ಗೋವು ಸಾಕಿದವರಿಗೆ ದರಿದ್ರತನ ಬಾರದು: ಸಚಿವ ಮಂಕಾಳ ವೈದ್ಯ

KannadaprabhaNewsNetwork |  
Published : Feb 06, 2025, 11:47 PM IST
ಹೈಗುಂದದಲ್ಲಿ ಮಿಶ್ರತಳಿ ಹಾಗೂ ದೇಶಿ ತಳಿ ಕರುಗಳ ಪ್ರದರ್ಶನ ನಡೆಯಿತು. | Kannada Prabha

ಸಾರಾಂಶ

ಭೂಮಿಯ ಮೇಲೆ ಮನುಷ್ಯ ಜೀವಿಸಲು ಆರಂಭಿಸದಾಗಿನಿಂದ ಗೋವು ಇದೆ. ಗೋವನ್ನು ಸಾಕುವುದಕ್ಕೆ ಒಂದು ಇತಿಹಾಸವಿದೆ. ಗೋವಿನ ಯಾವ ಉತ್ಪನ್ನವೂ ಅಪ್ರಯೋಜಕವಲ್ಲ. ಮಗುವಾಗಿದ್ದಾಗ ತಾಯಿಯ ಹಾಲು ನಂತರ ಆಕಳ ಹಾಲು ಬೇಕು.

ಹೊನ್ನಾವರ: ಗೋವನ್ನು ಸಾಕಿದವರಿಗೆ ದರಿದ್ರತನ ಬರುವುದಿಲ್ಲ. ಗೋವನ್ನು ಅಕ್ಕರೆಯಿಂದ ಸಾಕಿ. ಗೋವು ಮತ್ತು ರೈತರ ಪರವಾಗಿ ನಾನು ಇರುತ್ತೇನೆ ಎಂದು ಜಿಲ್ಲಾ ಉತ್ಸುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.

ತಾಲೂಕಿನ ಹೈಗುಂದದಲ್ಲಿ ತಾಲೂಕು ಪಶು ಸಮಗೋಪನಾ ಇಲಾಖೆ ವತಿಯಿಂದ ನಡೆದ ಮಿಶ್ರತಳಿ ಹಾಗೂ ದೇಶಿ ತಳಿ ಕರುಗಳ ಪ್ರದರ್ಶನ ಮತ್ತು ಬರಡು ಜಾನುವಾರುಗಳ ಉಚಿತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಭೂಮಿಯ ಮೇಲೆ ಮನುಷ್ಯ ಜೀವಿಸಲು ಆರಂಭಿಸದಾಗಿನಿಂದ ಗೋವು ಇದೆ. ಗೋವನ್ನು ಸಾಕುವುದಕ್ಕೆ ಒಂದು ಇತಿಹಾಸವಿದೆ. ಗೋವಿನ ಯಾವ ಉತ್ಪನ್ನವೂ ಅಪ್ರಯೋಜಕವಲ್ಲ. ಮಗುವಾಗಿದ್ದಾಗ ತಾಯಿಯ ಹಾಲು ನಂತರ ಆಕಳ ಹಾಲು ಬೇಕು ಎಂದರು.ಪಶುಪಾಲನೆ ಮತ್ತು ಪಶುವೈದ್ಯಕೀಯ ಉಪನಿರ್ದೇಶಕ ಡಾ. ಕೆ.ಎಂ. ಮೋಹನ ಕುಮಾರ ಮಾತನಾಡಿ, ಸಚಿವ ಮಂಕಾಳ ವೈದ್ಯರ ಪ್ರಯತ್ನದಿಂದ ಗುತ್ತಿಗೆ ಆಧಾರದಲ್ಲಿ ೪೦೦ ಪಶುವೈದ್ಯರನ್ನು ನೇಮಿಸಿಕೊಳ್ಳಲಾಗಿದೆ. ಇವರಲ್ಲಿ ಉತ್ತರಕನ್ನಡದಲ್ಲಿ ೧೬ ವೈದ್ಯರು ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ತಾಲೂಕಿನ ಮಂಕಿಯಲ್ಲಿ ಹೊಸದಾಗಿ ಪಾಲಿ ಕ್ಲಿನಿಕ್ ಆರಂಭಿಸಲಾಗುತ್ತದೆ. ಅಲ್ಲದೆ ೧೯೬೨ ನಂಬರ್‌ಗೆ ಕರೆ ಮಾಡಿದರೆ ಮನೆ ಬಾಗಿಲಿಗೆ ಸೇವೆ ವಾಹನ ಬರುತ್ತದೆ. ಜಿಲ್ಲೆಯಲ್ಲಿ ೧೩ ಆ್ಯಂಬುಲೆನ್ಸ್‌ಗಳು ಕಾರ್ಯ ನಡೆಸುತ್ತಿದೆ ಎಂದರು.ರೋಟರಿ ಕ್ಲಬ್‌ನ ಸದಸ್ಯ ಮಹೇಶ ಕಲ್ಯಾಣಪುರ ಮಾತನಾಡಿ, ಮುಂದಿನ ಪೀಳಿಗೆಗೆ ಸಂಸ್ಕಾರವನ್ನು ಬೆಳೆಸಲು ಆಕಳನ್ನು ಸಾಕುವ ಕೆಲಸವನ್ನು ಮಾಡಬೇಕು ಎಂದರು.ಇದೇ ವೇಳೆ ಈ ಕಾರ್ಯಕ್ರಮದಲ್ಲಿ ಹಾಲು ಕರೆಯುವ ಸ್ಪರ್ಧೆ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಪಶುವೈದ್ಯಾಧಿಕಾರಿ ಡಾ. ಪ್ರಕಾಶ ತೀರ್ಪುಗಾರರಾಗಿ ಬಂದಿದ್ದರು. ಇದೇ ವೇಳೆ ಸಚಿವ ಮಂಕಾಳ ವೈದ್ಯರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಪ್ರಮೋದ್ ನಾಯ್ಕ, ಗಣಪು ಗಣೇಶ ಹಳ್ಳೇರ, ವಿನಾಯಕ ನಾಯ್ಕ ಮೂಡ್ಕಣಿ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಚೇತನ್ ಕುಮಾರ್ ಇದ್ದರು.ತಾಲೂಕು ಪಶು ಸಂಗೋಪಲನಾ ಇಲಾಖೆಯ ವೈದ್ಯಾಧಿಕಾರಿ ಡಾ. ಬಸವರಾಜ್ ಅವರ ನಾಯಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಶು ವೈದ್ಯಕೀಯ ಪರೀಕ್ಷಕ ರಾಜೇಶ ನಾಯ್ಕ ಸ್ವಾಗತಿಸಿದರು. ಡಾ. ಪ್ರಕಾಶ ಹೆಗಡೆ ವಂದಿಸಿದರು. ಪ್ರಶಾಂತ್ ಹೆಗಡೆ ನಿರೂಪಿಸಿದರು.

ಜ್ಯೋತಿರ್ವನಕ್ಕೆ ವಿದ್ಯಾರ್ಥಿಗಳ ಭೇಟಿ

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಬಳಿಯ ಕಾಗಾರಕೊಡ್ಲುವಿನ ಸುಮೇರು ಜ್ಯೋತಿರ್ವನಕ್ಕೆ ಶಿರಸಿಯ ಅರಣ್ಯ ಮಹಾವಿದ್ಯಾನಿಲಯದ ಪದವಿ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗ್ರಹಗಳಿಗೆ ಸಂಬಂಧಪಟ್ಟ 48 ವೃಕ್ಷಗಳ ಮಾಹಿತಿ ಪಡೆದುಕೊಂಡರಲ್ಲದೇ, ಜ್ಯೋತಿಷಕ್ಕೂ ವೃಕ್ಷಗಳಿಗೂ ಇರುವ ಸಂಬಂಧ, ಆಕಾಶಕಾಯಗಳಿಗೂ ವೃಕ್ಷಗಳಿಗೂ ಇರುವ ಸಂಬಂಧ, ಮನುಷ್ಯನ ದೇಹಕ್ಕೂ ವೃಕ್ಷಗಳಿಗೂ ಇರುವ ಸಂಬಂಧದ ಕುರಿತು ಮಾಹಿತಿ ಪಡೆದರು.ಜ್ಯೋತಿರ್ವನ ಕುಟೀರದ ಮಾಹಿತಿ ಪಡೆದುಕೊಂಡದ್ದಲ್ಲದೇ, ಆಕಾಶ ವೀಕ್ಷಣೆ, ನಕ್ಷತ್ರ ಹಾಗೂ ಗ್ರಹಗಳ ಪೂರ್ಣ ಪರಿಚಯವನ್ನು ಮಾಡಿಕೊಂಡು ಸಂವಾದ ನಡೆಸಿದರು.

ಜ್ಯೋತಿಷಿ ಹಿತ್ಲಳ್ಳಿ ನಾಗೇಂದ್ರ ಭಟ್ಟರು ವೃಕ್ಷಗಳ ಮಾಹಿತಿ ನೀಡಿದರು. ಜ್ಯೋತಿರ್ವನದ ಸಂಚಾಲಕ ಡಾ. ಕೆ.ಸಿ. ನಾಗೇಶ, ಅರಣ್ಯ ಕಾಲೇಜಿನ ಉಪನ್ಯಾಸಕ ವಿನಾಯಕ ಭಟ್ಟ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದಲ್ಲದೆ, ವಿದ್ಯಾರ್ಥಿಗಳ ಸಂದೇಹಗಳಿಗೆ ಉತ್ತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!