ನದಾಫ/ಪಿಂಜಾರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ರಚಿಸಿ-ಜಲೀಲಸಾಬ್‌

KannadaprabhaNewsNetwork | Published : Aug 12, 2024 1:04 AM

ಸರಕಾರ ಕೂಡಲೇ ಕರ್ನಾಟಕ ನದಾಫ/ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ರಚನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ ಅಧ್ಯಕ್ಷ ಎಚ್. ಜಲೀಲ್ ಸಾಬ್ ಒತ್ತಾಯಿಸಿದರು.

ಶಿಗ್ಗಾಂವಿ: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಹಲವು ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಸರ್ಕಾರದ ನಿರ್ದೇಶನ ಇದ್ದರೂ ಅಧಿಕಾರಿಗಳ ಮತ್ತು ನಮ್ಮನ್ನು ಉಪಯೋಗಿಸಿಕೊಳ್ಳುವ ರಾಜಕಾರಣಿಗಳ ನಿರ್ಲಕ್ಷ್ಯದಿಂದ ನದಾಫ/ಪಿಂಜಾರ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಸರಕಾರ ಕೂಡಲೇ ಕರ್ನಾಟಕ ನದಾಫ/ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ರಚನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ ಅಧ್ಯಕ್ಷ ಎಚ್. ಜಲೀಲ್ ಸಾಬ್ ಒತ್ತಾಯಿಸಿದರು.ಪಟ್ಟಣದ ಹನುಮಂತಗೌಡ್ರು ಕಲ್ಯಾಣ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿ, ನದಾಫ/ಪಿಂಜಾರ ಜನಾಂಗ ರಾಜ್ಯದಲ್ಲಿ ಸುಮಾರು ೩೦ ಲಕ್ಷ ಜನಸಂಖ್ಯೆ ಇದ್ದು, ಕಡುಬಡತನದಲ್ಲಿ ಕಷ್ಟ್ಟಕರ ಜೀವನ ನಡೆಸುತ್ತಿರುವ ಅತಿ ಹಿಂದುಳಿದ ಸಮಾಜವಾಗಿದೆ. ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿರುವ, ತೀರ ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು, ನಮ್ಮನ್ನು ಆಳುವ ಸರ್ಕಾರಗಳು ಕೇವಲ ನಮ್ಮನ್ನು ಬಳಕೆ ಮಾಡಿಕೊಂಡು ಸಮಾಜದ ಹಿಂದುಳಿದವರ ಅಭಿವೃದ್ಧಿಗಾಗಿ ಗಮನ ಕೊಡುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದರು. ನದಾಫ/ಪಿಂಜಾರ ಸಮಾಜಕ್ಕೆ ಪ್ರವರ್ಗ-೧ ಪ್ರಮಾಣ ಪತ್ರ ಕೊಡಲು ಸುಪ್ರೀಂ ಕೋರ್ಟ್ ಸ್ಪಷ್ಪ ನಿರ್ದೇಶನ ನೀಡಿದಂತೆ ೧೯೯೦-೯೨ರ ಅನ್ವಯ ಸ್ಥಳ ಪರಿಶೀಲನೆ ಮಾಡಿ ಜಾತಿ ಪ್ರಮಾಣ ಪತ್ರ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಅದರ ಹೊರತಾಗಿಯೂ ಕೂಡ ಕೆಲವು ತಾಲೂಕುಗಳಲ್ಲಿ ಅಧಿಕಾರಿಗಳು ಪ್ರಮಾಣ ಪತ್ರ ನೀಡುತ್ತಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯ ಕುಂಠಿತವಾಗುತ್ತಿದ್ದು, ಸಮಾಜದ ಬಡ ಮಕ್ಕಳ ಭವಿಷ್ಯಕ್ಕಾಗಿ ಪ್ರವರ್ಗ-೧ ಪ್ರಮಾಣ ಪತ್ರ ಕೊಡಲು ಸರಕಾರದ ಕಂದಾಯ ಇಲಾಖೆಯಿಂದ ಸ್ಪಷ್ಟ ಆದೇಶ ಹೊರಡಿಸಬೇಕೆಂದು ಸರಕಾರಕ್ಕೆ ಅವರು ಒತ್ತಾಯಿಸಿದರು. ಧಾರವಾಡ ವಿಶ್ವವಿದ್ಯಾಲಯದಲ್ಲಿ ಎರಡು ಕೋಟಿ ಅನುದಾನ ಮೀಸಲಿಟ್ಟು ನದಾಫ್ ಪಿಂಜಾರ ಅಧ್ಯಯನ ಪೀಠ ಸ್ಥಾಪನೆಗಾಗಿ ಸುಮಾರು ವರ್ಷಗಳಿಂದಲೂ ಹಕ್ಕುತಾಯ ಮಾಡುತ್ತಿದ್ದರು ಸಹ ರಾಜ್ಯ ಸರ್ಕಾರ ಇದುವರೆಗೂ ಅಧ್ಯಯನ ಪೀಠ ಸ್ಥಾಪನೆಗಾಗಿ ಗಮನ ಕೊಡುತ್ತಿಲ್ಲ. ನಮ್ಮ ಸಮಾಜವನ್ನು ಬಳಸಿಕೊಂಡು ನಮ್ಮವರೇ ಕೆಲವು ರಾಜಕಾರಣಿಗಳು ತಮ್ಮ ಸ್ವ ಹಿತಕ್ಕೊಸ್ಕರ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಇಂತಹ ಮಲತಾಯಿ ಧೋರಣೆ ಹೀಗೆ ಮುಂದುವರೆದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಜಿ.ಡಿ. ನದಾಫ, ಮೌಲಾಸಾಬ ಬೆಂಡಿಗೇರಿ, ರಿಯಾಜಸಲೀಂ ನಾಗ್ತೆ, ಶಹಬುದ್ದೀನ ಕೊಪ್ಪಳ, ಲಾಲಸಾಬ ನದಾಫ, ಶರೀಫ ನದಾಫ, ಎಚ್. ಐ. ಬೆಳಗಲಿ ಸೇರಿದಂತೆ ಇತರರಿದ್ದರು.