ದೇಶದ ಭವಿಷ್ಯ ಅಡಗಿರುವುದೇ ಸರ್ಕಾರಿ ಶಾಲೆಗಳಲ್ಲಿ: ಸಮಾಜ ಸೇವಕ ಮಂಜುನಾಥ್

KannadaprabhaNewsNetwork | Published : Jul 14, 2024 1:33 AM

ಸಾರಾಂಶ

ನಮ್ಮ ಚರ್ಚಿನ ಅಭ್ಯುದಯಗೊಳಿಸಿದವರಲ್ಲಿ ಒಬ್ಬರಾದ ಮೆಟ್ರೋ ಪೊಲಿಟೀನ್ ಡಾ. ಯೋಹನಾನ್ ಸ್ಮರಣಾರ್ಥ ಆಯ್ದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅಗತ್ಯವಿರುವ ಶೈಕ್ಷಣಿಕ ಪರಿಕರಗಳನ್ನು ದೇಣಿಗೆ ನೀಡುತ್ತಿದ್ದೇವೆ. ಈ ಶೈಕ್ಷಣಿಕ ವರ್ಷದಲ್ಲಿ ತಾಳೂರು ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅವಕಾಶ ಕಲ್ಪಿಸಿಕೊಟ್ಟ ತಾಳೂರು ಶಾಲೆ ಹಾಗೂ ಗ್ರಾಮಕ್ಕೆ ಧನ್ಯವಾದಗಳು.

ಕನ್ನಡಪ್ರಭ ವಾರ್ತೆ ಆಲೂರು

ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುತ್ತಿದೆ. ದೇಶದ ಭವಿಷ್ಯ ಅಡಗಿರುವುದೇ ಸರ್ಕಾರಿ ಶಾಲೆಗಳಲ್ಲಿ. ದೇಶವನ್ನಾಳುವ ನಮ್ಮ ಜನನಾಯಕರು ಬಹುತೇಕ ಓದಿರುವುದೇ ಸರ್ಕಾರಿ ಶಾಲೆಗಳಲ್ಲಿ, ಆದ್ದರಿಂದ ಇಲ್ಲಿನ ಮಕ್ಕಳಿಗೆ ಅಗತ್ಯ ಕಲಿಕಾ ಪರಿಕರಗಳನ್ನು ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಮಾಜ ಸೇವಕ ಎಚ್.ಇ.ಮಂಜುನಾಥ್ ಅಭಿಪ್ರಾಯಪಟ್ಟರು.

ಆಲೂರಿನ ಬಿಲಿವಿರ್ಸ್ ಚರ್ಚಿನ ವತಿಯಿಂದ ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರೋ ಪೊಲಿಟಿಯನ್ ಡಾ. ಯೋಹನಾನ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಶೈಕ್ಷಣಿಕ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೂ ಜಾಮೆಟ್ರಿ ಬಾಕ್ಸ್ ಗಳನ್ನು ವಿತರಿಸಿ ಮಾತನಾಡಿ, ಗ್ರಾಮೀಣ ಮಕ್ಕಳ ಕಲಿಕೆ ಪ್ರಾಯೋಗಿಕದಾಯಕವಾಗಿರುತ್ತದೆ. ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾರೆ. ಸಾಮಾಜಿಕ ವ್ಯವಹಾರಗಳ ಪರಿಜ್ಞಾನವಿರುತ್ತದೆ. ಇದೇ ನಿಜವಾದ ಜ್ಞಾನವೂ ಹೌದು. ಮಕ್ಕಳು ಇಂತಹ ಕೊಡುಗೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮವಾಗಿ ಕಲಿತು ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕು. ಹೆತ್ತವರಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು ಎಂದರು.

ತಾಲೂಕು ಗ್ರಂಥಾಲಯದ ಗ್ರಂಥ ಪಾಲಕ ಟಿ.ಕೆ.ನಾಗರಾಜ್ ಮಾತನಾಡಿ, ತಾಳೂರು ಶಾಲೆಗೆ ಬರುವುದೇ ನಮಗೆಲ್ಲಾ ಖುಷಿ. ಇಲ್ಲಿನ ವಾತಾವರಣ ಕಣ್ಮನ ಸೆಳೆಯುತ್ತದೆ. ಮಕ್ಕಳ ಕಲಿಕೆಗೆ ಇಂತಹ ಒಳ್ಳೆಯ ವಾತಾವರಣವಿರಬೇಕು ಎಂದರು.

ಆಲೂರು ಬಿಲಿವಿರ್ಸ್ ಚರ್ಚಿನ ಫಾದರ್ ಡಿ.ಸಿ.ಬಸವರಾಜ್ ಮಾತನಾಡಿ, ನಮ್ಮ ಚರ್ಚಿನ ಅಭ್ಯುದಯಗೊಳಿಸಿದವರಲ್ಲಿ ಒಬ್ಬರಾದ ಮೆಟ್ರೋ ಪೊಲಿಟೀನ್ ಡಾ. ಯೋಹನಾನ್ ಸ್ಮರಣಾರ್ಥ ಆಯ್ದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅಗತ್ಯವಿರುವ ಶೈಕ್ಷಣಿಕ ಪರಿಕರಗಳನ್ನು ದೇಣಿಗೆ ನೀಡುತ್ತಿದ್ದೇವೆ. ಈ ಶೈಕ್ಷಣಿಕ ವರ್ಷದಲ್ಲಿ ತಾಳೂರು ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅವಕಾಶ ಕಲ್ಪಿಸಿಕೊಟ್ಟ ತಾಳೂರು ಶಾಲೆ ಹಾಗೂ ಗ್ರಾಮಕ್ಕೆ ಧನ್ಯವಾದಗಳು ಎಂದರು.

ಎಸ್.ಡಿ.ಎಂ.ಸಿ. ಅಧ್ಯಕ್ಷ ಟಿ.ಕೆ.ದಿನೇಶ್, ಮುಖ್ಯ ಶಿಕ್ಷಕ ಕೊಟ್ರೇಶ್ ಎಸ್.ಉಪ್ಪಾರ್, ಅತಿಥಿ ಶಿಕ್ಷಕಿ ಎ.ಎಸ್.ರೇಖಾ ಹಾಗೂ ಮಕ್ಕಳು ಹಾಜರಿದ್ದರು.

Share this article