ಶಾಲೆಗಳ ಉನ್ನತೀಕರಣ ಕಾರ್ಯಕ್ಕೆ ಸೇವಾ ಸಂಸ್ಥೆಗಳ ಸಹಕಾರ ಅಗತ್ಯ

KannadaprabhaNewsNetwork |  
Published : Jun 06, 2025, 11:52 PM ISTUpdated : Jun 06, 2025, 11:53 PM IST
6ಸಿಎಚ್‌ಎನ್‌54ನಗರದ ಪಿ.ಡಬ್ಲೂ.ಡಿ ಕಾಲೋನಿಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ದತ್ತು ತೆಗೆದುಕೊಂಡಿರುವ ಚಾಮರಾಜನಗರದ ಬಸವ ರಾಜೇಂದ್ರ ಮೆಡಿಕಲ್ ಟ್ರಸ್ಟ್ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಾಲಾ ಕಟ್ಟಡ ಹಾಗೂ ಹಸ್ತಾಂತರ ಕಾರ್ಯಕ್ರಮವನ್ನು ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಚಾಮರಾಜನಗರದ ಪಿಡಬ್ಲ್ಯೂಡಿ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಾಲಾ ಕಟ್ಟಡ ಹಸ್ತಾಂತರ ಕಾರ್ಯಕ್ರಮವನ್ನು ಎಂಎಸ್ಐಎಲ್ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಶಾಲೆಗಳ ಉನ್ನತೀಕರಿಸುವ ಕಾರ್ಯದಲ್ಲಿ ಸರ್ಕಾರದ ಜೊತೆ ಸೇವಾ ಸಂಸ್ಥೆಗಳು ಸಹ ಕೈಜೊಡಿಸಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ನಗರದ ಪಿಡಬ್ಲ್ಯೂಡಿ ಕಾಲೋನಿಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ದತ್ತು ತೆಗೆದುಕೊಂಡಿರುವ ಚಾಮರಾಜನಗರದ ಬಸವ ರಾಜೇಂದ್ರ ಮೆಡಿಕಲ್ ಟ್ರಸ್ಟ್ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಾಲಾ ಕಟ್ಟಡ ಹಾಗೂ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲಾಗುತ್ತಿದೆ. ಇಂತಹ ಕಾರ್ಯಗಳಿಗೆ ಸೇವಾ ಸಂಸ್ಥೆಗಳು ಬೆಂಬಲವಾಗಿ ನಿಲ್ಲಬೇಕು. ಬಸವರಾಜೇಂದ್ರ ಟ್ರಸ್ಟ್ ನಂತಹ ಸಂಸ್ಥೆಗಳು ಶಾಲೆಗಳ ನೆರವಿಗೆ ನಿಂತಿರುವುದು ಶ್ಲಾಘನೀಯ ಎಂದರು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಜೊತೆಗೆ ಉತ್ತಮ ಶಿಕ್ಷಣ ನೀಡಿ ಭವಿಷ್ಯದ ಸತ್ಪ್ರಜೆಗಳನ್ನಾಗಿಸುವ ಕಾರ್ಯದಲ್ಲಿ ನಾಗರಿಕರ ಪಾತ್ರವೂ ಪ್ರಮುಖವಾಗಿದೆ. ವಿದ್ಯಾರ್ಥಿಗಳಿಗೆ ಶಿಸ್ತಿನ ಜೊತೆಗೆ ಗುಣಾತ್ಮಕ ಶಿಕ್ಷಣವು ಸಹ ಅಗತ್ಯವಾಗಿದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ, ನನ್ನ ಶಾಲೆ ನನ್ನ ಕೊಡುಗೆ, ಸ್ಕೌಟ್ ಗೈಡ್ಸ್ ತರಬೇತಿಗಳ ಮೂಲಕ ಹಳೆ ವಿದ್ಯಾರ್ಥಿಗಳು ಶಾಲೆಗಳಿಗೆ ಕೊಡುಗೆ ನೀಡುತ್ತಾ ಬರುತ್ತಿದ್ದಾರೆ. ಈ ಶಾಲೆಯ 2021-22ನೇ ಸಾಲಿನ ದಾಖಲಾತಿ ಸಂಖ್ಯೆಯು 62 ಇದ್ದು, ನಂತರ 2022-23ರಲ್ಲಿ 119, 2023-24ನೇ ಸಾಲಿನಲ್ಲಿ 210 ದಾಖಲಾತಿ ಏರಿಕೆ ಕಂಡಿದೆ ಎಂದರು.

ಪ್ರಸ್ತುತ 2025-26ನೇ ಸಾಲಿಗೆ 320 ಮಕ್ಕಳ ದಾಖಲಾತಿಯಾಗಿದ್ದಾರೆ ಈ ಶಾಲೆಗೆ. 1 ರಿಂದ 8ನೇ ತರಗತಿಯವರೆಗೆ ಇದ್ದ ಶಾಲೆಯನ್ನು ಎಲ್‌ಕೆಜಿಯಿಂದ 9ನೇ ತರಗತಿವರೆಗೆ ಮುಂದುವರೆಸಲಾಗುವುದು. ಮುಂದಿನ ಶೈಕ್ಷಣಿಕ ಸಾಲಿಗೆ 10ನೇ ತರಗತಿಯವರೆಗೆ ಮುಂದುವರೆಯಲಿದೆ. ಚಾಮರಾಜನಗರ ಬಸವ ರಾಜೇಂದ್ರ ಮೆಡಿಕಲ್ ಟ್ರಸ್ಟ್ ಶಾಲೆಗೆ 8 ಕೊಠಡಿಗಳು, 5 ಮಂದಿ ಶಿಕ್ಷಕರು, ಒಂದು ಶಾಲಾವಾಹನ, ಒಂದು ಬೋರ್‌ವೆಲ್, ಪಿಠೋಪಕರಣ, ಪುಸ್ತಕ, ಸಮವಸ್ತ್ರದ ಜೊತೆಗೆ ಕಂಪ್ಯೂಟರ್ ನೀಡಿದೆ. ಮುಂದಿನ ದಿನಗಳಲ್ಲಿ ಈ ಶಾಲೆಯನ್ನು ಆದರ್ಶ ಶಾಲೆಯನ್ನಾಗಿ ಮಾಡಲಾಗುತ್ತದೆ ಎಂದರು.ಬಸವ ರಾಜೇಂದ್ರ ಮೆಡಿಕಲ್ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಬಸವರಾಜೇಂದ್ರ ಮಾತನಾಡಿ, ಸಂಸ್ಥೆಗಳಿಂದ ದಾನ ಕೊಡುವುದು ದೊಡ್ಡದಲ್ಲ. ಅದು ಉತ್ತಮ ರೀತಿಯಲ್ಲಿ ಸದ್ಬಳಕೆ ಆಗುವುದು ಮುಖ್ಯ. ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷ್ ಭಾಷೆಯ ಅರಿವು ಅಗತ್ಯವಾಗಿದೆ. ಮಾತೃ ಭಾಷೆಯೊಂದಿಗೆ ವೃತ್ತಿಪರ ಜೀವನಕ್ಕಾಗಿ ಇತರೆ ಭಾಷೆಯನ್ನು ಕಲಿಯುವುದು ಅಗತ್ಯವಾಗಿದೆ. ಈ ಉದ್ದೇಶದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಶಿಕ್ಷಣವನ್ನು ಮಕ್ಕಳಿಗೆ ಕಲಿಸಲು ಅನುಕೂಲ ಮಾಡಿಕೊಡಬೇಕು ಎಂದರು.

ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭೆ ಸದಸ್ಯರಾದ ಕುಮುದ ಕೇಶವಮೂರ್ತಿ, ಎಂ.ಸ್ವಾಮಿ, ಜಿಪಂ ಮಾಜಿ ಸದಸ್ಯ ಸೋಮನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಎಸ್. ಉಮಾ, ಮುಖ್ಯ ಶಿಕ್ಷಕರಾದ ಮಾಲಿನಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?