ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗಿನ ಪ್ರವಾಸೋದ್ಯಮಿಗಳು ಜನಸ್ನೇಹಿಯಾಗಿದ್ದಲ್ಲಿ ಒಮ್ಮೆ ಭೇಟಿ ನೀಡಿದ ಪ್ರವಾಸಿಗರು ಮತ್ತೆ ಮತ್ತೆ ಕೊಡಗಿಗೆ ಪ್ರವಾಸ ಬರುವುದು ಖಂಡಿತಾ ಎಂದೂ ಕಿವಿಮಾತು ಹೇಳಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ಕಳೆದ ತಿಂಗಳು ಆಯೋಜಿಸಿದ್ದ ಸ್ವಚ್ಛ ಕೊಡಗು ಸುಂದರ ಕೊಡಗು ಸ್ವಚ್ಛತಾ ಅಭಿಯಾನ ರಾಜ್ಯದ ಗಮನವನ್ನೇ ಸೆಳೆದಿದೆ. ಸ್ವಯಂ ಪ್ರೇರಿತರಾಗಿ ಕೊಡಗಿನ ಜನತೆ ಈ ಅಭಿಯಾನಕ್ಕೆ ಸಹಕಾರ ನೀಡಿದ್ದು ಜಿಲ್ಲೆಯ ಜನತೆಯಲ್ಲಿ ಸ್ವಚ್ಛ ಕೊಡಗಿನ ಬಗೆಗಿನ ಚಿಂತನೆಗೆ ನಿದರ್ಶನವಾಗಿದೆ ಎಂದು ಶ್ಲಾಘಿಸಿದರು.
ಕೊಡಗನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸುವಲ್ಲಿಯೂ ಜಿಲ್ಲೆಯ ಜನತೆಯ ಸರ್ವ ಸಹಕಾರವನ್ನೂ ಈ ಸಂದರ್ಭ ಜಿಲ್ಲಾಧಿಕಾರಿಗಳು ಕೋರಿದರು. ಕೊಡಗಿಗೆ ಭೇಟಿ ನೀಡುವ ಪ್ರವಾಸಿರಿಗೆ ಸಾಕಷ್ಟು ಮಾಹಿತಿ ನೀಡುವ ನಿಟ್ಟಿನಲ್ಲಿ ಕೂರ್ಗ್ ಹೋಟೇಲ್ , ರೆಸಾರ್ಟ್ ಅಸೋಸಿಯೇಷನ್ ನ ಈ ನೂತನ ಕಚೇರಿ ಸಹಕಾರಿಯಾಗಲಿ ಎಂದೂ ವೆಂಕಟ್ ರಾಜಾ ಹಾರೈಸಿದರು.ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ, ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಪ್ರಥಮ ಬಾರಿಗೆ ಕೂರ್ಗ್ ಹೋಟೇಲ್ , ರೆಸಾರ್ಟ್ ಅಸೋಸಿಯೇಷನ್ ಗೆ ಪ್ರತ್ಯೇಕ ಕಚೇರಿ ಲಭಿಸುವಂತಾಗಿದೆ. ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಅಸೋಸಿಯೇಷನ್ ಅನೇಕ ಕಾರ್ಯಯೋಜನೆ ರೂಪಿಸುತ್ತಿದ್ದು, ಕೊಡಗು ಉತ್ಸವದ ಚಿಂತನೆಯೂ ಇದೆ ಎಂದರು.ಕೂರ್ಗ್ ಹೋಟೇಲ್ , ರೆಸಾರ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಸಿರ್ ಅಹಮ್ಮದ್, ಉಪಾಧ್ಯಕ್ಷರಾದ ಜಾಹೀರ್ ಅಹಮ್ಮದ್, ಬಿ. ಎಸ್. ಸುಂದರ್, ರತೀಶ್, ಬಿ. ಸಿ. ಮಂಜುನಾಥ್, ಜಂಟಿ ಕಾರ್ಯದರ್ಶಿ ಡಿ.ಕೆ. ಮಂಜುನಾಥ್, ಖಚಾಂಜಿ ಸಾಗರ್ ಗಣಪತಿ, ಅಸೋಸಿಯೇಷನ್ ನಿಕಟಪೂರ್ವ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಗೌರವ ಸಲಹೆಗಾರ ಜಿ. ಚಿದ್ವಿಲಾಸ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.