ಜಡೇಕುಂಟೆ ಮಂಜುನಾಥ್
ಆಧುನಿಕತೆಯ ಆಕರ್ಷಣೆ ಎಷ್ಟೇ ಇದ್ದರೂ, ಗ್ರಾಮೀಣ ಭಾರತದ ಬುಡಕಟ್ಟು ಸಂಸ್ಕೃತಿ ಮತ್ತು ಆಚರಣೆಗಳು ಇಂದಿಗೂ ತನ್ನದೇ ಆದ ವಿಶಿಷ್ಟತೆಯಿಂದ ಜೀವಂತವಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಬುಡಕಟ್ಟು ಜನರ ಆರಾಧ್ಯ ದೇವತೆ ಶ್ರೀ ಮಾರಮ್ಮ ದೇವಿಯ ಬೃಹತ್ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಸೆ.15ರಂದು ನಡೆಯಲಿರುವ ಈ ಐತಿಹಾಸಿಕ ಜಾತ್ರೆಗೂ ಮುನ್ನ ಗ್ರಾಮದಲ್ಲಿ ನಡೆಯುವ ಕಟ್ಟುನಿಟ್ಟಿನ ಆಚರಣೆಗಳು ಇಂದಿನ ಜನರನ್ನು ಹುಬ್ಬೇರಿಸುವಂತೆ ಮಾಡುತ್ತವೆ.
ಎಂಟು ದಿನಗಳ ಕಾಲ ಸ್ನಾನ-ಕಟಿಂಗ್ ಇಲ್ಲ:ಜಾತ್ರೆ ಆರಂಭಕ್ಕೂ ಮುನ್ನ ಗ್ರಾಮದ ಜನರು ಪಾಲಿಸುವ ನಿಯಮಗಳು ಅತ್ಯಂತ ವಿಶಿಷ್ಟವಾದವು. ಜಾತ್ರೆಯ ಮುನ್ನಾದಿನಗಳಲ್ಲಿ ಸತತ 8 ದಿನಗಳ ಕಾಲ ಗ್ರಾಮಸ್ಥರು ಸ್ನಾನ ಮಾಡುವುದಿಲ್ಲ ಮತ್ತು ಬಟ್ಟೆಯನ್ನೂ ಬದಲಿಸುವುದಿಲ್ಲ. ಪುರುಷರು ಕಟಿಂಗ್ ಅಥವಾ ಶೇವಿಂಗ್ ಮಾಡಿಸುವಂತಿಲ್ಲ. ಇಷ್ಟೇ ಅಲ್ಲದೆ, ಮನೆಗಳಲ್ಲಿ ಕಾವಲಿ ಇಟ್ಟು ರೊಟ್ಟಿ, ಚಪಾತಿ ಅಥವಾ ದೋಸೆ ಸುಡುವಂತಿಲ್ಲ ಹಾಗೂ ಮಾಂಸಾಹಾರ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.
ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ದೇವಸ್ಥಾನಗಳಲ್ಲಿ ಭಜನೆ, ಗಂಟೆ ನಾದ ಮೊಳಗುತ್ತದೆ. ಆದರೆ ಗೌರಸಮುದ್ರದಲ್ಲಿ ಜಾತ್ರೆಗೆ ಮುನ್ನ ಉಲ್ಟಾ ಆಚರಣೆ ಇರುತ್ತದೆ. ಇಲ್ಲಿನ ಶ್ರೀ ಮಾರಮ್ಮ ದೇವಿಯ ದೇವಸ್ಥಾನದಲ್ಲಿ ಗಂಟೆ ಬಾರಿಸುವಂತಿಲ್ಲ ಮತ್ತು ಮಂಗಳಾರತಿ ಮಾಡುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವಿದೆ. ಗ್ರಾಮದ ಸಾರು ಕಟ್ಟೆ ಸಮೀಪ ಹಿರಿಯರೆಲ್ಲಾ ಸೇರಿ ಜಾತ್ರೆ ಸಾರು ಅಂದರೆ ದಿನಾಂಕ ಘೋಷಣೆ ಮಾಡುವುದು. ಇಂತಹ ದಿನದಿಂದಲೇ ಈ ಎಲ್ಲಾ ಕಟ್ಟುಪಾಡುಗಳು ಜಾರಿಗೆ ಬರುತ್ತವೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮಟೆ ಬಾರಿಸುವ ಮೂಲಕ ಜಾತ್ರೆಯ ಸಂದೇಶವನ್ನು ಸಾರಲಾಗುತ್ತದೆ.
ಈ ವಿಶಿಷ್ಟ ಸಂಪ್ರದಾಯದ ಹಿಂದೆ ಒಂದು ಬಲವಾದ ನಂಬಿಕೆಯಿದೆ. ಪ್ರತಿವರ್ಷ ಜಾತ್ರೆ ಮುಗಿದ ಬಳಿಕ ಶ್ರೀ ಮಾರಿ ಮಹೇಶ್ವರಿ ದೇವಿಯು ವಿಶ್ವ ಪರ್ಯಟನೆಗೆ ಹೊರಡುತ್ತಾಳೆ. ನಂತರ ಸಾರು ಹಾಕುವ ದಿನವೇ ಆಕೆ ಮರಳಿ ಗ್ರಾಮಕ್ಕೆ ಬಂದು ನೆಲೆಸುತ್ತಾಳೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಹೀಗೆ ಗ್ರಾಮಕ್ಕೆ ಬರುವ ದೇವಿಯನ್ನು ಬರಮಾಡಿಕೊಳ್ಳಲು ಭಕ್ತರು ಈ ಕಠಿಣ ವ್ರತವನ್ನು ಆಚರಿಸುತ್ತಾರೆ. ಇದರಿಂದ ಮಕ್ಕಳಿಗೆ ಸಿಡುಬು, ದಡಾರದಂತಹ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ ಮತ್ತು ಈ ಭಾಗದಲ್ಲಿ ಉತ್ತಮ ಮಳೆ-ಬೆಳೆಯಾಗುತ್ತದೆ ಎಂಬುದು ಜನರ ಅಚಲ ನಂಬಿಕೆ.
ಆಂಧ್ರಪ್ರದೇಶದ ಗಡಿಯಂಚಿನಲ್ಲಿರುವ ಗೌರಸಮುದ್ರ ಮಾತ್ರವಲ್ಲದೆ ಸುತ್ತಮುತ್ತಲಿನ ಕೋನಸಾಗರ, ಓಬಣ್ಣನಹಳ್ಳಿ, ಹನುಮಂತನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲೂ ಭಕ್ತರು ಇದೇ ಸಂಪ್ರದಾಯವನ್ನು ಅತ್ಯಂತ ಭಕ್ತಿಭಾವದಿಂದ ಪಾಲಿಸುತ್ತಾರೆ. ಪ್ರತಿವರ್ಷ ಭಾದ್ರಪದ ಮಾಸದ ಮೊದಲ ಮಂಗಳವಾರ ನಡೆಯುವ ಈ ಬೃಹತ್ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಿಂದಲೂ ಸಾವಿರಾರು ಜನ ಸಾಗರವೇ ಹರಿದು ಬರುತ್ತದೆ.
ಮಧ್ಯಾಹ್ನದ ಮಾರಿ: