ಕನ್ನಡಪ್ರಭ ವಾರ್ತೆ ಮೂಡಲಗಿ
ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ, ಕಲ್ಲೋಳಿಯ ವೀರಭದ್ರೇಶ್ವರ ಜಾನಪದ ಮತ್ತು ಕಲಾಪೋಷಕ ಸಂಘ ಹಾಗೂ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಎನ್ನೆಸ್ಸೆಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜರುಗಿದ ೨೦೨೪-೨೫ ನೇ ಸಾಲಿನ ವಿಚಕ್ಷಣ ದಿನಾಚರಣೆ ಹಾಗೂ ಫಿಟ್ ಇಂಡಿಯಾ ಸ್ವಚ್ಛತಾ ಫ್ರೀಡಂ ರನ್ ೫.೦ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ನಮ್ಮಲ್ಲಿ ಅಳವಡಿಸಿಕೊಂಡು ಲಂಚ ತೆಗೆದುಕೊಳ್ಳುವುದಿಲ್ಲ ಮತ್ತು ಕೊಡುವುದಿಲ್ಲ ಎಂಬ ಶಪಥ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಎಸ್.ಆರ್.ಇ. ಸಂಸ್ಥೆಯ ಚೇರಮನ್ ಬಸಗೌಡ ಪಾಟೀಲ ಮಾತನಾಡಿ, ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿ ಯುವಕರ ಮೇಲಿದೆ. ಸರ್ಕಾರಿ ಕೆಲಸ ಮಾಡಲು ಹಿಂದೇಟು ಹಾಕುವವರು, ಲಂಚದ ಬೇಡಿಕೆಯಿಡುವವರು, ಅಕ್ರಮ ಸಂಪತ್ತು ಹೊಂದಿರುವವರ ವಿರುದ್ಧ ದೂರು ಸಲ್ಲಿಸಬೇಕು. ಲಂಚ ಪಡೆದುಕೊಳ್ಳುವುದು, ನೀಡುವುದು ಕಾನೂನು ಪ್ರಕಾರ ಅಪರಾಧ. ಇದರಲ್ಲಿ ಭಾಗಿಯಾದವರಿಗೆ ಜೈಲು ಶಿಕ್ಷೆಯಾಗುತ್ತದೆ ಹಾಗೂ ಕೆಲಸದಿಂದ ವಜಾಗೊಳಿಸಬಹುದು. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ವಿದ್ಯಾರ್ಥಿಗಳಿಂದ ಆಗಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಸುರೇಶ ಹನಗಂಡಿ ಮಾತನಾಡಿ, ಭ್ರಷ್ಟಾಚಾರವೆಂಬ ಸಾಮಾಜಿಕ ಪಿಡುಗು ಭಾರತದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣಕ್ಕೆ ಭ್ರಷ್ಟಾಚಾರದ ಸಂಪೂರ್ಣ ನಿರ್ಮೂಲನೆ ಅತ್ಯಗತ್ಯವಾಗಿದೆ ಎಂದರು.
ಪ್ರೊ. ಆರ್. ಎನ್. ತೋಟಗಿ ನಿರೂಪಿಸಿದರು, ಸಂಜು ಮರಗನ್ನವರ ಪ್ರಾರ್ಥಿಸಿದರು. ಡಾ. ಕೆ.ಎಸ್. ಪರವ್ವಗೋಳ ಸ್ವಾಗತಿಸಿದರು. ಡಿ.ಎಸ್. ಹುಗ್ಗಿ ಪ್ರತಿಜ್ಞಾ ವಿಧಿ ಬೋಧಿಸಿದರು. ಎಂ.ಬಿ. ಜಾಲಗಾರ ವಂದಿಸಿದರು.