ಡಿಸಿ ಕಚೇರಿ ಮುಂದೆ ಸಿಪಿಐ ಪ್ರತಿಭಟನೆ । ಸಚಿವ ಈಶ್ವರ್ ಖಂಡ್ರೆಗೆ ಮನವಿ । ಅರಣ್ಯ, ಕಂದಾಯ ಭೂಮಿ ಗಡಿ ಗರುತಿಗೆ ಒತ್ತಾಯ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಮೊಳಕಾಲ್ಮೂರು ತಾಲೂಕಿನ ಅರಣ್ಯ ಮತ್ತು ಕಂದಾಯ ಜಮೀನಿನ ಗಡಿ ಗುರುತು ಮಾಡಬೇಕು ಹಾಗೂ ಫಾರಂ ನಂ. 57ರಲ್ಲಿ ಅರ್ಜಿ ಹಾಕಿರುವ ತಾಲೂಕಿನ ಬಗರ್ ಹುಕುಂ ರೈತರಿಗೆ ಸಾಗುವಳಿ ಕೊಡಲು ಅನುವು ಮಾಡಿಕೊಡುವಂತೆ ಆಗ್ರಹಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರಿಗೆ ಸಿಪಿಐ ಮನವಿ ಸಲ್ಲಿಸಿತು. ಪ್ರತಿಭಟನೆ ನೇತೃತ್ವ ವಹಿಸಿದ್ದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸಿ.ಸುರೇಶ್ ಬಾಬು ಮಾತನಾಡಿ, ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಹೋಬಳಿಯ ರಾಂಪುರ ವ್ಯಾಪ್ತಿಯಲ್ಲಿ ಬರುವ ರಾಂಪುರ ಸರ್ವೇ ನಂ 47, ಬಸಾಪುರ, ಸರ್ವೇ ನಂ 14, ದಡಗೂರು ಸರ್ವೇ ನಂ 23, ವಡ್ಡರಹಳ್ಳಿ ಸರ್ವೇ ನಂ 32ಕ್ಕೆ ಸಂಬಂಧಿಸಿದ ಅರಣ್ಯ ಹಕ್ಕು ಅರ್ಜಿದಾರರು ಮತ್ತು ಬಗರ್ ಹುಕುಂ ಅರ್ಜಿ ರೈತ ಫಲಾನುಭವಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದರು.ಅರಣ್ಯ ಮತ್ತು ಕಂದಾಯ ಭೂಮಿಯನ್ನು ಇದುವರೆಗೆ ಎರಡು ಇಲಾಖೆಗಳು ಗಡಿ ಗುರುತಿಸುವಲ್ಲಿ ವಿಫಲರಾಗಿದ್ದಾರೆ. ಸುಮಾರು 50-60 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದರು ಅರಣ್ಯ ಭೂಮಿ ಅರ್ಜಿದಾರರು ಮತ್ತು ಬಗರ್ ಹುಕುಂ ಅರ್ಜಿದಾರರು ಅಕ್ರಮ-ಸಕ್ರಮ ಕೋರಿ ಸಲ್ಲಿಸಿದ ಅರ್ಜಿಗಳು ವಜಾಗೊಳ್ಳುತ್ತಲೇ ಬಂದಿವೆ. ಕಂದಾಯ ಇಲಾಖೆ ಅರಣ್ಯ ಜಮೀನು ಎಂದು ಅರಣ್ಯ ಇಲಾಖೆ ಕಂದಾಯ ಜಮೀನು ಎಂದು ಸಬೂಬು ಹೇಳಿ ಅರ್ಜಿಗಳನ್ನು ವಜಾ ಮಾಡುತ್ತಲೇ ಬಂದಿದೆ ಎಂದು ದೂರಿದರು.
ಮೊಳಕಾಲ್ಮೂರು ತಾಲೂಕಿನಲ್ಲಿ ಸದರಿ ಸುಮಾರು 50-60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಫಾರಂ 57ರಲ್ಲಿ ಅಕ್ರಮ-ಸಕ್ರಮ ಕೋರಿ ಅರ್ಜಿಗಳನ್ನು 2019ರಲ್ಲಿ ಸಲ್ಲಿಸಿರುತ್ತಾರೆ. ಇದರ ಪೂರಕವಾಗಿ ತಾಲೂಕು ಆಡಳಿತ 1490 ಅರ್ಜಿಗಳಲ್ಲಿ 493 ಅರ್ಜಿಗಳನ್ನು ಆಯ್ಕೆ ಮಾಡಿ ಹಂಚಲು ಈ ಹಿಂದೆ ಆಧ್ಯತೆ ಮಾಡುವ ಹಂತದಲ್ಲಿ ಇರುವಾಗ ಇನ್ನೊಮ್ಮೆ ಸರ್ಕಾರ ಮರು ಅರ್ಜಿಗಳನ್ನು ಸ್ವೀಕರಿಸಲು ಕಾಲಾವಕಾಶ ನೀಡಿ ಮತ್ತೆ ಅರ್ಜಿ ಆಹ್ವಾನಿಸಲಾಗಿತ್ತು. ಪ್ರಸ್ತುತ ಮೊಳಕಾಲ್ಮೂರು ತಾಲೂಕಿನಲ್ಲಿ ಒಟ್ಟು 212 ಅರ್ಜಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಾಗಿದೆ. ಸರ್ಕಾರ ರೈತರ ಪೂರಕ ಕಾನೂನು ಜಾರಿಗೆ ತಂದಿದೆ ಎಂದು ಕಾರಣ ಹೇಳಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ತಾಲೂಕಿನಲ್ಲಿ ನೆಪ ಮಾತ್ರಕ್ಕೆ ನೇಮಕ ಮಾಡಿರುವ ಬಗರ್ಹುಕುಂ ಸಮಿತಿ ನಿಷ್ಕ್ರಿಯಗೊಂಡಿದೆ. ಸರ್ಕಾರದ ಆದೇಶದ ನೆಪ ಹೇಳಿ ಆಯ್ಕೆಯಾದ ಸದಸ್ಯರು ಯಾರು ಎಂಬುವುದು ರೈತರಿಗೆ ತಿಳಿಯದಂತಾಗಿದೆ. ರೈತರು ಭೂಮಿಯನ್ನು ನಂಬಿ ತುಂಡು ಜಮೀನಿಗೆ ಅಕ್ರಮ-ಸಕ್ರಮ ಕೋರಿದವರಿಗೆ ಮುಂದೆ ಎಲ್ಲಿ ಭೂಮಿ ಕೈ ತಪ್ಪಿ ಹೋಗುತ್ತದೆ ಎಂಬ ಆತಂಕದಲ್ಲಿದ್ದಾರೆ. ಎಂದರು.
ಸರ್ವೇ ನಂ 47, 14. 23, 32ರಲ್ಲಿ ಹಾಕಿದ ಬಗರ್ ಹುಕುಂ ರೈತರ ಸುಮಾರು 500 ಅರ್ಜಿಗಳನ್ನು ಪ್ರಸ್ತುತ ಫಾರಂ ನಂ 50, 53, 57ರ ಪಟ್ಟಿಗೆ ಪರಿಗಣಿಸಿದೇ ನಿರ್ಲಕ್ಷ್ಯ ಮಾಡಿರುತ್ತಾರೆ. ಸುಮಾರು 500ಕ್ಕೂ ಹೆಚ್ಚು ರೈತರು ಎರಡು ಇಲಾಖೆಗಳ ತಿಕ್ಕಾಟದಲ್ಲಿ ಆತಂತ್ರರಾಗಿದ್ದಾರೆ ಎಂದರು.ಮೊಳಕಾಲ್ಮೂರು ಸಿಪಿಐ ತಾಲೂಕು ಕಾರ್ಯದರ್ಶಿ ಜಾಫರ್ ಷರೀಫ್, ಜಗನ್ನಾಥ್, ಕೀರ್ತಿ, ಹೊಲಪ್ಪ, ಗಂಗರಾಜು, ಶಾಂತಮೂರ್ತಿ, ಮಾರಣ್ಣ, ಗಂಗಾಧರ್, ನಾಗರಾಜ್, ಲಕ್ಷ್ಮಣ್, ದೊಡ್ಡಮಾರಣ್ಣ, ಗೋಪಾಲ್, ಹನುಮಂತಪ್ಪ ಇತರರು ಭಾಗವಹಿಸಿದ್ದರು.