ಧಾರ್ಮಿಕ ಕಾರ್ಯಕ್ರಮ । ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ । 3 ದಿನಗಳ ರಂಗನಾಥನ ಜಾತ್ರೆ
ಕನ್ನಡಪ್ರಭ ವಾರ್ತೆ ಅರಕಲಗೂಡುಶುದ್ಧ ನೀರು ಹಾಕುವುದರಿಂದ ಕೊಳೆನೀರು ಹೇಗೆ ಹೊರಬರುತ್ತದೋ ಹಾಗೆಯೇ ಸತತವಾಗಿ ಧ್ಯಾನ ಮಾಡುವುದರಿಂದ ಶುದ್ಧ ಮನಸ್ಸು ನಮ್ಮದಾಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಕೊಣನೂರು ಹೋಬಳಿ ಚಿಕ್ಕಬೊಮ್ಮನಹಳ್ಳಿಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ 3 ದಿನ ಆಯೋಜಿಸಿದ್ದ ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಿದ್ಯೆಯನ್ನು ಕಲಿತು ನಮಗೆ ಪರಮಾತ್ಮ ಕಾಣದಿದ್ದರೆ ಬಹುದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಜಗತ್ತನ್ನು ಸಂಸಾರ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಯಾರಿಗೆ ಚಿಕ್ಕ ಸಂಸಾರದಲ್ಲಿ ಬದುಕುವ ಕಲೆ ಗೊತ್ತಿರುತ್ತದೋ ಅವರು ದೊಡ್ಡ ಸಂಸಾರ ನಡೆಸಬಲ್ಲರು. ನಾವು ತಿನ್ನುವ ಆಹಾರದ ಕಡೆ ಗಮನ ಇಲ್ಲದಿದ್ದರೆ ಅದು ಭೋಗದ ಬದುಕಾಗುತ್ತದೆಯೇ ಹೊರತು ಯೋಗದ ಬದುಕಾಗುವುದಿಲ್ಲ’ ಎಂದು ಸಲಹೆ ನೀಡಿದರು.ಇದಕ್ಕೂ ಮುನ್ನ ಶುಕ್ರವಾರ ಬೆಳಗಿನಿಂದ ಸಂಜೆಯವರೆಗೂ ರಥೋತ್ಸವ ನಿಮಿತ್ತ ವಿವಿಧ ಪೂಜಾ, ದೇವರು ಮೂರ್ತಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ, ಹೋಮ, ಹವನ, ಅಭಿಷೇಕಾಧಿಗಳನ್ನು ನೆರವೇರಿಸಿ ಸಂಜೆ 4.30 ರಿಂದ 5.30 ರೊಳಗೆ ಮಹಾರಥೋತ್ಸವ ನೆರವೇರಿಸಲಾಯಿತು.
ಸಂಜೆ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಆಗಮಿಸಿದ ನಿರ್ಮಲಾನಂದ ಸ್ವಾಮೀಜಿಯವರನ್ನು ಮುತ್ತಿನಪಲ್ಲಕ್ಕಿ ಉತ್ಸವದಲ್ಲಿ ಕರೆತರಲಾಯಿತು. ಬಳಿಕ ರಂಗನಾಥಸ್ವಾಮಿಗೆ ಪೂಜೆ ನೆರವೇರಿಸಿದರು.ರಂಗನಾಥ ಸ್ವಾಮಿ ಮಹಾ ರಥೋತ್ಸವ:
ಕಾರ್ಯಕ್ರಮಕ್ಕೂ ತಾಲೂಕಿನ ಕೊಣನೂರು ಹೋಬಳಿಯ ಇತಿಹಾಸ ಪ್ರಸಿದ್ಧ ಚಿಕ್ಕಬೊಮ್ಮನಹಳ್ಳಿಯ ರಂಗನಾಥಸ್ವಾಮಿ ಮಹಾ ರಥೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ನೆರವೇರಿತು.ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಗುರುವಾರ ಸಂಜೆಯಿಂದಲೇ ಧರ್ಮಧ್ವಜಾರೋಹಣ ಮೊದಲಾದ ಪೂಜಾ ವಿಧಿ ವಿಧಾನಗಳು ನೆರವೇರಿದವು. ರಥೋತ್ಸವದ ಪ್ರಯುಕ್ತ ಶುಕ್ರವಾರ ಬೆಳಗಿನಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಕರ್ಯಗಳು ನೆರವೇರಿದವು. ಸಂಜೆ ವಿವಿಧ ಬಗೆಯ ಪುಷ್ಪಗಳಿಂದ ಹಾಗೂ ಬಗೆಬಗೆಯ ಬಣ್ಣದ ವಸ್ತ್ರಗಳಿಂದ ಅಲಂಕರಿಸಿದ್ದ ರಥದಲ್ಲಿ ಶ್ರೀ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ರಥಾರೋಹಣ ನಡೆಸಲಾಯಿತು.
ಹಾಸನ ಮತ್ತು ಕೊಡಗು ಜಿಲ್ಲೆಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.ಬಳಿಕ ಭಕ್ತರು ಹರ್ಷೋದ್ಘಾರದಿಂದ ರಥವನ್ನು ಎಳೆದು ಹಣ್ಣು ಧವನ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಬ್ಯಾಂಡ್ ಸೆಟ್ ಹಾಗೂ ಮಂಗಳವಾದ್ಯವು ಉತ್ಸವಕ್ಕೆ ಮೆರಗು ನೀಡಿತು. ಜಿಲ್ಲೆಯ ವಿವಿಧ ಭಾಗಗಳ ಆಸ್ತಿಕ ಸದ್ಭಕ್ತರು ಹಾಗೂ ಸುತ್ತಮುತ್ತಲ ಹತ್ತಾರು ಹಳ್ಳಿಗಳಿಂದ ಆಗಮಿಸಿದ್ದ ಗ್ರಾಮಸ್ಥರು ಸರದಿ ಸಾಲಿನಲ್ಲಿ ನಿಂತು ಶ್ರೀ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು.
ರಥೋತ್ಸವ ಹಾಗೂ ಜಾತ್ರೆ ಸಂದರ್ಭದಲ್ಲಿ ಸಕಲ ರೀತಿಯಲ್ಲೂ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಕೊಣನೂರು ಪೋಲೀಸ್ ಸಿಬ್ಬಂದಿ ಶ್ರಮಿಸಿದರು.ಜಾತ್ರೆ ಹಾಗೂ ರಥೋತ್ಸವದ ಅಂಗವಾಗಿ ಜಾತ್ರಾ ಆವರಣ, ರಂಗನಾಥಸ್ವಾಮಿ, ಚಾಮುಂಡೇಶ್ವರಿ ದೇವಾಲಯಗಳು ಮತ್ತು ರಸ್ತೆಯ ಇಕ್ಕೆಲಗಳೂ ವಿವಿಧ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕೃವಾಗಿದ್ದು ಜಗಮಗಿಸಿದವು.
ರಥೋತ್ಸವ ಸಂದರ್ಭದಲ್ಲಿ ಮಠದ ಭಕ್ತರು ಹಾಗೂ ಸುಮಾರು 60ಕ್ಕಿಂತ ಹೆಚ್ಚು ಗ್ರಾಮಗಳ ಭಕ್ತರು ಭಾಗಿಯಾಗುವ ಮೂಲಕ ರಥೋತ್ಸವಕ್ಕೆ ಸಾಕ್ಷಿಯಾದರು.ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.