ವಿಶೇಷವಾಗಿ ಗ್ರಾಮಗಳ ಎಸ್ಸಿ.ಎಸ್ಟಿ ಬುಡಕಟ್ಟು ಜನರ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು ಇದರ ನಿಯಂತ್ರಣ ಮಾಡಬೇಕು ಎಂದು ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಮೇಲಿನ ದೌರ್ಜನ್ಯ ನಿಯಂತ್ರಣ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ನಾಮನಿರ್ದೇಶಿತ ಸದಸ್ಯ, ಡಿಎಸ್ಎಸ್ ಮುಖಂಡ ಕುರುವ ಮಂಜುನಾಥ್ ಹೇಳಿದರು.
ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ವಿಶೇಷವಾಗಿ ಗ್ರಾಮಗಳ ಎಸ್ಸಿ.ಎಸ್ಟಿ ಬುಡಕಟ್ಟು ಜನರ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು ಇದರ ನಿಯಂತ್ರಣ ಮಾಡಬೇಕು ಎಂದು ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಮೇಲಿನ ದೌರ್ಜನ್ಯ ನಿಯಂತ್ರಣ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ನಾಮನಿರ್ದೇಶಿತ ಸದಸ್ಯ, ಡಿಎಸ್ಎಸ್ ಮುಖಂಡ ಕುರುವ ಮಂಜುನಾಥ್ ಹೇಳಿದರು.
ಪಟ್ಟಣದ ಉಪ ವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಪೊಲೀಸ್, ಕಂದಾಯ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಬುಡಕಟ್ಟುಗಳ ಸಮಿತಿ ಸಭೆಯಲ್ಲಿ ಮಾತನಾಡಿದರು.
ವ್ಯಾಪಕ ಮದ್ಯ ಸೇವನೆಯಿಂದ ಈ ಸಮುದಾಯಗಳ ಜನ ತಾವು ದುಡಿದ ಹಣವನ್ನು ಮದ್ಯಸೇವನೆಗೆ ವ್ಯಯ ಮಾಡುವುದರಿಂದ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿಯಾಗುತ್ತದೆ ಎಂದು ಹೇಳಿದರು.
ಹೊನ್ನಾಳಿ ಅಬಕಾರಿ ಇಲಾಖೆ ಅಧಿಕಾರಿ ಪ್ರಕಾಶ್ ಮಾತನಾಡಿ, ವಿಶೇಷವಾಗಿ ತಮ್ಮ ಇಲಾಖೆ ಗ್ರಾಮೀಣ ಪ್ರದೇಶಗಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ನಿಗಾ ಇರಿಸಿ ಪರಿಶೀಲನೆ ಮಾಡಲಾಗುತ್ತಿರುತ್ತದೆ ಆದಾಗ್ಯ ಕೂಡ ಮುಂದಿನ ದಿನಗಳಲ್ಲಿ ವಿಶೇಷವಾಗಿ ಅನುಸೂಚಿತ ಜಾತಿ ಬುಡಕಟ್ಟು ಜನ ವಾಸಿಸುವ ಪ್ರದೇಶಗಳ ಮೇಲೆ ಕೂಡ ಹೆಚ್ಚಿನ ಗಮನಹರಿಸಲಾಗುವುದು ಎಂದರು.
ನಂತರ ಪಟ್ಟಣದ ದೇವನಾಯ್ಕನಹಳ್ಳಿ ಪ್ರದೇಶದಲ್ಲಿ ಹಲವಾರು ದಶಕಗಳಿಂದ ಸುಮಾರು 70ಕ್ಕೂ ಹೆಚ್ಚು ಬುಡಕಚ್ಚು ಜನ ವಾಸಿಸುತ್ತಿದ್ದು ಇಲ್ಲಿಯವರೆಗೂ ಕೂಡ ಅವರಿಗೆ ಮನೆಗಳಿಲ್ಲ. ಎಲ್ಲಾ ರಾಜಕೀಯ ಮುಖಂಡರಿಗೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಸಾಕಾಗಿದೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಎಚ್.ಬಿ.,ಚನ್ನಪ್ಪ ಅವರು ಈ ಕುರಿತು ತಾನು ಸ್ಥಳ ಪರಿಶೀಲನೆ ಮಾಡಿ ನಂತರ ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಹೇಳಿದರು
ಎಸ್ಸಿ.ಎಸ್ಟಿ, ಬುಡಕಟ್ಟು ಜನಾಂಗದವರ ಮೇಲೆ ನಡೆಯುವ ದೌರ್ಜನ್ಯ ಮತ್ತು ಜಾತಿ ನಿಂಧನೆ ಪ್ರಕರಣಗಳನ್ನು ನಿರ್ವಹಣೆ ಮಾಡಲು ಇದೀಗ ನಾಗರಿಕ ಹಕ್ಕು ಜಾರಿಗಾಗಿ ರಾಜ್ಯದಲ್ಲಿ ಜಿಲ್ಲೆಗೊಂದರಂತೆ ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ ಎಂದು ದಾವಣಗೆರೆ ಪೊಲೀಸ್ ಅಧಿಕಾರಿ ಸಂಜೀವ್ ಸಭೆಗೆ ಮಾಹಿತಿ ನೀಡಿ ಒಟ್ಟು 22 ಪ್ರಕರಣಗಳು ದಾಖಲಾಗಿದೆ ಎಂದರು.
ಅಧಿಕಾರಿಗಳ ಗೈರು ಉಪವಿಭಾಗಾಧಿಕಾರಿ ಗರಂ:
ಸಭೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಗೈರು ಆಗಿದ್ದನ್ನು ಗಮನಿಸಿ ಅನುಸೂಚಿತ ಜಾತಿ ಮತ್ತು ಬುಡಕಟ್ಟು ದೌರ್ಜನ್ಯ ನಿಯಂತ್ರಣ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯಲ್ಲಿ ಬಹು ಮುಖ್ಯವಾದ ವಿಷಯಗಳು ಚರ್ಚಿಸುವ ಸಂದರ್ಭಗಳಿದ್ದು, ಸಂಬಂಧಿಸಿದ ಅಧಿಕಾರಿಗಳೇ ಗೈರು ಹಾಜರಾದರೆ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಅಡೆತಡೆಯಾಗುತ್ತದೆ ಎಂದು ಸಭೆಯಲ್ಲಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾ ಅವರಿಗೆ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಪತ್ರ ಬರೆದು ಮುಂದಿನ ಸಭೆಗೆ ತಪ್ಪದೇ ಹಾಜರಾಗುವಂತೆ ತಿಳಿಸಲು ಸೂಚನೆ ನೀಡಿದರು.
ಹೊನ್ನಾಳಿ ತಹಸೀಲ್ದಾರ್ ರಾಜೇಶ್ ಕುಮಾರ್, ತಾಪಂ, ಇಒ ಅಶೋಕ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ,ತಾಪಂ ಇಒ ರಾಘವೇಂದ್ರ, ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.