ಕಾರವಾರ: ಡೆಂಘೀ ಸ್ರಾಂಕ್ರಾಮಿಕ ರೋಗವಾಗಿದ್ದು, ಬಹಳ ಬೇಗ ಒಬ್ಬರಿಂದ ಒಬ್ಬರಿಗೆ ಹರಡಲಿದ್ದು, ಈ ರೋಗದ ಕುರಿತಂತೆ ನಗರಸಭೆ, ಆರೋಗ್ಯ ಇಲಾಖೆ, ಆಶಾಕಾರ್ಯಕರ್ತರು ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಗಣಪತಿ ಡಿ ಉಳ್ವೆಕರ್ ಹೇಳಿದರು.
ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಕಾರವಾರದ ಸ್ವಚ್ಚತೆಗೆ ಪೌರಕಾರ್ಮಿಕರು ಕಾರಣರಾಗಿದ್ದಾರೆ. ಆರೋಗ್ಯ ಸುರಕ್ಷಿತ ದೃಷ್ಠಿಯಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು. ಆಶಾ ಕಾರ್ಯಕರ್ತೆಯರು ಮನೆ ಮನೆ ತೆರಳಿ ಜನರಿಗೆ ಅರಿವನ್ನು ಮೂಡಿಸುತ್ತಾರೆ. ಸಾರ್ವಜನಿಕರು ಇದನ್ನು ಅರಿತುಕೊಂಡು ಜಾಗೃತರಾಗಿರಬೇಕು ಎಂದರು.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನೀರಜ್, ಡೆಂಘೀ ರೋಗವು ಸೊಳ್ಳೆಯಿಂದ ಬರುವ ರೋಗವಾಗಿದ್ದು, ಇದು ಹರಡದಂತೆ ನಿಯಂತ್ರಸಲು ಈಗಾಗಲೇ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆರು ಜಾಗೃತಿ ಮೂಡಿಸುತ್ತಿದ್ದು, ಸೊಳ್ಳೆಯ ಸಂತಾನೋತ್ಪತ್ತಿ ತಾಣವಾದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಮತ್ತು ಮನೆಯ ಒಳಗೆ, ಡ್ರಂ, ತೋಟಿ ಮುಂತಾದವುಗಳಲ್ಲಿ ನೀರು ಕಲುಷಿತವಾಗದಂತೆ ಸ್ವಚ್ಛತೆಯಾಗಿ ಇಟ್ಟುಕೊಳ್ಳುವುದರಿಂದ ರೋಗಗಳು ಹರಡದಂತೆ ತಡೆಗಟ್ಟಬಹುದು ಎಂದರು.ಜಿಲ್ಲಾ ಆಶ್ರಿತ ರೋಗನಿರ್ವಾಹಕ ಅಧಿಕಾರಿ ಡಾ. ರಮೇಶ ರಾವ್, ಡೆಂಘೀ ಒಂದು ಸಾಕ್ರಾಮಿಕ ರೋಗವಾಗಿದ್ದು , ಈ ವರ್ಷ ಇಲ್ಲಿಯವರೆಗೂ ಕಾರವಾರದಲ್ಲಿ ಯಾವುದೇ ಡೆಂಗ್ಯೂ ಪ್ರಕರಣಗಳು ಕಂಡುಬಂದಿಲ್ಲ. ಮುಂದಿನ ದಿನಗಳಲ್ಲಿ ಈ ರೋಗಕ್ಕೆ ಯಾರೂ ತುತ್ತಾಗದಂತೆ ಜಾಗೃತಿಯನ್ನು ಮೂಡಿಸೋಣ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಲಿತಾ ಶೆಟ್ಟಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆಶಾ ಎಂ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಗುಫ್ ಸೈಯದ್ ಮತ್ತಿತರರು ಇದ್ದರು.