ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೃಷ್ಣಾ ಮೇಲ್ದಂಡೆ ಯೋಜನೆಯ ಹಿನ್ನೀರಿನಿಂದ ಬಾಗಲಕೋಟೆ ನಗರದ ಬಹುತೇಕ ಭಾಗಗಳು ಮುಳುಗಡೆಯಾಗಿದ್ದು, ಸಂತ್ರಸ್ತ ಪ್ರದೇಶಗಳಲ್ಲಿನ ಉಳಿದ ಕಟ್ಟಡಗಳನ್ನು ತಕ್ಷಣವೇ ವಶಕ್ಕೆ ಪಡೆದು ನಿವೇಶನ ಹಾಗೂ ಪರಿಹಾರ ವಿತರಿಸಬೇಕೆಂದು ಬಾಗಲಕೋಟೆ ನಡುಗಡ್ಡೆ ಹೋರಾಟ ಸಮಿತಿ ಅಧ್ಯಕ್ಷ ಎ.ಎ.ದಂಡಿಯಾ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಗಳು ವಾರ್ಡ್ ಸಂಖ್ಯೆ 1, 2, 3, 6, 7 ಹಾಗೂ 9ರಲ್ಲಿದ್ದ ಅರ್ಧಕ್ಕಿಂತ ಹೆಚ್ಚು ಕಟ್ಟಡಗಳನ್ನು ಸ್ವಾಧೀನಪಡಿಸಿಕೊಂಡು ನಿವೇಶನ ಮತ್ತು ಪರಿಹಾರ ವಿತರಿಸಿದ್ದಾರೆ. ಆದರೆ, ಇದೇ ವಾರ್ಡಗಳಲ್ಲಿ ಇನ್ನೂ ಸುಮಾರು 1500 ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳದೆ ಹಾಗೆಯೇ ಬಿಡಲಾಗಿದೆ. ಇದನ್ನು ವಶಕ್ಕೆ ಪಡೆಯಲು 2012 ರಿಂದಲೂ ಹೋರಾಟ ನಡೆಸಲಾಗುತ್ತಿದೆ ಎಂದರು.ಅವೈಜ್ಞಾನಿಕವಾಗಿ ಕಟ್ಟಡಗಳನ್ನು ನೆಲಸಮಗೊಳಿಸಿರುವುದರಿಂದ ಮಳೆನೀರು ಮತ್ತು ನದಿನೀರು ನಿಂತು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಸೊಳ್ಳೆಗಳು ಮತ್ತು ಕ್ರಿಮಿಕೀಟಗಳ ಹಾವಳಿಯಿಂದಾಗಿ ಸಣ್ಣ ಮಕ್ಕಳು ಶಾಲೆಗೆ ಹೋಗಲಾಗದಂತಹ ಭೀಕರ ವಾತಾವರಣ ನಿರ್ಮಾಣವಾಗಿದೆ. ವ್ಯಾಪಾರ-ವಹಿವಾಟು ಸ್ಥಗಿತಗೊಂಡಿದ್ದು, ರಸ್ತೆ ಸಂಪರ್ಕವೂ ಕಡಿತಗೊಂಡಿದೆ ಎಂದ ಅವರು, ಈ ಸಂಕಷ್ಟವನ್ನು ಗಮನಿಸಿ ಪ್ರದೇಶವನ್ನು ನಡುಗಡ್ಡೆ ಎಂದು ಘೋಷಿಸಿ, ಪ್ರಾಧಿಕಾರದ ಮುಖ್ಯ ಎಂಜಿನಿಯರಗಳು ಜಾಗ ಪರಿಶೀಲಿಸಿ 16-09-2016 ರಂದು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತಕ್ಕೆ ಸಮಗ್ರ ವರದಿ ಸಲ್ಲಿಸಿದ್ದರು. ತದನಂತರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಅನುಮೋದನೆ ದೊರೆತಿತ್ತು.

2013ರ ಭೂಸ್ವಾಧೀನ ಕಾಯ್ದೆಯನ್ವಯ 11-03-2025ರಂದು ಸಂತ್ರಸ್ತ ಕಟ್ಟಡ ಮಾಲೀಕರ ಸಭೆ ಕರೆದು ಸಲಹೆ-ಸೂಚನೆಗಳನ್ನು ಪಡೆದು 12-20-25ರಂದು ಕೃಷ್ಣಾ ಮೇಲ್ದಂಡೆ ಯೋಜನೆ (ನವನಗರ) ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇತ್ತೀಚೆಗೆ (11-08-2026 ರಂದು) ಬೆಳಗಾವಿಯಲ್ಲಿ ಆಯುಕ್ತರನ್ನು ವೈಯಕ್ತಿಕವಾಗಿ ಭೇಟಿಯಾಗಿ ಮನವಿ ಮಾಡಲಾಗಿದ್ದು, ಅವರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ ಎಂದರು.

ಸರ್ಕಾರಕ್ಕೆ ಹಣಕಾಸಿನ ಅಭಾವವಿರುವುದು ನಮ್ಮ ಅರಿವಿನಲ್ಲಿದೆ. ಆದ್ದರಿಂದ, ಹಣದ ಪರಿಹಾರಕ್ಕಿಂತ ಮೊದಲು ನಮಗೆ ನಿವೇಶನಗಳನ್ನು ಹಂಚಿಕೆ ಮಾಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ನಂತರದ ಹಂತದಲ್ಲಿ ಪರಿಹಾರಧನ ವಿತರಿಸಲಿ. ನಿವೇಶನ ಸಿಕ್ಕರೆ ನಮ್ಮ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯದ ಮಾರ್ಗ ಸುಗಮವಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಅರವಿಂದ ಮುಚಖಂಡಿ, ದೀಪಕ ಹಂಚಾಟೆ, ಅಶೋಕ ಘಾಟಗೆ ಉಪಸ್ಥಿತರಿದ್ದರು.