ಮರಿಯಮ್ಮನಹಳ್ಳಿ: ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವ ಮೂಲಕ ನುಡಿ ಕನ್ನಡ, ನಡೆ ಕನ್ನಡ, ಉಸಿರು ಕನ್ನಡ ಎಂದು ಪ್ರತಿಯೊಬ್ಬ ಕನ್ನಡಿಗರು ಜೀವಿಸಬೇಕು ಎಂದು ಶಾಸಕ ಕೆ. ನೇಮರಾಜ್ ನಾಯ್ಕ ಹೇಳಿದರು.ಅವರು ಪಟ್ಟಣದ ಸರ್ಕಾರಿ ಫೌಢ ಶಾಲಾ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಕರ್ನಾಟಕ ರಾಜ್ಯೋತ್ಸವದ ಸಿಂಧೂರ ಭಂಡಾರ ಎನ್ನುವ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ನಾಡಿನಲ್ಲಿ ಅನೇಕ ಸಾಧು-ಸಂಸರು- ದಾಸರು- ಶಿವಶರಣರು ಕವಿಗಳು ಈ ಪುಣ್ಯಭೂಮಿಯಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪಂಪ, ರನ್ನ, ಪೊನ್ಮ ಜನ್ನ, ಕುವೆಂಪು ಸೇರಿದಂತೆ ನೂರಾರು ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿಯೊಬ್ಬರು ಅತ್ಯಂತ ಸಡಗರ ಸಂಭ್ರಮದಿಂದ ಒಗ್ಗೂಡಿ ಆಚರಿಸಬೇಕು. ಇದೊಂದು ಕನ್ನಡಿಗರ ಸಡಗರದ ಹಬ್ಬವಾಗಿದೆ ಎಂದು ಅವರು ಹೇಳಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದೆ ಮಾತಾ ಮಂಜಮ್ಮ ಜೋಗತಿ ಮಾತನಾಡಿ, ನಾವು ಕೇವಲ ನವೆಂಬರ್ ಕನ್ನಡಿಗರಾಗದೇ, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಗಳಾಗಿ ಕನ್ನಡದಲ್ಲೇ ಮಾತನಾಡಬೇಕು. ಕನ್ನಡದಲ್ಲೇ ಬರೆಯಬೇಕು. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸಬೇಕು. ಕನ್ನಡ ನಾಡು ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ನಮ್ಮ ಮಕ್ಕಳನ್ನು 1ರಿಂದ10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಸರ್ಕಾರಿ ಶಾಲೆಗೆ ಓದಿಸುವ ಮೂಲಕ ಕನ್ನಡ ಭಾಷೆ ಉಳಿವೆಗೆ ಸದಾ ಕಟ್ಟಿಬದ್ಧರಾಗಿರಬೇಕು ಎಂದು ಅವರು ಹೇಳಿದರು.ಮಂಡಲ ಮಂಚಾಯಿತಿ ಮಾಜಿ ಪ್ರಧಾನ ಎಂ. ವಿಶ್ವನಾಥ ಶೆಟ್ಟಿ, ರಂಗಕಲಾವಿದೆ ಡಾ. ಕೆ. ನಾಗರತ್ನಮ್ಮ, ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ ಸಭೆಯಲ್ಲಿ ಮಾತನಾಡಿದರು.
ಕಲಾವಿದರಾದ ಎಸ್.ರೇಣುಕಮ್ಮ, ಬಿ.ಶಾರದಮ್ಮ, ಬಿ.ಎಂ.ಎಸ್. ಪ್ರಭು, ಕೊಟ್ಗಿ ಮಲ್ಲನಗೌಡ, ಪತ್ತಾರ್ ಪೀರ್ ಸಾಹೇಬ್, ಬಿ. ಸರದಾರ, ಬಿ.ಎಂ. ಯೋಗೇಶ್, ಕೆ. ರಾಮಚಂದ್ರಪ್ಪ, ಪಿ. ಚಿದಾನಂದ, ಎಲ್. ರಾಮಾಂಜಿನೇಯ, ಚಂದ್ರಕಾಂತ್, ಜೆ. ದುರ್ಗಾದಾಸ್, ಸಾಧಕರಾದ ಶಿವಶಂಕರ್ ಬಣಗಾರ್, ಮೇಟಿ ಕೊಟ್ರಪ್ಪ, ಡಾ. ಪ್ರವೀಣ್, ಹನುಮಂತಪ್ಪ, ಪೂಜಾರ್ ಬಸವರಾಜ, ರಾಜು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶಾಸಕರ ಆಪ್ತಕಾರ್ಯದರ್ಶಿ ಬಿ. ದೊಡ್ಡಬಸಪ್ಪ ರೆಡ್ಡಿ ಸ್ವಾಗತಿಸಿದರು. ಶಿವಶಂಕರಯ್ಯ, ಗವಿಸಿದ್ದಯ್ಯ ನಿರೂಪಿಸಿದು.ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿತ್ರನಟ ಪ್ರೇಮ್, ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕ ಹೇಮಂತ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಹಾಗೂ ಖ್ಯಾತ ಗಾಯಕ ಕಲಾವಿದರಾದ ದಿವ್ಯ ರಾಮಚಂದ್ರ, ಶಿವಾನಿ, ಮನೋಜವಂ, ಅಶ್ವಿನ್ ಶರ್ಮ, ಅಶ್ವಿನಿ, ವಿನೋದ, ಅಭಿನಂದನ್, ಐಶ್ವರ್ಯ, ಕಾರ್ತಿಕ್ ಹುಲಿ, ಜಗ್ಗಪ್ಪ, ಸುಷ್ಮಿತ ಸೇರಿದಂತತೆ ಇತರೆ ಕಲಾವಿದರಿಂದ ಸಂಗೀತ, ನೃತ್ಯ ಹಾಗೂ ಹಾಸ್ಯ ಕಾರ್ಯಕ್ರಮಗಳು ನಡೆದವು.