ಹಾವೇರಿ: ಕನ್ನಡ ಸಾಹಿತ್ಯ ಪರಿಷತ್ತಿಗೆ ಅಂಟಿರುವ ಕೊಳೆ ಶುದ್ಧೀಕರಣದ ಜತೆಗೆ ಪರಿಷತ್ತಿನ ಸ್ವಾಯತ್ತತೆ ಹಾಗೂ ಘನತೆಯನ್ನು ಮರುಸ್ಥಾಪಿಸಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭಿಲಾಷೆ ಹೊಂದಿರುವುದಾಗಿ ಸಾಹಿತಿ, ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ತಿಳಿಸಿದರು.
ಕಸಾಪದಲ್ಲಿ ಬದಲಾವಣೆ ಅಗತ್ಯವಿದೆ. ಸಂಸ್ಥೆಯಲ್ಲಿ ಸ್ವಚ್ಛತೆ ಮತ್ತು ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಿ ಸುಸ್ಥಿತಿಗೆ ತರಬೇಕಿದೆ. ಬೈಲಾ ತಿದ್ದುಪಡಿ ಸೇರಿದಂತೆ ನಡೆದಿರುವ ಬೆಳವಣಿಗೆಗಳ ಕುರಿತು ಸಾಹಿತ್ಯಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಇಂತಹ ಬೆಳವಣಿಗೆಗಳು ಪರಿಷತ್ತಿನ ಇತಿಹಾಸಕ್ಕೆ ಕಳಂಕ ತರುವಂತಾಗಬಾರದು ಎಂದರು.
ಕನ್ನಡ ನಿಘಂಟು ಕಾರ್ಯಕ್ಕೆ ಚಾಲನೆ ನೀಡುವುದು, ಸ್ಥಗಿತಗೊಂಡಿರುವ `ಕನ್ನಡ ನುಡಿ'''''''' ಮುಖವಾಣಿಯನ್ನು ಪುನರಾರಂಭಿಸುವುದು, ಸಣ್ಣ ಕಥೆಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆ ರೂಪಿಸುವುದು ಹಾಗೂ ಯುವ ಸಮೂಹಕ್ಕೆ ಮಾರ್ಗದರ್ಶನ ನೀಡಲು ಶಿಬಿರ ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಉದ್ದೇಶ ಹೊಂದಿದ್ದೇನೆ. ಕಸಾಪದಲ್ಲಿರುವ ಮೂರು ಸಭಾಂಗಣಗಳ ಬಾಡಿಗೆಯನ್ನು ಕಡಿಮೆ ಮಾಡಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಜ್ಞಾನ ಮತ್ತು ವಿದ್ವತ್ತು ಹೊಂದಿರುವ ಕವಿಗಳು, ಸಾಹಿತಿಗಳ ಪ್ರತಿಭೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಕನ್ನಡ ಭಾಷೆ, ಜಲ, ನೆಲ ಹಾಗೂ ಕನ್ನಡ ಶಾಲೆಗಳ ಉಳಿವಿಗಾಗಿ ಸರಕಾರದ ಗಮನ ಸೆಳೆಯಲಾಗುವುದು. ತಿಂಗಳಿಗೊಮ್ಮೆ ಪುಸ್ತಕ ಸಂತೆ ಆಯೋಜಿಸುವ ಚಿಂತನೆಯೂ ಇದೆ ಎಂದು ತಿಳಿಸಿದರು.ಕಳೆದ ಅವಧಿಯಲ್ಲಿ ಕಸಾಪದಲ್ಲಿ 7ರಿಂದ 8 ಕೋಟಿ ರು.ಅಕ್ರಮ ನಡೆದಿದೆ ಎಂದು ಆರೋಪಿಸಿದ ಅವರು, ತಾವು ಮಾಡಿರುವ 17 ಆರೋಪಗಳ ಪೈಕಿ 16 ಆರೋಪಗಳು ಸಾಬೀತಾಗಿವೆ. ಉಳಿದ ಒಂದು ಆರೋಪ ವಿಚಾರಣೆ ಹಂತದಲ್ಲಿದ್ದು, ಅದೂ ಶೀಘ್ರ ಇತ್ಯರ್ಥವಾಗಲಿದೆ. ಈ ಹಿಂದೆ ಕೂಡ ಕಸಾಪ ಆಡಳಿತಕ್ಕೆ ಸಂಬಂಧಿಸಿದಂತೆ ಹಣಕಾಸು ದುರುಪಯೋಗ ಸೇರಿದಂತೆ ಹಲವು ಆರೋಪಗಳ ಕುರಿತು ತನಿಖೆ ನಡೆದಿದೆ ಎಂದು ತಿಳಿಸಿದರು.
ಪ್ರಮುಖರಾದ ಆರ್.ಜಿ. ಹಳ್ಳಿ ನಾಗರಾಜ, ಮಲ್ಲಿಕಾರ್ಜುನ ಕಲಮರಹಳ್ಳಿ , ಎಲ್. ಜೀವನ ಇತರರು ಉಪಸ್ಥಿತರಿದ್ದರು.