ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೃಷಿ ವಿಜ್ಞಾನ ಕೇಂದ್ರ ಚಾಮರಾಜನಗರ ವತಿಯಿಂದ ಗುಂಡ್ಲುಪೇಟೆ ತಾಲೂಕಿನ ಪುತ್ತನಪುರ ಗ್ರಾಮದಲ್ಲಿ ಜೋಳ ಮತ್ತು ಸೂರ್ಯಕಾಂತಿ ಬೆಳೆಗಳ ಸಮಗ್ರ ನಿರ್ವಹಣಾ ಕ್ರಮಗಳ ಕುರಿತ ಪ್ರಾತ್ಯಕ್ಷಿಕೆಗಳ ಕ್ಷೇತ್ರೋತ್ಸವವನ್ನು ರಾಷ್ಟ್ರೀಯ ಕೃಷಿ ಹವಾಮಾನ ಸ್ಥಿತಿಸ್ಥಾಪಕ ಆವಿಷ್ಕಾರಗಳ ಯೋಜನೆಯಡಿ (ನಿಕ್ರಾ) ಕೈಗೊಳ್ಳಲಾಯಿತು.ಕೃಷಿಯಲ್ಲಿ ಬದಲಾಗುತ್ತಿರುವ ಹವಾಮಾನದ ಪ್ರತಿಕೂಲ ಪರಿಣಾಮಗಳನ್ನು ಎದುರಿಸಿ ಉತ್ತಮವಾಗಿ ಬೆಳೆ ಬೆಳೆಯಲು ಈ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲಗಳ ಸೂಕ್ತ ನಿರ್ವಹಣೆ, ಬೆಳೆಗಳ ನಿರ್ವಹಣೆ ಮತ್ತು ಪಶುಸಂಗೋಪನೆ ತಾಂತ್ರಿಕತೆಗಳ ಪರಿಚಯ ಮತ್ತು ಅವುಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮಗಳನ್ನು ಬೆಳೆ ಪ್ರ್ರಾತಕ್ಷಿಕೆಗಳ ಮೂಲಕ ಕೈಗೊಳ್ಳಲಾಗಿ, ಪ್ರಾತ್ಯಕ್ಷಿಸಿದ ತಂತ್ರಜ್ಞಾನಗಳ ಪರಿಣಾಮಗಳನ್ನು ತಿಳಿಸಿಕೊಡಲು ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.
ಗ್ರಾಮೀಣ ಹವಾಮಾನ ಒತ್ತಡ ನಿರ್ವಹಣಾ ಸಮಿತಿಯ ಅಧ್ಯಕ್ಷ ರಾಜಶೇಖರಪ್ಪ ಮಾತನಾಡಿ, ನಿಕ್ರಾ ಯೋಜನೆಯಡಿ ಪರಿಚಯಿಸಿರುವ ಹಲವಾರು ತಾಂತ್ರಿಕತೆ, ಅದರಲ್ಲೂ ಸುಧಾರಿತ ಜೋಳ ಮತ್ತು ಸೂರ್ಯಕಾಂತಿ ತಳಿಗಳು ಅಲ್ಪಾವಧಿಯಾಗಿವೆ. ಮಳೆ ಕಡಿಮೆಯಾದ ಸಂದರ್ಭಗಳಲ್ಲೂ ಉತ್ತಮ ಬೆಳವಣಿಗೆ ಮತ್ತು ಇಳುವರಿಯನ್ನು ನೀಡಿವೆ. ಪ್ರಸ್ತುತ, ಜೋಳ ಬಿತ್ತನೆಯಾದಾಗಿನಿಂದ ಕೇವಲ ಎರಡೇ ಬಾರಿ ಮಳೆಯಾಗಿದ್ದು ಇಂತಹ ಪರಿಸ್ಥಿತಿಯಲ್ಲೂ ಸಿ.ಎಸ್.ಎಚ್-೪೧ ಜೋಳದ ತಳಿ ಬೆಳೆದಿರುವ ಪರಿಣಾಮವಾಗಿ ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದೇವೆ. ಕೆ.ಬಿ.ಎಸ್.ಎಚ್-೭೮ ಸೂರ್ಯಕಾಂತಿ ತಳಿಯೂ ಸಹ ರೈತರು ಬೆಳೆದಿರುವ ಸ್ಥಳೀಯ ತಳಿಗಳಿಗಿಂತ ಉತ್ತಮ ಇಳುವರಿ ನೀಡುವಂತೆ ಬೆಳವಣಿಗೆ ಬಂದಿದೆ ಎಂದರು.ಉಪಾಧ್ಯಕ್ಷ ಶಿವಣ್ಣ ಮಾತನಾಡಿ, ನೀರು ಸಂರಕ್ಷಣಾ ಕ್ರಮಗಳು, ಅದರಲ್ಲೂ ಕಂದಕ ಬದುಗಳ ನಿರ್ಮಾಣದಿಂದ ಕಡಿಮೆ ಮಳೆ ಅವಧಿಯಲ್ಲೂ ಸಹ ಮಣ್ಣಿನಲ್ಲಿ ಬೆಳವಣಿಗೆಗೆ ಅನುಕೂಲಕರವಾಗುವ ತೇವಾಂಶ ದೊರೆತಿದ್ದು, ಇದರ ಪರಿಣಾಮವಾಗಿ ಬೆಳೆ ಉತ್ತಮವಾಗಿದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ನರೇಶ್ ಮಾತನಾಡಿ, ರೈತರು ಬದಲಾಗುತ್ತಿರುವ ಹವಾಮಾನಕ್ಕೆ ಸೂಕ್ತವಾದ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಬೆಳೆ ತಾಂತ್ರಿಕತೆ ಅಳವಡಿಸಿಕೊಂಡು ಸಮಗ್ರ ನಿರ್ವಹಣಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕು.ಕಾರ್ಯಕ್ರಮದ ತಾಂತ್ರಿಕ ಮಾಹಿತಿಯನ್ನು ಕೇಂದ್ರದ ವಿಜ್ಞಾನಿಗಳಾದ ಡಾ.ಯೋಗೇಶ್ ಮತ್ತು ಡಾ.ಶ್ರುತಿ ತಿಳಿಸಿದರು. ಜೋಳದ ಹೈಬ್ರಿಡ್ ಸಿ.ಎಸ್.ಹೆಚ್-೪೧ ಮತ್ತು ಸೂರ್ಯಕಾಂತಿ ಕೆ.ಬಿ.ಎಸ್.ಹೆಚ್-೭೮ರ ವಿಶೇಷ ಗುಣಲಕ್ಷಣಗಳನ್ನು ತಿಳಿಸಿಕೊಟ್ಟು ಎರಡೂ ತಳಿಗಳು ಉತ್ತಮ ಇಳುವರಿ ನೀಡುವ ತಳಿಗಳಾಗಿದ್ದು ಬರ ಸಹಿಷ್ಣತೆ ಮತ್ತು ರೋಗ ನಿರೋಧಕತೆ ಹೊಂದಿರುತ್ತವೆ ಎಂದು ತಿಳಿಸಿದರು.
ನೀರಿನ ಸಂರಕ್ಷಣೆಗೆ ರೈತರು ಹೆಚ್ಚು ಒತ್ತು ನೀಡಿ ಮಳೆ ಸಂದರ್ಭಗಳಲ್ಲಿ ಹೆಚ್ಚುವರಿ ನೀರನ್ನು ಕಂದಕ ಬದುಗಳನ್ನು ನಿರ್ಮಿಸಿ ಮಣ್ಣಿನಲ್ಲಿ ಇಂಗುವಂತೆ ಮಾಡಬೇಕು, ಇದರಿಂದಾಗಿ ಜಮೀನಿನ ಮಣ್ಣಿನಲ್ಲಿ ನೀರಿನ ಶೇಖರಣೆ ಹೆಚ್ಚಾಗಿ ಬೆಳೆಗಳಿಗೆ ತೇವಾಂಶ ಲಭ್ಯತೆ ಪ್ರಮಾಣ ಮತ್ತು ಅವಧಿ ಹೆಚ್ಚುವುದು ಹಾಗೂ ಬೆಳಗಳ ಬೆಳವಣಿಗೆ ಉತ್ತಮಗೊಂಡು ನಿರೀಕ್ಷಿತ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ, ನೀರು ನಿರ್ವಹಣೆ ಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಕೈಗೊಂಡು ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಮಾಡುವುದರಿಂದ ಸಮಯ ಉಳಿಸಿ ಮತ್ತು ವ್ಯವಸಾಯದ ಖರ್ಚನ್ನು ತಗ್ಗಿಸಿ ಹೆಚ್ಚಿನ ಲಾಭ ಪಡೆಯಬಹುದೆಂದು ತಿಳಿಸಿದರು.
ಸೂರ್ಯಕಾಂತಿಯಲ್ಲಿ ಪ್ರಮುಖವಾಗಿ ಜೈವಿಕ ಗೊಬ್ಬರಗಳನ್ನು ಬಳಸಿ ನಿಗದಿತ ಪ್ರಮಾಣದ ಬೀಜವನ್ನು ಬಳಸಲು ಕರೆ ನೀಡಿ ಹೆಚ್ಚಿನ ಸಸಿಗಳನ್ನು ವಿರಳಗೊಳಿಸುವುದರಿಂದ ತೇವಾಂಶ ಮತ್ತು ಪೋಷಕಾಂಶಗಳ ಸದ್ಬಳಕೆಯಾಗಿ ಕೀಟ ಪೀಡೆಗಳು ಮತ್ತು ಸಸ್ಯವನ್ನು ಬಾಧಿಸುವ ರೋಗಗಳನ್ನು ತಡೆಗಟ್ಟಬಹುದು. ರೈತ ದೇಸಾಯಿ ಮತ್ತುಮಹದೇವಯ್ಯ ಪ್ರಾತ್ಯಕ್ಷಿಕೆಯ ಪರಿಣಾಮದಿಂದ ಈ ಬಾರಿ ಜೋಳದ ಬೆಳೆಯಲ್ಲಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೇವೆ ಎಂದರು.ರೈತ ನಾಗರಾಜಪ್ಪ ಮಾತನಾಡಿ, ಕೆ.ಬಿ.ಎಸ್.ಎಚ್-೭೮ ಸೂರ್ಯಕಾಂತಿ ತಳಿ ಸ್ಥಳೀಯ ತಳಿಗಿಂತ ಉತ್ತಮ ಬೆಳವಣಿಗೆಯನ್ನು ತೋರಿಸಿದ್ದು ಮಳೆ ಕೊರತೆ ಸನ್ನಿವೇಶದಲ್ಲೂ ಉತ್ತಮ ಗಾತ್ರದ ಸೂರ್ಯಕಾಂತಿ ತೆನೆಗಳು ಬಂದಿರುವುದರಿಂದ ಹೆಚ್ಚಿನ ಇಳುವರಿ ಮತ್ತು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.
ರೈತರಾದ ದೊಡ್ಡಪ್ಪ , ಮಂಜುನಾಥ, ಪುಟ್ಟಬಸವಯ್ಯ, ದೊಡ್ಡಗಂಡಯ್ಯ, ಜವನಯ್ಯ ಮತ್ತು ಅಕ್ಕಪಕ್ಕ ಗ್ರಾಮದ ಒಟ್ಟು ೭೮ ರೈತರು ಭಾಗವಹಿಸಿ ಪ್ರಾತ್ಯಕ್ಷಿಕೆ ತಾಕುಗಳನ್ನು ವೀಕ್ಷಿಸಿ, ಬೆಳವಣಿಗೆಯ ಮತ್ತು ಇಳುವರಿಯ ಅವಲೋಕನ ಕೈಗೊಂಡು, ಯೋಜನೆಯ ತಾಂತ್ರಿಕತೆಗಳನ್ನು ಅಳವಡಿಸಿದ್ದರಿಂದ ಉತ್ತಮ ಬೆಳೆ ದೊರೆಯುವುದೆಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಹಿರಿಯ ಸಂಶೋಧನಾ ಸಹಾಯಕ ಬಿ.ಎನ್. ಮೋಹನ್ ಆಯೋಜಿಸಿ ನಿರ್ವಹಿಸಿದರು.