ಕಾಂಗ್ರೆಸ್ ಸರ್ಕಾರದಿಂದ ಹಿಂದುಗಳಿಗೆ ಉಳಿಗಾಲವಿಲ್ಲ.

KannadaprabhaNewsNetwork | Published : Apr 7, 2024 1:50 AM

ಸಾರಾಂಶ

ಕಾಂಗ್ರೆಸ್ ಸರ್ಕಾರದಿಂದ ಹಿಂದುಗಳಿಗೆ ಉಳಿಗಾಲವಿಲ್ಲ. ದೇಶ ರಕ್ಷಣೆಯೂ ಇಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಾಂಗ್ರೆಸ್ ಸರ್ಕಾರದಿಂದ ಹಿಂದುಗಳಿಗೆ ಉಳಿಗಾಲವಿಲ್ಲ. ದೇಶ ರಕ್ಷಣೆಯೂ ಇಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶ ಉಳಿಯಬೇಕಾದರೆ, ನಾವು ಉಳಿಯಬೇಕಾದರೆ ಬಿಜೆಪಿಗೆ ಮತ ಹಾಕಿ. ನಾಶವಾಗಬೇಕಿದ್ದರೆ, ನಮ್ಮನ್ನು ನಾವೇ ಕೊಲ್ಲಬೇಕಿದ್ದರೆ, ಬೇರೆ ಪಕ್ಷಕ್ಕೆ ಮತಹಾಕಬೇಕಾಗುತ್ತದೆ. ಹಾಗಾಗಿ ಮತದಾರರು ಬಹಳ ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂದರು.ವಿಜಯಪುರ ಲೋಕಸಭಾ ಮತಕ್ಷೇತ್ರದಲ್ಲಿ ಬಹಳಷ್ಟು ಶ್ರಮ ಹಾಕಬೇಕು. ನಾನು ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಎಲ್ಲ ಕಡೆಗೂ ಬರುತ್ತೇನೆ. ಯಾರೊಂದಿಗೂ ಭಿನ್ನಾಭಿಪ್ರಾಯ ಇಲ್ಲ. ಮೊದಲು ನಾವು ಮೋದಿ ಅವರನ್ನು ಗೆಲ್ಲಿಸಿಕೊಂಡು ಬರಬೇಕು. ನಾನು ಎಲ್ಲ ಕಡೆಗೂ ಪ್ರಚಾರಕ್ಕೆ ಹೋಗಬೇಕು. ನಮ್ಮ ಡಿಮ್ಯಾಂಡ್ ಉಡುಪಿ, ಚಿಕ್ಕಮಗಳೂರವರೆಗೂ ಇದೆ. ಕಾರ್ಯಕರ್ತರು ನಮ್ಮ ಪಕ್ಷದ ಎಂ.ಪಿಗಳನ್ನು ಆರಿಸಿತರುವಲ್ಲಿ ಶ್ರಮಿಸಬೇಕು. ಇದು ದೇಶದ ಚುನಾವಣೆ. ಇಲ್ಲಿ ಬೇಧಭಾವ ಮಾಡುವುದು ಬೇಕಾಗಿಲ್ಲ. ನಾನು ನೇರವಾಗಿ ಮಾತನಾಡುವ ವ್ಯಕ್ತಿ. ಹಿಂದೊಂದು ಮುಂದೊಂದು ಮಾತಾಡಲು ಬರುವುದಿಲ್ಲ. ಪ್ರಾಮಾಣಿಕವಾಗಿ ಪ್ರಚಾರ ಮಾಡಿ ಜಿಗಜಿಣಗಿ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಹೇಳಿದರು.

ವಿಜಯಪುರ ಜನತೆಯ ಮೇಲೆ ಬಿಜೆಪಿ ವರಿಷ್ಠರ ಕೃಪೆಯಿದೆ. ನಾನೂ ಅಟಲ್ ಜೀ ಸರ್ಕಾರದಲ್ಲಿ ಕೇಂದ್ರ ಮಂತ್ರಿಯಾಗಿದ್ದೇನೆ. ಜಿಗಜಿಣಗಿಯವರೂ ಮಂತ್ರಿಯಾಗಿದ್ದಾರೆ. ಹಾಗಾಗಿ ವಿಜಯಪುರದವರು ಅದೃಷ್ಟವಂತರು. ಮೋದಿ ಎರಡು ಅವಧಿಯಲ್ಲಿ ಯಶಸ್ವಿಯಾಗಿ ಸರ್ಕಾರ ನಡೆಸಿದ್ದಾರೆ. ಹಿಂದೆ ಕಾಂಗ್ರೆಸ್ ಅತ್ಯಂತ ಭ್ರಷ್ಟ ಸರ್ಕಾರವಾಗಿತ್ತು. ಮೋದಿ ಅವರ ಬಗ್ಗೆ ಒಂದೇ ಒಂದು ಭ್ರಷ್ಟಾಚಾರ ಆರೋಪ ಇದ್ದರೆ, ತೆಗೆದುಕೊಂಡು ಬನ್ನಿ ಎಂದು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ವಿಜಯಪುರ ನಗರದ ಯುವ ಮುಖಂಡ ಹರ್ಷಗೌಡ ಪಾಟೀಲ್ ಬಿಜೆಪಿ ಸೇರ್ಪಡೆಯಾಗಿರುವ ವಿಚಾರಕ್ಕೆ ಶಾಸಕ ಯತ್ನಾಳ ವ್ಯಂಗ್ಯವಾಡಿದ್ದಾರೆ. ಇದನ್ನೆಲ್ಲಾ ನಾವು ನೋಡಿ ಬಿಟ್ಟಿದ್ದೇವೆ. ಇಲ್ಲೊಬ್ಬ ಬಿಜೆಪಿಯ ಅಭ್ಯರ್ಥಿ ಇದ್ದಾನೆ. ಬಸವನ ಬಾಗೇವಾಡಿಯಲ್ಲಿ ಯಾಕೆ ಬಿಜೆಪಿ ಪರ ಪ್ರಚಾರ ಮಾಡಲಿಲ್ಲ ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ವಿಜುಗೌಡ ಪಾಟೀಲ್ ವಿರುದ್ಧ ಕಿಡಿಕಾಡಿದರು.

ಕೋಟ್ಯಂತರ ಜನರ ರಕ್ತ ಹಾಗೂ ಶ್ರಮದ ಫಲವಾಗಿ ಇಂದು ಬಿಜೆಪಿ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಬಾರಿ ಸಂಸದ ರಮೇಶ ಜಿಗಜಿಣಗಿ ಅವರನ್ನು ಕನಿಷ್ಠ ೨ ರಿಂದ ೩ ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಳುಗೌಡ ಪಾಟೀಲ, ಶಂಕರ ಹೂಗಾರ, ಬಿಜೆಪಿ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿ, ಮಾಜಿ ವಿ.ಪ.ಸದಸ್ಯ ಅರುಣ್ ಶಹಪೂರ, ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಮುಂತಾದವರು ಇದ್ದರು.

Share this article