ಜಿಲ್ಲೆಯಲ್ಲಿ ಮುಂದುವರಿದ ನಿರಂತರ ಮಳೆ

KannadaprabhaNewsNetwork |  
Published : Jul 05, 2025, 12:18 AM IST
ಪೋಟೋ: 04ಎಸ್‌ಎಂಜಿಕೆಪಿ03ಶಿವಮೊಗ್ಗ ನಗರದಲ್ಲಿತುಂಬಿದ ತುಂಗೆಗೆ ಶುಕ್ರವಾರ ಬೆಳಗ್ಗೆ ನಗರದ ಕೋರ್ಪಲ್ಲಯ್ಯನ ಛತ್ರದ ತುಂಗಾ ಮಂಟಪದಲ್ಲಿ ಜೆಸಿಐ ಶಿವಮೊಗ್ಗ ಭಾವನದಿಂದ ಅಧ್ಯಕ್ಷೆ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು. | Kannada Prabha

ಸಾರಾಂಶ

ಜಿಲ್ಲೆಯ ಹಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಲಾಶಯಗಳ ಒಳ ಹರಿವು ಹೆಚ್ಚಾಗುತ್ತಿದೆ. ಜೋರು ಮಳೆ ಕಾರಣ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಸಾಗರ, ಶಿವಮೊಗ್ಗ ತಾಲೂಕಿನಲ್ಲಿ ಶುಕ್ರವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ಶಿವಮೊಗ್ಗ: ಜಿಲ್ಲೆಯ ಹಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಲಾಶಯಗಳ ಒಳ ಹರಿವು ಹೆಚ್ಚಾಗುತ್ತಿದೆ. ಜೋರು ಮಳೆ ಕಾರಣ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಸಾಗರ, ಶಿವಮೊಗ್ಗ ತಾಲೂಕಿನಲ್ಲಿ ಶುಕ್ರವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ತುಂಗಾ ಜಲಾಶಯಕ್ಕೆ 56926 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಈಗಾಗಲೇ ಈ ಜಲಾಶಯ ಭರ್ತಿಯಾಗಿರುವುದರಿಂದ ಜಲಾಶಯದಿಂದ 68025 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ತುಂಗಾ ಡ್ಯಾಂನಿಂದ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಕಾರಣ ಶಿವಮೊಗ್ಗ ನಗರದ ತುಂಗಾ ನದಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದೆ. ನದಿಯ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ತಗ್ಗು ಪ್ರದೇಶ ಜನರಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಶೇ.69.ರಷ್ಟು ಭರ್ತಿಯಾದ ಭದ್ರಾ:

ಚಿಕ್ಕಮಗಳೂರು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣ ನೀರು ಹರಿದು ಬರುತ್ತಿದ್ದು, ಜಲಾಶಯಮಟ್ಟ 167.1 ಅಡಿಗೆ ( ಗರಿಷ್ಠ 186 ಅಡಿ) ತಲುಪಿದೆ. 71.53 ಟಿಎಂಸಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯ ಇರುವ ಜಲಾಶಯದಲ್ಲಿ ಸದ್ಯ 49.83 ಟಿಎಂಸಿ (ಶೇ.69.66) ನೀರು ಸಂಗ್ರಹವಾಗಿದೆ. 21982 ಕ್ಯುಸೆಕ್ ಒಳ ಹರಿವಿದೆ. ಲಿಂಗನಮಕ್ಕಿ ಒಳಹರಿವು ಹೆಚ್ಚಳ:

ಜಲನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ಲಿಂಗನಮಕ್ಕಿ ಜಲಾಶಯದ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶುಕ್ರವಾರ 41036 ಕ್ಯುಸೆಕ್ ನೀರು ಹರಿದು ಬಂದಿದೆ. 1819 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯ ಮಟ್ಟ ಸದ್ಯ 1789.45 ಅಡಿಗೆ ಏರಿಕೆ ಕಂಡಿದೆ. 151.64 ಟಿಎಂಸಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯವಿದ್ದು, ಸದ್ಯ 72.05 ಟಿಎಂಸಿ (ಶೇ.47.52) ನೀರು ಸಂಗ್ರವಿದೆ.

ಭದ್ರಾ ಜಲಾಶಯದಿಂದ ಮೊದಲ ಎಚ್ಚರಿಕೆ

ಭದ್ರಾ ಜಲಾಶಯದ ಪ್ರದೇಶದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಒಳಹರಿವಿನ ಪ್ರಮಾಣ 20000-25000 ಕ್ಯೂಸೆಕ್‌ ಇದೆ. ಈ ಹಿನ್ನೆಲೆ ಯಾವ ಸಮಯದಲ್ಲಾದರು ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಸ್ಪಿಲ್ವೇ ಗೇಟ್ ಮೂಲಕ ನದಿಗೆ ಬಿಡಲಾಗುವುದು ಮತ್ತು ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಪ್ರಕಟಣೆ ಹೊರಡಿಸಲಾಗಿದೆ.

ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನೀರಿನ ಸಂಗ್ರಹಣೆ ಕುರಿತು ರೂಲ್ ಕರ್ವ್ ಪಾಲನೆ ಮಾಡಲಾಗುತ್ತಿದೆ. ರೂಲ್ ಕರ್ವ್ ಪ್ರಕಾರ ಜಲಾಶಯದಲ್ಲಿರುವ ನೀರಿನ ಸಂಗ್ರಹ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾದಲ್ಲಿ, ಹೆಚ್ಚುವರಿ ನೀರನ್ನು ಹೊರಬಿಡಬೇಕಾಗಿರುತ್ತದೆ. ಅದರಂತೆ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಭದ್ರಾ ನದಿಯ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕಾಗಿ, ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಆರ್.ರವಿಚಂದ್ರ ಕೋರಿದ್ದಾರೆ.

ತುಂಗೆಗೆ ಬಾಗಿನ ಅರ್ಪಣೆ

ಜಿಲ್ಲೆಯ ಮಲೆನಾಡಿನ ಜೀವನದಿಯಾದ ತುಂಗಾ ನದಿಯು ಮೈದುಂಬಿ ಹರಿಯುತ್ತಿದ್ದು, ತುಂಬಿದ ತುಂಗೆಗೆ ಶುಕ್ರವಾರ ಬೆಳಗ್ಗೆ ನಗರದ ಕೋರ್ಪಲ್ಲಯ್ಯನ ಛತ್ರದ ತುಂಗಾ ಮಂಟಪದಲ್ಲಿ ಜೆಸಿಐ ಶಿವಮೊಗ್ಗ ಭವನದಿಂದ ಅಧ್ಯಕ್ಷೆ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಚೈತ್ರ ಸಜ್ಜನ್‌, ಸುರೇಖಾ ಮುರಳಿಧರ್, ಪುಷ್ಪಶೆಟ್ಟಿ, ಮಾಲರಾಮಪ್ಪ, ಲಲಿತ ಗುರುಮೂರ್ತಿ, ಕರಿಬಸಮ್ಮ, ವಂದನಾ ದಿನೇಶ್, ಪೂರ್ಣಿಮಾ ಸುನಿಲ್, ಸುಶೀಲಾ ಷಣ್ಮುಗಂ, ಮಂಜುಳಾರವಿ, ಯಶೋದಾ ನಾಗರಾಜ್, ನಿರೀಕ್ಷಾ ರಾಮಚಂದ್ರ, ಜನ್ಯ ರಂಗನಾಥ್ ಇದ್ದರು.

ಬಿಜೆಪಿಯಿಂದ ಬಾಗಿನ

ಬಿಜೆಪಿ ನಗರ ಸಮಿತಿಯಿಂದ ಕೋಟೆ ರಸ್ತೆಯಲ್ಲಿರುವ ಕೋರ್ಪಲಯ್ಯ ಛತ್ರದ ಬಳಿಯಿರುವ ತುಂಗಾನದಿ ತೀರದ ಮಂಟಪದಲ್ಲಿ ಶುಕ್ರವಾರ ಬಾಗಿನ ಅರ್ಪಿಸಲಾಯಿತು.ಈ ವೇಳೆ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ, ದೇವರ ದಯೆಯಿಂದ ನಾಡಿನಾದ್ಯಂತ ಮಳೆಯಾಗುತ್ತಿದೆ. ಶಿವಮೊಗ್ಗದಲ್ಲಿ ತುಂಗೆ ಕೂಡ ಮೈದುಂಬಿ ಹರಿಯುತ್ತಿದ್ದಾಳೆ. ಈ ಪವಿತ್ರ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಯಂತೆ ಬಾಗಿನ ಅರ್ಪಿಸಿ, ತುಂಗೆಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ತುಂಗಾನದಿ ರಾಜ್ಯದ ಕೃಷಿ, ಕುಡಿಯುವ ನೀರು ಮತ್ತು ಪರಿಸರ ಸಮತೋಲನದ ಪ್ರಮುಖ ಮೂಲವಾಗಿದ್ದು, ತುಂಗೆಗೆ ಬಾಗಿನ ಅರ್ಪಿಸುವ ಸಂಸ್ಕೃತಿ ನಮ್ಮ ನಾಡಿನ ನದೀಪೂಜಾ ಪರಂಪರೆಯ ಪ್ರತಿಬಿಂಬವಾಗಿದೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲೆ ಹಾಗೂ ನಗರದ ಸಮಿತಿಯ ಪ್ರಮುಖರು, ವಿವಿಧ ಮೋರ್ಚಾಗಳ ಸದಸ್ಯರು, ಧಾರ್ಮಿಕ ಮುಖಂಡರು ಮತ್ತಿತರರಿದ್ದರು.

ಕುಸಿದ ದನದ ಕೊಟ್ಟಿಗೆ:

ವೃದ್ಧೆಯ ಸ್ಥಿತಿ ಗಂಭೀರರಿಪ್ಪನ್‍ಪೇಟೆ: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹರತಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಂಜುವಳ್ಳಿ ಗ್ರಾಮದಲ್ಲಿ ಜಾನುವಾರು ಕೊಟ್ಟಗೆ ಕುಸಿದು ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ವೃದ್ಧೆಯೊಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆ ದಾಖಲಾಗಿರುವ ಘಟನೆ ನಡೆದಿದೆ.ನಂಜುವಳ್ಳಿ ಗ್ರಾಮದ ಇಂದಿರಾ ಎಂಬ ವೃದ್ಧೆಗೆ ಗಂಭೀರ ಗಾಯಗಳಾಗಿದ್ದು, ಎದೆಯ ಪಕ್ಕೆಲುಬು ಮುರಿದಿದೆ ಇದರಿಂದ ಶ್ವಾಸಕೋಸದ ತೊಂದರೆಯಿಂದಾಗಿ ಉಸಿರಾಟದ ಸಮಸ್ಯೆ ಉಂಟಾಗಿದೆ. ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆಯಲ್ಲಿ ವೃದ್ಧೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ವೃದ್ಧೆಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎನ್ನಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

PREV