ತಂಬಾಕು ಉತ್ಪನ್ನ ಬಳಕೆ ನಿಷೇಧಕ್ಕೆ ಸಹಕರಿಸಿ

KannadaprabhaNewsNetwork | Published : Dec 16, 2023 2:00 AM

ಸಾರಾಂಶ

ಜನರಲ್ಲಿ ಅರಿವು ಮೂಡಿಸಲು ಜಿಲ್ಲಾಡಳಿತದಿಂದ ಗುಲಾಬಿ ಆಂದೋಲನ, ಜಾಗೃತಿ ಜಾಥಾ ನಡೆಯಿತು. ಈ ವೇಳೆ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಅರಿವು ಮೂಡಿಸುವ ಚಳವಳಿ ಕೂಡ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಸಮಿಕ್ಷಾ ಘಟಕ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಆಶ್ರಯದಲ್ಲಿ ನಗರ ಹಾಗೂ ತಾಲೂಕುಗಳಲ್ಲಿ ಈಚೆಗೆ ಗುಲಾಬಿ ಆಂದೋಲ ಕಾರ್ಯಕ್ರಮ ನಡೆಯಿತು.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಗುಲಾಬಿ (ತಂಬಾಕು ನಿಯಂತ್ರಣ ಆಂದೋಲನ) ಕಾರ್ಯಕ್ರಮ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ಗುಲಾಬಿ ಚಳುವಳಿ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಾಗಿ ವಿದ್ಯಾರ್ಥಿ ಸಮುದಾಯದಿಂದ ಶಿಕ್ಷಣ ಸಂಸ್ಥೆಯ ಆವರಣದಿಂದ ೧೦೦ ಗಜ ಅಂತರದ ಒಳಗೆ ತಂಬಾಕು ಉತ್ಪನ್ನಗಳ ವ್ಯಾಪಾರ ಸಂಪೂರ್ಣ ಸ್ಥಗಿತಗೊಳಿಸುವ ಮೂಲಕ ಆರೋಗ್ಯವಂತ ಯುವ ಸಮಾಜವನ್ನು ಕಟ್ಟುವ ಹೊಸ ಪ್ರಯತ್ನವನ್ನು ಹೊಂದಲಾಗಿದೆ. ಇದರ ಜವಾಬ್ದಾರಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯದ್ದು. ಸಂಬಂಧಿಸಿದ ನಾಮಫಲಕಗಳನ್ನು ಪ್ರತಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಯ ಮುಂದೆ ಪ್ರದರ್ಶಿಸಲು ಮತ್ತು ಕಾಯ್ದೆಯನ್ನು ಉಲ್ಲಂಘಿಸಿದರೆ ತನಿಖಾ ದಳದ ಅಧಿಕಾರಿಗಳು ದಾಳಿಯನ್ನು ನಡೆಸುವುದರ ಮೂಲಕ ದಂಡ ಹಾಕಲಿದ್ದಾರೆ, ಆದ್ದರಿಂದ ಅದಕ್ಕೆ ಅವಕಾಶ ನೀಡಬೇಡಿ ಎಂದು ವಿದ್ಯಾರ್ಥಿ ಸಮುದಾಯದ ಮೂಲಕ ಜಿಲ್ಲೆಯಾದ್ಯಾಂತ ಏಕಕಾಲದಲ್ಲಿ ಅರಿವು ಮೂಡಿಸುವ ಚಳವಳಿ ಮಾಡಲಾಯಿತು.

ವಿವಿಧ ವಿದ್ಯಾರ್ಥಿಗಳು ಒಂದು ಗುಲಾಬಿ ಹೂ ಮತ್ತು ತಂಬಾಕು ಉತ್ಪನ್ನಗಳ ಸೇವನೆ ದುಷ್ಟರಿಣಾಮದ ಬಗ್ಗೆ ಜಾಥಾದುದ್ದಕ್ಕೂ ವಿವರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ವಿಜಯಪುರ ತಹಸೀಲ್ದಾರ ಕವಿತಾ ಮಾತನಾಡಿ, ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಅಪಾರ. ಸುಶಿಕ್ಷಿತ ಹಾಗೂ ವಿದ್ಯಾವಂತ ಸಮಾಜ ದೇಶದ ಬೆನ್ನೆಲುಬು ಎಂದರು.

ತಾಪಂ ಇಒ ಕೆ.ಹೊಂಗಯ್ಯಾ, ಸರ್ಕಾರಿ ಬಾಲಕಿಯರ ಪಪೂ ಕಾಲೇಜಿನ ಪ್ರಾಂಶುಪಾಲರು, ಆರೋಗ್ಯ ಇಲಾಖೆಯ ಡಾ.ಪಿ.ಎ.ಹಿಟ್ನಳ್ಳಿ, ಡಾ.ಕವಿತಾ ದೊಡಮನಿ ಸುರೇಶ ಹೊಸಮನಿ, ಎನ್.ಆರ್.ಬಾಗವಾನ, ಇತರರು ಉಪಸ್ಥಿತರಿದ್ದರು.

Share this article