ಕನ್ನಡಪ್ರಭ ವಾರ್ತೆ ನಾಪೋಕ್ಲು
ನವಕೊಡಗಿಗೆ ಭದ್ರ ಬುನಾದಿಯೊಂದಿಗೆ ಕೊಡಗಿನಲ್ಲಿ ವೀರಶೈವ ಧರ್ಮ ಪಸರಿಸಲು ಹಾಲೇರಿ ರಾಜರ ಕೊಡುಗೆ ಅಪಾರ ಎಂದು ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಿವಪ್ಪ ವಿ.ವಿ. ಅಭಿಪ್ರಾಯಪಟ್ಟಿದ್ದಾರೆ.ಸುವರ್ಣ ಕರ್ನಾಟಕ ೫೦ ರ ಸಂಭ್ರಮ ಪ್ರಯುಕ್ತ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಳ್ಳಾಗಿದ್ದ ದಿ. ಶಾಂತಮಲ್ಲ ಸ್ವಾಮಿಗಳ ದತ್ತಿ ಮತ್ತು ದಿ. ಎಂ.ಜಿ. ಪದ್ಮನಾಭ ಕಾಮತ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೊಡಗಿನ ವೀರಶೈವ ಅರಸರು ಈ ಕುರಿತ ಅವರು ಉಪನ್ಯಾಸ ನೀಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಇಂದಿನ ನೂತನ ಕೊಡಗಿಗೆ ವೀರಶೈವ ದೊರೆಗಳಾದ ಹಾಲೇರಿ ದೊರೆಗಳ ಕೊಡುಗೆ ಅಪಾರ ಎಂದು ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಸಂಸ್ಕೃತಿ ಕಾರ್ಯಗಳಿಗೆ ದುಡಿದ ಉದ್ಯಮಿಗಳ ಕುರಿತಾದ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ರೇವತಿ ರಮೇಶ್ ಅವರು, ಕನ್ನಡ ಸಾಹಿತ್ಯ ಬೆಳವಣಿಗೆಗೆ ಸಾಹಿತಿಗಳಷ್ಟೇ ಕೊಡುಗೆ ಉದ್ಯಮಿಗಳು ಮತ್ತು ಇತರ ಕ್ಷೇತ್ರದ ಸಾಹಿತ್ಯ ಆರಾಧಕರ ಕೊಡುಗೆಗಳು ಎಂದು ಕೆಲವು ಕೊಡುಗೆಗಳನ್ನು ನೆನೆದರು.ಪ್ರಾಸ್ತಾವಿಕ ಮಾತುಗಳನ್ನಾಡಿದ ಮಡಿಕೇರಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಕಾರ್ಯಕ್ರಮ ಆಯೋಜನೆಯ ಉದ್ದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಾಪೋಕ್ಲು ಕಾಲೇಜಿನ ಪ್ರಾಂಶುಪಾಲ ಡಾ. ಕಾವೇರಿ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಪೂರಕವಾಗುತ್ತವೆ ಹಾಗೂ ಹೊಸ ಪೀಳಿಗೆಗೆ ಕನ್ನಡದ ಒಲವು ಹೆಚ್ಚಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.ಕಾಲೇಜಿನ ಐಕ್ಯುಎಸಿ ಸಂಚಾಲಕ ನಂದೀಶ್, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ
ಪದ್ಮಾವತಿ ಹಾಗೂ ದೇವಯ್ಯ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡರು.ಉಪನ್ಯಾಸಕ ರಂಗಸ್ವಾಮಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸುಕ್ರುಮಣಿ ಲುಕಿಮಣಿ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕಿ ಹರಿಣಿ ನಿರೂಪಿಸಿದರು. ದ್ವಿತೀಯ ಬಿಎ ವಿದ್ಯಾರ್ಥಿನಿ ರಂಜಿತಾ ವಂದಿಸಿದರು.