ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಸಭೆ ಬಳಿಕ ರೈತಮುಖಂಡ ಎಂ.ವಿ.ರಾಜೇಗೌಡ ಮಾತನಾಡಿ, ತಾಲೂಕಿನ ಗವೀಮಠ ಮೊರಾರ್ಜಿ ವಸತಿ ಶಾಲೆಯ ಅಕ್ಕಿ ಹಗರಣ, ಶೀಳನೆರೆ ಹೋಬಳಿಯಲ್ಲಿ ಕಂದಾಯ ಇಲಾಖೆ ಆರ್.ಐ ಮತ್ತು ವಿ.ಎ.ಗಳು ಒಗ್ಗೂಡಿ ಅಕ್ರಮ ಪೌತಿ ಖಾತೆ ನೀಡಿ ರೈತರಿಗೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿದರು.
ಶಿಕ್ಷಣ ಇಲಾಖೆ ಸೂಚನೆ ಮೇರೆಗೆ ಟಿಎಪಿಸಿಎಂಎಸ್ ಗೋಡನ್ನಿಂದ ಎತ್ತುವಳಿಯಾಗಿ ಗವೀಮಠದ ವಸತಿ ಶಾಲೆಗೆ ಸೇರಬೇಕಾದ ಅಕ್ಕಿ ವಸತಿ ಶಾಲೆ ಸೇರುವ ಬದಲು ಪಟ್ಟಣದ ಖಾಸಗಿ ರೈಸ್ ಮಿಲ್ ಗೆ ಹೋಗಿದೆ. ರೈತರು ಪತ್ತೆ ಹಚ್ಚಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದರ ಬಗ್ಗೆ ಇದುವರೆಗೂ ಯಾವುದೇ ತನಿಖೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಮಾತನಾಡಿ, ಶಿಳನೆರೆ ಹೋಬಳಿಯ ಚೌಡಘಟ್ಟ, ಸಿಂಧಘಟ್ಟ ಮತ್ತಿತರ ಕಡೆ ಹೋಬಳಿಯ ರಾಜಸ್ವ ನಿರೀಕ್ಷಕ ರಾಜಮೂರ್ತಿ, ಗ್ರಾಮ ಲೆಕ್ಕಿಗರಾದ ಶಶಿಕುಮಾರ್, ಈರಣ್ಣ ಎನ್ನುವವರು ನಕಲಿ ವಂಶವೃಕ್ಷಗಳನ್ನು ಸೃಷ್ಟಿಸಿ ಪೌತಿದಾರರ ಕುಟುಂಬಕ್ಕೆ ಸೇರಬೇಕಾದ ಆಸ್ತಿಯನ್ನು ಇತರರ ಹೆಸರಿಗೆ ಖಾತೆ ಮಾಡಿ ನೈಜ ವಂಶಸ್ತರು ಕೋರ್ಟು ಕಚೇರಿ ತಿರುಗುವಂತೆ ಮಾಡಿದ್ದಾರೆ ಎಂದು ದೂರಿದರು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ತಾಲೂಕಿನಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ದಲ್ಲಾಳಿಗಳನ್ನು ನೇಮಕ ಮಾಡಿಕೊಂಡು ಕಮೀಷನ್ ದಂಧೆಯಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಶ್, ಕೃಷ್ಣಾಪುರ ರಾಜಣ್ಣ, ಸಿಂಧುಘಟ್ಟ ಮುದ್ದುಕುಮಾರ್, ಚೌಡೇನಹಳ್ಳಿ ಕರಷ್ಣೇಗೌಡ, ನೀತಿಮಂಗಲ ಮಹೇಶ್, ಕರೋಟಿ ತಮ್ಮಯ್ಯ, ಹಿರೀಕಳಲೆ ಬಸವರಾಜು, ಲಕ್ಷ್ಮೀಪುರ ನಾಗರಾಜು, ನಾರಾಯಣಸ್ವಾಮಿ ಸೇರಿದಂತೆ ಹಲವರಿದ್ದರು.