ಕನ್ನಡಪ್ರಭ ವಾರ್ತೆ ಅರಸೀಕೆರೆ
ಆಧುನಿಕತೆ ಬೆಳೆದಂತೆ ಮಕ್ಕಳು ಸಹ ಅದಕ್ಕೆ ಸ್ವಾಭಾವಿಕವಾಗಿಯೇ ಹೊಂದಿಕೊಳ್ಳುತ್ತಾ ಬರುತ್ತಿದ್ದಾರೆ, ಸಣ್ಣ ಮಕ್ಕಳು ಮೊಬೈಲ್ ಬಳಸುತ್ತಾರೆ, ಇದು ವೈಜ್ಞಾನಿಕ ಸ್ಪರ್ಧಾಯುಗ ಶಿಕ್ಷಣದೊಂದಿಗೆ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುವ ನಿಟ್ಟಿನಲ್ಲಿ ಶಾಲೆಗಳು ಮತ್ತು ಪೋಷಕರು ಗಮನ ನೀಡಬೇಕೆಂದು ಕೆರೆಗೋಡಿ ರಂಗಾಪುರದ ಶ್ರೀ ಪರದೇಶಿಕೇಂದ್ರ ಸ್ವಾಮಿಗಳು ಕರೆ ನೀಡಿದರು. ನಗರದ ಜೆ.ಎಸ್. ಎಸ್ ಕನ್ನಿಕಾ ಆಂಗ್ಲ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಿ ಆಶೀರ್ವಚನ ನೀಡಿದ ಶ್ರೀಗಳು ತಾರತಮ್ಯ ಭೇದ ಭಾವ ಇಲ್ಲದೆ ಎಲ್ಲಾ ಮಕ್ಕಳನ್ನು ಏಕ ರೀತಿಯಲ್ಲಿ ವಿದ್ಯಾವಂತರನ್ನಾಗಿ ಮಾಡುವ ಕಾಳಜಿ ಶಿಕ್ಷಕರಲ್ಲಿ ಇರಬೇಕು ಅಂತಹ ವಾತಾವರಣವನ್ನು ನಾನು ಇಲ್ಲಿ ಕಂಡಿದ್ದೇನೆ, ಶಾಲೆಗಳು ಜ್ಞಾನ ದೇಗುಲವಾಗಿರಬೇಕು ತಮ್ಮ ಸಂಸ್ಥೆಯಿಂದ ಸಮಾಜಕ್ಕೆ ಒಂದು ಕೊಡುಗೆಯಾಗಿ ನಾವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡಬೇಕು ಎಂಬ ಗುರಿ ಹೊಂದಿರುವ ಶಾಲೆಗಳು ಬಹಳ ವಿರಳ. ಅಂತಹವುಗಳಲ್ಲಿ ಈ ಶಾಲೆಯು ಒಂದು ಈ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಸಂಸ್ಥೆಯವರು ಸೇವಾ ಮನೋಭಾವವನ್ನು ಹೊಂದಿದ್ದಾರೆ, ಅಕ್ಷರ ಅಭ್ಯಾಸದ ಮೂಲಕ ಮಕ್ಕಳ ಶಿಕ್ಷಣವನ್ನ ಪ್ರಾರಂಭಿಸುವ ಒಂದು ಸತ್ಸಂಪರ್ದಾಯ, ಕಲಿಕೆಯಲ್ಲಿ ಶೇಕಡ ನೂರು ಗುಣಾತ್ಮಕ ಶಿಕ್ಷಣವನ್ನು ಮಕ್ಕಳು ಪಡೆಯಬೇಕು ಅವರು ಉನ್ನತ ಮಟ್ಟಕ್ಕೆ ಏರಬೇಕು ಎಂಬ ಆಶಯವನ್ನು ಶಾಲೆ ಹೊಂದಿದೆ. ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಬೇಕಾದರೆ ಸುಸಂಸ್ಕೃತರಾಗಿರಬೇಕು, ಇದು ಶಾಲೆಗಳಿಂದ ಆಗಬೇಕು ಎಂದರು. ನಗರ ಸಿಆರ್ಪಿ ವಿಷ್ಣುವರ್ಧನ್ ಈ ಶಾಲೆಯಲ್ಲಿ ಪ್ರತಿವರ್ಷ ಇಂತಹ ಒಂದು ಕಾರ್ಯಕ್ರಮನ ಹಮ್ಮಿಕೊಳ್ಳುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಗುರುಗಳ ಆಶೀರ್ವಾದದೊಂದಿಗೆ ಬುನಾದಿ ಹಾಕುವ ಕಾರ್ಯಕ್ರಮವನ್ನು ಅರ್ಥಗರ್ಭಿತವಾಗಿ ಮಾಡುತ್ತಾ ಬರುತ್ತಿದ್ದಾರೆ, ಶಿಕ್ಷಣದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವಾತಾವರಣವನ್ನು ಈ ಶಾಲೆ ಸೃಷ್ಟಿಸಿಕೊಡುತ್ತಾ ಬಂದಿದೆ, ಮಕ್ಕಳಿಗೆ ಶ್ರೀಗಳ ಆಶೀರ್ವಾದವು ಇಂದು ದೊರೆತದೆ, ಎಂದರು. ವಾಸ್ತವಿಕ ನುಡಿಯಲ್ಲಿ ಶಾಲಾ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್ ಈಗಿನ ಸ್ಪರ್ಧಾಯುಗದಲ್ಲಿ ನಾವು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಪ್ರತಿಭಾವಂತ ಶಿಕ್ಷಕರನ್ನು ವಿದ್ಯಾರ್ಥಗಳಿಗೆ ಒದಗಿಸುವ ಮೂಲಕ ವಿಶೇಷ ಕಾಳಜಿಯನ್ನು ವಹಿಸಿದ್ದೇವೆ. ಪ್ರತಿವರ್ಷವು ಉತ್ತಮ ಶಿಕ್ಷಣವನ್ನು ಮಕ್ಕಳು ಪಡೆಯುತ್ತಿದ್ದಾರೆ. ನಾವು ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಕ್ಕೂ ಪೋಷಕರು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಪೋಷಕರು ನೀಡುವ ಪ್ರೋತ್ಸಾಹ ನಮಗೆ ಹೆಚ್ಚಿನ ಸ್ಫೂರ್ತಿಯನ್ನು ನೀಡುತ್ತಿದೆ, ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಇತರ ಮಕ್ಕಳನ್ನು ಈ ಶಾಲೆಗೆ ಕರೆತನ್ನಿ ಎಂದು ಅವರು ಮನವಿ ಮಾಡಿದರು.