ಧರ್ಮಸ್ಥಳ ಅಸಹಜ ಸಾವುಗಳ ಮರು ತನಿಖೆಗೆ ಸಿಪಿಎಂ ಒತ್ತಾಯ

KannadaprabhaNewsNetwork |  
Published : Jul 27, 2025, 12:01 AM IST

ಸಾರಾಂಶ

ಉಜಿರೆ ಸಮೀಪದ ಪಾಂಗಳದ ಅಪ್ರಾಪ್ತ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ, ಅದನ್ನು ಮುಚ್ಚಿ ಹಾಕಲು ನಡೆಸಿದ ವ್ಯವಸ್ಥಿತ ಪ್ರಯತ್ನಗಳು ಮರೆಯಲಾರದ ಸಂಗತಿಗಳಾಗಿವೆ.

ದೊಡ್ಡಬಳ್ಳಾಪುರ: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸುತ್ತಮುತ್ತ ಕಳೆದ ದಶಕಗಳಲ್ಲಿ ನಡೆದ ''''ಅಸಹಜ ಸಾವುಗಳು'''' ಎಂಬ ಹಣೆಪಟ್ಟಿ ಹೊತ್ತ ನೂರಾರು ಪ್ರಕರಣಗಳು ಮತ್ತು ಆಗಾಗ್ಗೆ ಹೊರಬೀಳುತ್ತಿರುವ ಹಲವು ಸಂಗತಿಗಳ ಬಗ್ಗೆ ಮರು ತನಿಖೆ ನಡೆಸಿ ಸತ್ಯವನ್ನು ಹೊರಗೆಳೆಯುವಂತೆ ರಾಜ್ಯ ಸರ್ಕಾರಕ್ಕೆವನ್ನು ಸಿಪಿಎಂ ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್‌, ಉಜಿರೆ ಸಮೀಪದ ಪಾಂಗಳದ ಅಪ್ರಾಪ್ತ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ, ಅದನ್ನು ಮುಚ್ಚಿ ಹಾಕಲು ನಡೆಸಿದ ವ್ಯವಸ್ಥಿತ ಪ್ರಯತ್ನಗಳು ಮರೆಯಲಾರದ ಸಂಗತಿಗಳಾಗಿವೆ. ಅಮಾಯಕನೊಬ್ಬನನ್ನು ಆರೋಪಿಯೆಂದು ಹೆಸರಿಸಿ ಜೈಲಿಗೆ ಹಾಕಿದ್ದು, ದುರುದ್ದೇಶಪೂರ್ವಕವಾಗಿ ಸಾಕ್ಷಿ ನಾಶ ಮಾಡಿದ್ದರ ವಿರುದ್ಧ ವ್ಯಾಪಕವಾಗಿ ಪ್ರತಿಭಟನೆಗಳು ನಡೆದಿದ್ದವು. ನಂತರ ಪ್ರಕರಣವನ್ನು ಸಿಬಿಐಗೆ ವಹಿಸಿ, ತನಿಖೆ ನಡೆದು ಸಿಬಿಐ ನ್ಯಾಯಾಲಯದ ತೀರ್ಪು ಕೂಡ ಬಂದಿದೆ. ಆದರೆ ಸಾಕ್ಷ್ಯನಾಶ ಮತ್ತು ಉದ್ದೇಶಪೂರ್ವಕ ವ್ಯಕ್ತಿಗಳ ರಕ್ಷಣೆ ಪಿತೂರಿಯಂತೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಈಗ ಧರ್ಮಸ್ಥಳ ಮಂಜುನಾಥ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿಯುಕ್ತನಾಗಿದ್ದ ಎನ್ನಲಾದ ಅನಾಮಧೇಯ ವ್ಯಕ್ತಿಯೊಬ್ಬ ಆ ಅವಧಿಯಲ್ಲಿ ಹಲವಾರು ದೇಹಗಳನ್ನು ಹೂಳುವ ಕೆಲಸ ಮಾಡಿದ್ದೇನೆಂದು ಪೊಲೀಸರಿಗೆ ಮತ್ತು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಧಿಕೃತವಾಗಿ ತಿಳಿಸಿದ್ದಾರೆ. ಇದು ಇಡೀ ಪ್ರಕರಣದಲ್ಲಿ ಈ ಮೊದಲೇ ಸಾಮಾಜಿಕ ಕಳಕಳಿಯ ಸಂಘಟನೆಗಳು, ವ್ಯಕ್ತಿಗಳು ಎತ್ತಿದ ಹಲವು ಪ್ರಶ್ನೆಗಳಿಗೆ ಉತ್ತರವಾಗಿದೆ. ಆದರೆ, ಸಾಕ್ಷಿ ದೂರುದಾರನ ಹೇಳಿಕೆಯ ನಂತರ ಕ್ಷಿಪ್ರಗತಿಯಲ್ಲಿ ಸರಕಾರವೇಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ನಮ್ಮ ಪ್ರಶ್ನೆಯಾಗಿದೆ ಎಂದ ಹೇಳಿದ್ದಾರೆ.

ಇದೇ ವೇಳೆಗೆ ಮೆಡಿಕಲ್ ವಿದ್ಯಾರ್ಥಿನಿಯೊಬ್ಬಳು ಏಕಾಏಕಿ ಕಾಣೆಯಾಗಿದ್ದ ಪ್ರಕರಣದ ಸಂತ್ರಸ್ಥ ತಾಯಿಯೊಬ್ಬಳು ಹೂತ ಹೆಣಗಳಲ್ಲಿ ತನ್ನ ಮಗಳ ದೇಹವೂ ಇರಬಹುದಾಗಿದ್ದು ಎತ್ತಿದ ಹೆಣಗಳ ಡಿಎನ್ಎ ಪರೀಕ್ಷೆ ನಡೆಸಿ ಖಚಿತವಾದಲ್ಲಿ ತಮ್ಮ ಸಂಪ್ರದಾಯದಂತೆ ಸಂಸ್ಕಾರ ಮಾಡಿಸುವುದಾಗಿ ಪ್ರಕರಣ ದಾಖಲಿಸಿದ ಘಟನೆಯೂ ನಡೆದಿದೆ. ಇದೇ ಸಮಯದಲ್ಲಿ ತಾನೇ ಸ್ವತಃ ಹೂಳಿರುವುದಾಗಿ ದೂರು ನೀಡಿರುವ ಸಾಕ್ಷಿ ಫಿರ್ಯಾದುದಾರರು ಹೂತಿರುವ ಕಳೇಬರವನ್ನು ತೆಗೆಯುವುದಾಗಿ ಹೇಳಿದ್ದರೂ ಅವುಗಳ ಬಗ್ಗೆ ಪೊಲೀಸರು ಆಸಕ್ತಿ ತೋರಿಸುತ್ತಿಲ್ಲ ಎಂಬುದಾಗಿ ವರದಿಗಳು ಬರುತ್ತಿವೆ. ಪ್ರಕರಣದ ಸರಿಯಾದ ತನಿಖೆಗೆ ಆಸಕ್ತಿ ತೋರಿಸದೇ, ದೂರುದಾರರ ಮಂಪರು ಪರೀಕ್ಷೆ ಮಾಡಲು ಅನುಮತಿ ಕೋರುವುದಾಗಿ ಜಿಲ್ಲಾ ಪೋಲೀಸರು ಹೇಳುತ್ತಿರುವುದು ಆಶ್ಚರ್ಯಕರವಾಗಿದೆ ಎಂದು ತಿಳಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ಸಾಕ್ಷಿ ದೂರುದಾರರ ದೂರಿನನ್ವಯ ಸೌಜನ್ಯ ಪ್ರಕರಣವೂ ಸೇರಿದಂತೆ ಅಸಹಜವೆಂದು ಪರಿಗಣಿಸಿ ಮೂಲೆಗೆ ತಳ್ಳಲ್ಪಟ್ಟ ಎಲ್ಲ ಪ್ರಕರಣಗಳನ್ನು ನ್ಯಾಯಾಲಯದ ಸುಪರ್ದಿಯಲ್ಲಿ ಮರು ತನಿಖೆ ಮಾಡಬೇಕು. ವಿಶೇಷ ತನಿಖಾ ದಳದ ಮೂಲಕ ತನಿಖೆಗೆ ಆದೇಶಿಸಬೇಕು. ತನಿಖೆ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತನಿಖೆಗೆ ಆದೇಶಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''