ಕನ್ನಡಪ್ರಭ ವಾರ್ತೆ ಬಂಟ್ವಾಳ
ಗೋಮಾತೆ ಭೂಮಾತೆಯ ಪ್ರತೀಕವಾಗಿದ್ದು, ಸಾಕ್ಷತ್ ಭಗವಂತನನ್ನು ಗೋಮಾತೆಯ ಮೂಲಕ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಗೋ ಮಾತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಪರಿಗಣಿಸಿ ಸ್ವೀಕರಿಸುವ ಮೂಲಕ ಈ ಬಗ್ಗೆ ಘೋಷಣೆ ಮಾಡುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಗ್ರಾಮ ವಿಕಾಸ ಮಂಗಳೂರು ವಿಭಾಗದ ರಮಿತಾ ಶೈಲೇಂದ್ರ ಕಾರ್ಕಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಗೋಸೇವಾ ಗತಿ ವಿಧಿ ಕರ್ನಾಟಕ, ರಾಧ ಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ ನಂದಿ ರಥಯಾತ್ರೆ ಆಯೋಜನಾ ಸಮಿತಿ ಸಿದ್ದಕಟ್ಟೆ, ಸಂಗಬೆಟ್ಟು ಮಂಡಲ ಬಂಟ್ವಾಳ ತಾಲೂಕು ವತಿಯಿಂದ ಸಿದ್ದಕಟ್ಟೆ ಪೇಟೆಯಲ್ಲಿ ಜರಗಿದ ನಂದಿರಥ ಯಾತ್ರೆ ಶೋಭಾಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ಸಂದರ್ಭ ಏರ್ಪಡಿಸಲಾದ ವಿಷ್ಣು ಸಹಸ್ರ ನಾಮ ಪಾರಾಯಣ ಹಾಗೂ ಗೋಕಥೆ ಬಗೆಗಿನ ಸಾಮೂಹಿಕ ಸಭಾ ಕಾರ್ಯಕ್ರಮದಲ್ಲಿ ಅವರು ಗೋವಿನ ವಿಶೇಷತೆ ಬಗ್ಗೆ ಬೌದ್ದಿಕ್ ನೀಡಿದರು.
ರಾಮ ಸುರಭಿ ಗೋಮಂದಿರ ಪುದು ಬಂಟ್ವಾಳ , ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ ಸಂಸ್ಥಾಪಕ ಭಕ್ತಿ ಭೂಷಣ್ ದಾಸ್ ಮಾತಾನಾಡಿ, ಗೋವಿನ ಪ್ರತಿಯೊಂದು ವಸ್ತುವೂ ಸಕಲ ರೋಗಗಳಿಗೆ ಮನೆ ಮದ್ದಾಗಿದ್ದು ಗೋವು ರಕ್ಷಣೆ ಮಾಡಿದರೆ ಮಾತ್ರ ಮನುಕುಲದ ರಕ್ಷಣೆ ಆಗುತ್ತದೆ. ಗೋವು ಸಂತತಿ ಇಲ್ಲದೇ ಮಾನವ ಸಂತತಿ ಬೆಳವಣಿಗೆ ಸಾಧ್ಯವಿಲ್ಲ. ಗೋವು ಇಲ್ಲದೇ ಮಾನವನು ಜೀವನ ನಡೆಸುವುದಕ್ಕೆ ಸಾಧ್ಯವೇ ಇಲ್ಲ. ಆದುದರಿಂದ ನಾವು ನಿತ್ಯ ಜೀವನದಲ್ಲಿ ಗೋಭಕ್ತಿ ಮತ್ತು ಗುರುಭಕ್ತಿಯನ್ನು ಮೈಗೂಡಿಸಿಗೊಂಡಾಗ ಜೀವನ ಸಾರ್ಥಕವಾಗಲು ಸಾಧ್ಯ ಎಂದರು.ಆರಂಬೋಡಿ ಹಾಲು ಉತ್ಪಾದಕರ ಸಹಕಾರದ ಸಂಘದ ಉಪಾಧ್ಯಕ್ಷ ಪ್ರತಾಪ ಶೆಟ್ಟಿ ಕುಂಡಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಂದಿ ರಥಯಾತ್ರೆ ಆಯೋಜನಾ ಸಮಿತಿ ಸಿದ್ದಕಟ್ಟೆ ಸಂಚಾಲಕ ಪ್ರಭಾಕರ ಪ್ರಭು ಸ್ವಾಗತಿಸಿದರು. ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಗೌಡ ಮಂಚಕಲ್ಲು ವಂದಿಸಿದರು.