಿ.ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

ಮಂಡ್ಯ ನಗರ ಅಭಿವೃದ್ಧಿಗೆ ೨೦೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ರೈತರ ನೀರಾವರಿ ಸಮಸ್ಯೆ ನಿವಾರಿಸಲು ೨೩೦ ಕೋಟಿ ರು. ಅನುದಾನದಲ್ಲಿ ಕಾಲುವೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ನನ್ನ ಆಡಳಿತಾವಧಿಯಲ್ಲಿ ಸುವರ್ಣ ಮಂಡ್ಯ ಕಟ್ಟುವ ಕನಸಿದೆ ಎಂದರು.

ಕೆರಗೋಡು ಶ್ರೀಪಂಚಲಿಂಗೇಶ್ವರ ದೇವಾಲಯವನ್ನು ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಬಸರಾಳು ಹೋಬಳಿಯ ಅಭಿವೃದ್ಧಿಗೆ ೧೨೦೦ ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ಕಾವೇರಿ ನದಿಯಿಂದ ನೀರಾವರಿ ಕಲ್ಪಿಸಲು ಸಂಕಲ್ಪ ಮಾಡಿರುವುದಾಗಿ ಹೇಳಿದರು.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಹುಡುಗ ಐಟಿ-ಬಿಟಿಯಲ್ಲಿ ಕೆಲಸ ಮಾಡುತ್ತಾರೆ, ವಿದೇಶದಲ್ಲಿದ್ದಾನೆ ಎಂದು ಹೆಣ್ಣು ಕೊಡಬೇಡಿ. ಎಐ ಬಂದಿದೆ ಯಾವಾಗ ಕೆಲಸದಿಂದ ತೆಗೆಯುತ್ತಾರೆ ಅಂತ ಗೊತ್ತಿಲ್ಲ. ಹಾಗಾಗಿ ಇಲ್ಲೇ ಇರುವ ರೈತರ ಮಕ್ಕಳಿಗೆ ನಿಮ್ಮ ಹೆಣ್ಣು ಮಕ್ಕಳನ್ನು ಕೊಡಿ, ನಿಮ್ಮ ಕಷ್ಟಕಾಲದಲ್ಲಿ ಆಗುತ್ತಾರೆ ಎಂದು ನೇರವಾಗಿ ಹೇಳಿದರು.

ರೈತರು ಸಾಲಕ್ಕೆ ಹೆದ್ದಾರಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಸಾಲಕ್ಕೆ ಜೀವ ಹೆದರಬಾರದು, ಹೆದರಬೇಕಿರೋದು ಸಾಲ ಕೊಟ್ಟಿರುವ ಬ್ಯಾಂಕ್ ಮ್ಯಾನೇಜರ್. ಸಾಲ ಕಟ್ಟದಿದ್ದರೆ ಮನೆ ಹತ್ತಿರ ಬಂದು ಕೇಳುತ್ತಾರೆ. ಮರ್ಯಾದೆ ಹೋಯ್ತು ಅಂತ ಆತ್ಮಹತ್ಯೆ ಮಾಡಿಕೊಂಡರೆ ನಿಮ್ಮ ಮಕ್ಕಳನ್ನು ನೋಡಿಕೊಳ್ಳುವವರು ಯಾರು ಎಂದು ಪ್ರಶ್ನಿಸಿದರು.

ಯುವಕರಿಗೆ ಫಿಲಾಸಫಿಕಲ್ ರೀತಿ ಹೇಳಿದರೆ ಕೇಳಲ್ಲ. ಅವರ ದಾರಿಯಲ್ಲೇ ಹೋಗಿ ಬುದ್ಧಿ ಹೇಳಬೇಕು. ನಾನು ಸರಸ್ವತಿ ಒಲಿಸಿಕೊಂಡಿದ್ದೀನಿ. ಅದಕ್ಕೆ ಲಕ್ಷ್ಮೀನೂ ನನ್ನ ಜೊತೆಗೆ ಇದ್ದಾಳೆ. ಪುಕ್ಸಟ್ಟೆ ಸಿಗುವ ಕನಸನ್ನು ದೊಡ್ಡದಾಗಿ ಕಾಣಿ. ನಿಮ್ಮ ಯಶಸ್ಸಿನ ಹಿಂದೆ ತಾಯಿ ಇರುತ್ತಾಳೆ, ತಾಯಿ ಜೊತೆಗೆ ಇರೋದೇ ತಂದೆ ಎಂದರು.

ಮಕ್ಕಳ ಭವಿಷ್ಯದ ಜತೆಗೆ ಹಣವನ್ನು ಉಳಿತಾಯ ಮಾಡಿ. ಅವರಿಗೆ ಮಕ್ಕಳಾದ ಬಳಿಕ ನಿಮಗಿಂತ ಅವರ ಮಕ್ಕಳ ಮೇಲೆ ಪ್ರೀತಿ ಜಾಸ್ತಿ. ಹಾಗಾಗಿ ಮಕ್ಕಳ ಭವಿಷ್ಯದ ಜತೆಗೆ ಹಣ ಉಳಿಸಿ ಇಡಬೇಕು. ಮುಂದೆ ಅನಾರೋಗ್ಯ ಎದುರಾದಾಗ ಹಣ ಬೇಕಾಗುತ್ತದೆ. ಮಧ್ಯಮ ವರ್ಗದ ಯುವಕ, ಯುವತಿಯರು ಧೈರ್ಯದಿಂದ ಇರಬೇಕು. ಬೀದಿಯಲ್ಲಿ ಮಾತನಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಗಣ್ಯರಿಂದ ಪ್ರಶಸ್ತಿ ಪ್ರದಾನ:

ಸಮಾರಂಭದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಶಾಸಕರಾದ ರವಿಕುಮಾರ್, ಗಣೇಶ್ ಪ್ರಸಾದ್, ಅನಿಲ್ ಚಿಕ್ಕಮಾದು, ಮತ್ತು ದರ್ಶನ್ ಧ್ರುವನಾರಾಯಣ್, ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಅವರು ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಗೌರವಿಸಿದರು.

ಹಕ್ಕುಪತ್ರ ವಿತರಣೆ:

ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯ ೨೪ ಮಂದಿ ಫಲಾನುಭವಿಗಳಿಗೆ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಶೋಭಾರಾಣಿ ಅವರು ಹಕ್ಕುಪತ್ರಗಳನ್ನು ವಿತರಿಸಿದರು. ಅಲ್ಲದೆ, ಇದೇ ಸಂದರ್ಭದಲ್ಲಿ ರೈತರಿಗೆ ಆರ್‌ಟಿಸಿಗಳನ್ನು ವಿತರಿಸಿದರು.

ಜಿಲ್ಲಾಧಿಕಾರಿ ಡಾ. ಕುಮಾರ, ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಸಿಇಒ ಕೆ.ಆರ್.ನಂದಿನಿ, ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್ (ಶಿವಪ್ಪ), ಮೈಷುಗರ್ ಮಾಜಿ ಅಧ್ಯಕ್ಷ ಬಿ.ಸಿ.ಶಿವಾನಂದ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಉದ್ಯಮಿ ನಾಗೇಶ್, ಮುಖಂಡರಾದ ರುದ್ರೇಗೌಡ, ಅಸಾದುಲ್ಲಾಖಾನ್, ನಟ ಲೋಕಿ ಸಮಾರಂಭದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಯಕರ್ತರು ಒಪ್ಪಿದ್ದಲ್ಲಿ ಜೆಡಿಎಸ್‌ ಸೇರ್ಪಡೆ: ಹೂಡಿ ವಿಜಯಕುಮಾರ್‌
ಬೇಡನ್ ಪಾವೆಲ್ ಆದರ್ಶಗಳು ವ್ಯಕ್ತಿತ್ವ ನಿರ್ಮಾಣಕ್ಕೆ ದಾರಿದೀಪ