ಬಳ್ಳಾರಿ: ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ಭಯೋತ್ಪಾದನೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ನಕ್ಸಲ್ ಹಾವಳಿಗೂ ಕಡಿವಾಣ ಬಿದ್ದಿದೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಹೇಳಿದರು.
ಮೋದಿ ಕ್ಯಾಬಿನೆಟ್ನ ಒಬ್ಬ ಸಚಿವನ ಮೇಲೆ ಕಪ್ಪು ಚುಕ್ಕೆ ಇಲ್ಲ. ಸಿಎಂ ಸಿದ್ದರಾಮಯ್ಯ ಕೇಂದ್ರದವರು ಕರ್ನಾಟಕಕ್ಕೆ ಏನು ಮಾಡಿಲ್ಲ ಅಂತಾರೆ. ಸಾರ್ವಜನಿಕ ವೇದಿಕೆಗೆ ಬನ್ನಿ ಚರ್ಚೆ ಮಾಡಿ, ನಿಮ್ಮ ಸುಳ್ಳಿಗೆ ಫುಲ್ ಸ್ಟಾಪ್ ಹಾಕುತ್ತೇವೆ ಎಂದು ಸವಾಲು ಹಾಕಿದರು.
ಸದ್ಯ 14 ಲೋಕಸಭಾ ಕ್ಷೇತ್ರದ ಮೇಲೆ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಹೆಚ್ಚು ಪ್ರಭಾವ ಬೀರುವುದಿಲ್ಲ. ಉಪ್ಪುತಿಂದವರು ನೀರು ಕುಡಿಯಬೇಕು. ಕಾನೂನು ಪ್ರಕಾರ ಮುಂದಿನ ಕ್ರಮಗಳಾಗುತ್ತವೆ. ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ನಾನು ಹೆಚ್ಚು ಕಾಮೆಂಟ್ ಮಾಡುವುದಿಲ್ಲ. ಪ್ರಜ್ವಲ್ ಪ್ರಕರಣದಿಂದ ಹಳೆಯ ಮೈಸೂರು ಭಾಗದಲ್ಲಿ ನಮಗೆ ಸ್ವಲ್ಪ ಹಿನ್ನೆಡೆಯಾಗಿರಬಹುದು. ಪ್ರಜ್ವಲ್ ರೇವಣ್ಣ ಪ್ರಕರಣ ಈಗ ಸದ್ದು ಮಾಡಿದಷ್ಟು, ಆ ಭಾಗದ ಚುನಾವಣೆ ಮುನ್ನ ಸದ್ದು ಮಾಡಿದ್ರೆ ಹಿನ್ನೆಡೆ ಆಗುತ್ತಿತ್ತು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕ, ಮಾಜಿ ಜಿಲ್ಲಾಧ್ಯಕ್ಷ ಮುರಹರ ಗೌಡ, ಬಿಜೆಪಿ ಮುಖಂಡರಾದ ರಾಮಚಂದ್ರಪ್ಪ, ಡಾ. ಬಿ.ಕೆ. ಸುಂದರ್ ಸುದ್ದಿಗೋಷ್ಠಿಯಲ್ಲಿದ್ದರು.