ಕಾರ್ಕಳ: ರ್ಯಾಗಿಂಗ್ ಎಂಬುದು ಕ್ರಿಮಿನಲ್ ಅಪರಾಧವಾಗಿದ್ದು, ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತದೆ ಎಂದು ಕಾರ್ಕಳ ಕ್ರೈಂ ವಿಭಾಗದ ಪೋಲೀಸ್ ಅಧಿಕಾರಿ ನವೀನ್ ಬೋರ್ಕರ್ ಅಭಿಪ್ರಾಯಪಟ್ಟರು.ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಜರಗಿದ ಆ್ಯಂಟಿ ರ್ಯಾಗಿಂಗ್ ಸಮಿತಿ ಸಭೆಯಲ್ಲಿ ಮಾತನಾಡಿದರು.ರ್ಯಾಗಿಂಗ್ ಎಂಬುದು ನಮ್ಮ ಸಂಸ್ಕೃತಿ ಮತ್ತು ಸಭ್ಯತೆಗೆ ವಿರುದ್ಧವಾಗಿದೆ. ಎಲ್ಲ ವಿದ್ಯಾರ್ಥಿಗಳು ಓದು ಮತ್ತು ಸಾಧನೆಯ ಕಡೆಗೆ ಗಮನ ಕೊಡಬೇಕು. ಯಾರಾದರೂ ರ್ಯಾಗಿಂಗ್ ಗೆ ಪ್ರೇರಣೆ, ರ್ಯಾಗಿಂಗ್ ಮೂಲಕ ಕಿರುಕುಳ ನೀಡಿದಲ್ಲಿ ಕಾಲೇಜಿನ ಆ್ಯಂಟಿ ರ್ಯಾಗಿಂಗ್ ಸಮಿತಿ ಗಮನಕ್ಕೆ ತರಬೇಕು ಎಂದರು. ಮಾದಕ ದ್ರವ್ಯ ವ್ಯಸನಗಳಿಂದ ಆಗುವ ಸಮಸ್ಯೆ ಮತ್ತು ಕಾನೂನು ತೊಡಕಿನಲ್ಲಿ ಸಿಲುಕಿಕೊಂಡರೆ ಮುಂದೆ ಆಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದರು.
ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ. ನಾಗೇಶ್ ಪ್ರಭು ವಂದಿಸಿದರು. ಮಾನವಿಕ ವಿಭಾಗದ ಮುಖ್ಯಸ್ಥ ಹಾಗೂ ಬಾಲಕರ ಹಾಸ್ಟೆಲ್ ನ ಚೀಫ್ ವಾರ್ಡನ್ ಡಾ. ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.