-ಸ್ಮಾಲ್ ಕಿಕ್ಕರ್
----
-ದುಬಾರಿ ಬೆಲೆಯ ಕೀಟನಾಶಕ ಸಿಂಪರಣೆಯಿಂದ ಬಸವಳಿದ ರೈತರು । ಬೆಳೆ ಉಳಿಸಿಕೊಳ್ಳಲು ಹರಸಾಹಸ------
ಕನ್ನಡಪ್ರಭ ವಾರ್ತೆ ಅಫಜಲಪುರ
ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ ಮಳೆ ಕೈಕೊಟ್ಟ ಪರಿಣಾಮ ಹತ್ತಿ ಬೆಳೆ ಅವಧಿ ಪೂರ್ಣಗೊಂಡ ನಂತರ ಬಹುತೇಕ ರೈತರು ಬಿತ್ತನೆ ಮಾಡಿದ್ದಾರೆ.
ಹೆಚ್ಚುವರಿ ಖರ್ಚು: ಹತ್ತಿ ಬಿತ್ತನೆ ನಂತರ ಮಳೆ ಅಭಾವದ ಜೊತೆಗೆ ಜನೆವರಿಯಿಂದ ಜುಲೈ ವರೆಗೆ ಭೀಮಾ ನದಿ ಸಂಪೂರ್ಣ ಬತ್ತಿ ಹೋಗಿದ್ದರಿಂದ ನದಿ ತೀರದ ಗ್ರಾಮಗಳ ಹತ್ತಿ ಬೆಳೆಗಾರರು ತುಂಬಾ ತೊಂದರೆ ಅನುಭವಿಸಿದ್ದರು.
ಗಿಡಹೇನು ಬಾಧೆ: ಬಿತ್ತನೆ ಅವಧಿ ಮೀರಿ ಹತ್ತಿ ಬಿತ್ತನೆ ಮಾಡಿದರೆ ಗಿಡಹೇನು ಬಾಧಿಸುತ್ತದೆ. ಇದು ಕೋಮಲ ಚಿಗುರೆಲೆ, ಕೊಂಬೆ, ಮೊಗ್ಗುಗಳಿಂದ ಸಾರವನ್ನು ಹೀರುತ್ತದೆ. ಪರೋಕ್ಷವಾಗಿ ಹತ್ತಿಯ ಫೈಬರ್ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಆರಂಭದಲ್ಲೇ ಆವರಿಸಿರುವ ಹಿನ್ನೆಲೆ ದುಬಾರಿ ಖರ್ಚಿಗೆ ದಾರಿಯಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ಜೈವಿಕವೇ ಪರ್ಯಾಯ: ಕಡಿಮೆ ಸಮಯದಲ್ಲಿ ಕೀಟಬಾಧೆ ಹತೋಟಿಗೆ ತರುವ ಮತ್ತು ಹೆಚ್ಚು ಪರಿಣಾಮಕಾರಿಯಾದ ಕೀಟನಾಶಕಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದರಿಂದ ಸಹಜವಾಗಿ ರೈತರ ದೃಷ್ಟಿ ಬದಲಾಗಿದೆ. ಜೈವಿಕ ಔಷಧಗಳ ಬಳಕೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವತ್ತ ಗಮನಹರಿಸಬೇಕು ಎಂಬ ಕೂಗು ಕೇಳಿಬಂದಿದೆ. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದ್ದು, ಜೈವಿಕ ಔಷಧಗಳನ್ನು ರಾಸಾಯನಿಕ ಕೀಟನಾಶಕಗಳ ಪರ್ಯಾಯ ಔಷಧಗಳನ್ನಾಗಿ ಮಾರುಕಟ್ಟೆಗೆ ಪರಿಚಯಿಸಬೇಕೆಂಬ ಅಭಿಪ್ರಾಯ ಕೃಷಿ ತಜ್ಞರಿಂದ ವ್ಯಕ್ತವಾಗಿದೆ.
ಆದರೆ, ರೈತರು ಆರಂಭದಲ್ಲೇ ರಾಸಾಯನಿಕ ಕೀಟನಾಶಕ ಸಿಂಪರಣೆ ಮಾಡುವುದರಿಂದ ಜೈವಿಕ ಔಷಧ ತೊರೆಯುತ್ತಾರೆ. ಇದೀಗ ಸಾಮೂಹಿಕ ಜಾಗೃತಿಗೊಳ್ಳುವ ಅವಶ್ಯಕತೆಯಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಈಚಿನ ವರ್ಷಗಳಲ್ಲಿ ಹತ್ತಿ ಬೆಳೆ ಮೇಲೆ ಅವಲಂಬಿತರಾದ ರೈತರಿಗೆ ಮಳೆ ಕೊರತೆ, ನೀರಿನ ಅಭಾವ ಬರಸಿಡಿಲಂತೆ ಬಡಿದಿವೆ. ಇದೀಗ ಹತ್ತಿಗೆ ಆರಂಭದಲ್ಲೇ ಮುಟುರು ರೋಗ ಗಿಡಹೇನು ಬಾಧೆ ಆವರಿಸಿದ್ದು, ಅದರ ಹತೋಟಿಗಾಗಿ ದುಬಾರಿ ಬೆಲೆಯ ಕೀಟನಾಶಕಗಳ ಮೊರೆ ಹೋಗಬೇಕಿದೆ. ಹಾಕಿದ ಖರ್ಚು ವಾಪಸ್ ಬಂದರೆ ಸಾಕೆಂಬಂತಾಗಿದೆ ಎಂದು ತಾಲೂಕಿನ ಮಣ್ಣೂರ ಶೇಷಗಿರಿ ಹೊಸೂರ ರಾಮನಗರ ದಯಾನಂದನಗರ ಗ್ರಾಮಗಳ ರೈತರು ತಮ್ಮ ಅಳಲು ತೋಡಿಕೊಂಡರು