ಕುಷ್ಟಗಿ:
ಪಟ್ಟಣದ ಪುರಸಭೆಯ ಕಾರ್ಯಾಲಯದ ಎದುರು ಕುಷ್ಟಗಿ ತಾಲೂಕು ರಾಜ್ಯ ಪೌರ ನೌಕರರ ಸೇವಾ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಯಿತು.ಸಂಘದ ಅಧ್ಯಕ್ಷ ಶಾಂತಪ್ಪ ಮಾತನಾಡಿ ನಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಘಟಕದ ಆದೇಶದಂತೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದ್ದೇವೆ ಎಂದರು.
ಸರ್ಕಾರಿ ನೌಕರರಿಗೆ ನೀಡುವ ಪ್ರತಿಯೊಂದು ಸವಲತ್ತು ಪೌರಸೇವಾ ನೌಕರರಿಗೆ ಪ್ರತ್ಯೇಕ ಆದೇಶವಿಲ್ಲದೇ ವಿಸ್ತರಿಸಬೇಕು, ನಗರ, ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ ಹಾಗೂ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಇರುವ ನೌಕರರನ್ನು ಸಕ್ರಮಾತಿಗೊಳಿಸುವುದು, ನಗರಸಭೆಯಲ್ಲಿ ಶೇ. 100ರಷ್ಟು ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ಮಾಡುವುದು, 2022ನೇ ಸಾಲಿನ ವಿಶೇಷ ನೇಮಕಾತಿಯಡಿ ಆಯ್ಕೆಯಾದ ಪೌರಕಾರ್ಮಿಕರು ಹಾಗೂ ಲೋಡರ್ಗಳಿಗೆ ಎಸ್ಎಫ್ಸಿ ವೇತನ ನಿಧಿಯಿಂದ ವೇತನ ಪಾವತಿಸುವುದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರನ್ನು ವಿಶೇಷ ನೇಮಕಾತಿ ಅಡಿ ಪರಿಗಣಿಸುವುದು, ಪೌರಸೇವಾ ನೌಕರರಿಗೆ ಜ್ಯೋತಿ ಸಂಜೀವಿನಿ ಹಾಗೂ ಚಿಕಿತ್ಸಾ ಸೌಲಭ್ಯ ಒದಗಿಸುವುದು, ಐಟಿ ಸಿಬ್ಬಂದಿ, ಅಕೌಂಟೆಂಟ್ ಕನ್ಸಲೆಂಟ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕ, ಸ್ಯಾನಟರಿ ಸೂಪರ್ವೈಸರ್ ಹಾಗೂ ಇತರೆ ವೃಂದದ ನೌಕರರನ್ನು ಪೌರಸೇವಾ ನೌಕರರೆಂದು ಪರಿಗಣಿಸಿ ವೀಲಿನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.ಪುರಸಭೆ ಅಧ್ಯಕ್ಷ ಭೇಟಿ:
ಪ್ರತಿಭಟನಾ ಸ್ಥಳಕ್ಕೆ ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ ಭೇಟಿ ನೀಡಿ, ಕಾರ್ಮಿಕರಿಲ್ಲದೆ ನಗರ, ಪಟ್ಟಣವನ್ನು ಊಹಿಸಲು ಸಾಧ್ಯವಿಲ್ಲ. ಸ್ವಚ್ಛ ನಗರಕ್ಕೆ ಅವರ ಸೇವೆ ಅಪಾರವಾಗಿದ್ದು ಅವರ ನ್ಯಾಯಯುತ ಬೇಡಿಕೆಗೆ ನನ್ನ ಬೆಂಬಲವಿದೆ ಎಂದರು.ಈ ವೇಳೆ ಅಮಿನುದ್ದೀನ್ ಮುಲ್ಲಾ. ಬಸವರಾಜ ಬುಡಕಂಟಿ, ಈರಪ್ಪ ನಾಯಕ ಹನುಮೇಶ ಭೋವಿ, ನೌಕರರ ಸಂಘದ ಉಪಾಧ್ಯಕ್ಷ ಚಿರಂಜೀವಿ, ಕಾರ್ಯದರ್ಶಿ ರವಿಕುಮಾರ, ಸಂತೋಷಕುಮಾರ, ಮಂಜುನಾಥ ಸೇರಿದಂತೆ ಅನೇಕರು ಇದ್ದರು.