ಕಾಂಗ್ರೆಸ್ ಗೆಲುವಿಗೆ ಬಿಜೆಪಿ ಶಾಸಕರ ಸಹಕಾರ: ಮಿಥುನ್ ರೈ

KannadaprabhaNewsNetwork | Published : Apr 25, 2024 1:03 AM

ಕಾಂಗ್ರೆಸ್ ಪಕ್ಷದ ಪ್ರಚಾರವನ್ನು ನೀವು ಮಾಡಿದ್ದೀರಿ ಪಕ್ಷ ಸದಾ ಕಾಲ ನಮ್ಮ ಜತೆಗಿದೆ. ಹಾಗಾಗಿ ಈ ಬಾರಿ ನಾವೆಲ್ಲೂ ಶಾಸಕರನ್ನು ಟೀಕಿಸಲು ಹೋಗಿಲ್ಲ ಎಂದು ಮೂಡುಬಿದಿರೆಯಲ್ಲಿ ಕಾಂಗ್ರೆಸ್‌ ಯುವ ನಾಯಕ ಮಿಥುನ್‌ ರೈ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ನಮ್ಮ ಮೂಡುಬಿದಿರೆಯ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ನಮ್ಮ ಜತೆ ಒಳ್ಳೆ ಹೊಂದಾಣಿಕೆಯಲ್ಲಿದ್ದಾರೆ. ಈ ಸಲ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ನಮ್ಮ ಶಾಸಕರ ಪ್ರಾಮಾಣಿಕ ಪ್ರಯತ್ನ ಇದೆ. ಕಾಂಗ್ರೆಸ್ ಪಕ್ಷದ ಪ್ರಚಾರವನ್ನು ನೀವು ಮಾಡಿದ್ದೀರಿ ಪಕ್ಷ ಸದಾ ಕಾಲ ನಮ್ಮ ಜತೆಗಿದೆ. ಹಾಗಾಗಿ ಈ ಬಾರಿ ನಾವೆಲ್ಲೂ ಶಾಸಕರನ್ನು ಟೀಕಿಸಲು ಹೋಗಿಲ್ಲ ಎಂದು ಮೂಡುಬಿದಿರೆಯಲ್ಲಿ ಕಾಂಗ್ರೆಸ್‌ ಯುವ ನಾಯಕ ಮಿಥುನ್‌ ರೈ ಹೇಳಿದ್ದಾರೆ.

ಇತ್ತೀಚೆಗೆ ಮೂಲ್ಕಿಯಲ್ಲಿ ನಡೆದ ಬಿಲ್ಲವ ಮಹಾಮಂಡಲದ ಸಮಾವೇಶದಲ್ಲಿ ಬಿಲ್ಲವ ಸಮುದಾಯದವರು ಬಿಲ್ಲವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂಬುದಾಗಿ ಹೇಳಿದ್ದರೆನ್ನಲಾದ ಕುರಿತು ಮಾತನಾಡಿದ ಮಿಥುನ್ ರೈ, ಶಾಸಕರು ನಮಗೆ ಇಷ್ಟು ದೊಡ್ಡ ಸಹಕಾರ ಕೊಟ್ಟಿದ್ದಾರೆ. ಮುಂದಿನ ಚುನಾವಣೆವರೆಗೂ ಅವರು ಕ್ಷೇತ್ರದ ಜನರ ಸೇವಕರಾಗಿ ಇರಲಿ. ನಮ್ಮ ಪಕ್ಷಕ್ಕೆ ಬಲ ಕೊಡುವ ಕೆಲಸ ಶಾಸಕರು ಮಾಡಲಿ ಎಂದರು.ಅಭಿವೃದ್ಧಿ ಕಾರ್ಯಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿದ್ದವು. ಆದರೆ ಸಂಸದ ನಳಿನ್ ಕುಮಾರ್ ಕಟೀಲ್ ಈ ಕ್ಷೇತ್ರದಲ್ಲಿ ಜಾತಿ, ಧರ್ಮ ರಾಜಕರಣ ಮಾಡಿರುವುದು ಬಿಟ್ಟರೆ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ವಿಫಲರಾಗಿದ್ದಾರೆ. ಅವರದ್ದು ಬರೇ ಶೂನ್ಯ ಸಾಧನೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದ್ದಾರೆ.

ಕಳೆದ ೧೫ ವರ್ಷಗಳಲ್ಲಿ ಇಲ್ಲಿದ್ದ ನಂ.೧ ಸಂಸದರನ್ನು, ರಾಜ್ಯಾಧ್ಯಕ್ಷರಾಗಿದ್ದವರನ್ನೂ ಬದಲಾಯಿಸಬೇಕಾದ ಪರಿಸ್ಥಿತಿ ಬಿಜೆಪಿಗೆ ಬಂದಿದೆ. ಇದಕ್ಕೆ ಕಾರಣ ಅಭಿವೃದ್ಧಿ ಶೂನ್ಯವಾಗಿದೆ. ರಾಜ್ಯದಲ್ಲಿ ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಪಕ್ಷದ ಕುರಿತು ಜನರ ನಂಬಿಕೆಯನ್ನು ಗಟ್ಟಿಗೊಳಿಸಿವೆ. ಜಿಲ್ಲೆಯಲ್ಲಿ ಶಕ್ತಿ ಯೋಜನೆಗೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಫಲಾನುಭವಿಗಳಿರುವುದು ಗಮನಾರ್ಹ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪಕ್ಷದ ಪ್ರಮುಖರಾದ ವಸಂತ ಬೆರ್ನಾಡ್, ಚಂದ್ರಹಾಸ್ ಸನಿಲ್, ಸುರೇಶ್ ಕೋಟ್ಯಾನ್, ಪುರಂದರ ದೇವಾಡಿಗ, ರಾಜೇಶ್ ಕಡಲಕರೆ, ಮೂಡ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಮಹಮ್ಮದ್ ಅಸ್ಲಂ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಮಿಥುನ್‌ ರೈ ಮಾತು ಮೂರ್ಖತನದ ಪರಮಾವಧಿ: ಉಮಾನಾಥ್ ಕೋಟ್ಯಾನ್

ಮೂಲ್ಕಿ: ''''''''ಶಾಸಕ ಉಮಾನಾಥ ಕೋಟ್ಯಾನ್ ಕಾಂಗ್ರೆಸ್ ಜೊತೆ ಇದ್ದಾರೆ'''''''' ಎಂಬ ಕಾಂಗ್ರೆಸ್ ನಾಯಕ ಮಿಥುನ್ ರೈ ಹೇಳಿಕೆ ಮೂರ್ಖತನದ ಪರಮಾವಧಿಯಾಗಿದೆ. ನನಗೆ ದೇಶ ಮುಖ್ಯ, ಜಾತಿ ಮುಖ್ಯವಲ್ಲ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.ಮೂಲ್ಕಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅ‍ವರು, ಇತ್ತೀಚೆಗೆ ಮೂಲ್ಕಿಯಲ್ಲಿ ನಡೆದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಕಾರ್ಯಕ್ರಮದಲ್ಲಿ ಬಿಲ್ಲವ ಸಮುದಾಯ ಒಗ್ಗಟ್ಟಾಗಬೇಕು ಎಂಬ ನನ್ನ ಹೇಳಿಕೆಯನ್ನು ರಾಜಕೀಯಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಸುದ್ದಿ ಸುಳ್ಳಾಗಿದೆ. ರಾಜಕೀಯದಲ್ಲಿ ನನ್ನ ಬೆಂಬಲ ಬಿಜೆಪಿ ಪಕ್ಷಕ್ಕೆ. ಆದರೆ ಕಾಂಗ್ರೆಸ್ ನನ್ನ ಹೇಳಿಕೆಯನ್ನು ತಿರುಚಿ ಅನೇಕ ಗೊಂದಲ ಸೃಷ್ಟಿ ಮಾಡುತ್ತಿದೆ. ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿರುವ ಮಿಥುನ್ ರೈ ಕುಟಿಲ ರಾಜಕಾರಣಕ್ಕೆ ಜನ ಮರುಳಾಗುವುದಿಲ್ಲ. ನಾನು ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಬಿಜೆಪಿ ನಾಯಕರಾದ ಭುವನಾಭಿರಾಮ ಉಡುಪ, ರಂಜಿತ್ ಪೂಜಾರಿ ಹರಿಪ್ರಸಾದ್ ಇದ್ದರು.