ಹುಬ್ಬಳ್ಳಿ: ಕಣ್ಣಿನ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಕಣ್ಣಿನ ಸಮಸ್ಯೆಗೆ ವಯಸ್ಸಿನ ಬೇಧವಿಲ್ಲ. ಆಧುನಿಕ ತಂತ್ರಜ್ಞಾನ ಇದ್ದಾಗಲೂ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಸಮಸ್ಯೆ ಕಾಡುತ್ತಿದೆ. ಕಣ್ಣಿನ ಪ್ರತಿಯೊಂದು ಸಮಸ್ಯೆಗೆ ಎಂ.ಎಂ. ಜೋಶಿ ಆಸ್ಪತ್ರೆ ಪರಿಹಾರ ಒದಗಿಸಲು ಸಿದ್ಧವಾಗಿರುವುದು ಹಾಗೂ ಕರ್ನಾಟಕವನ್ನು ಅಂಧತ್ವ ಮುಕ್ತ ಮಾಡಲು ಪಣ ತೊಟ್ಟಿರುವುದು ಶ್ಲಾಘನೀಯ ಎಂದರು.
ಡಾ. ಎಂ.ಎಂ. ಜೋಶಿ ಅವರು 90 ವರ್ಷ ವಯೋಮಾನದವರಾದರೂ ಆರೋಗ್ಯವಾಗಿದ್ದಾರೆ. ಇದಕ್ಕೆ ಅವರು ಸಮಾಜಮುಖಿಯಾಗಿ ಕೆಲಸ ಹಾಗೂ ಚಿಂತನೆ ಮಾಡುತ್ತಿರುವುದೇ ಪ್ರಮುಖ ಕಾರಣವಾಗಿದೆ. ಅದಕ್ಕಾಗಿ ಪ್ರತಿಯೊಬ್ಬರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಆಸ್ಪತ್ರೆ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಮಾತನಾಡಿ, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಿಂದ ರಾಜ್ಯಾದ್ಯಂತ ದೃಷ್ಟಿಕೇಂದ್ರಗಳನ್ನು ತೆರೆಯಲಾಗುತ್ತಿದೆ. ನಮ್ಮ ಉದ್ದೇಶ ಅನಗತ್ಯ ಅಂಧತ್ವ ನಿವಾರಣೆ ಮಾಡುವುದು. ಇದಕ್ಕೆ ಸಂಘ-ಸಂಸ್ಥೆಗಳು, ಸರಕಾರ ಕೈ ಜೋಡಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ಸಂಸ್ಥೆಯ ಚೇರಮನ್ ಪದ್ಮಶ್ರೀ ಡಾ. ಎಂ.ಎಂ. ಜೋಶಿ ಅಧ್ಯಕ್ಷತೆ ವಹಿಸಿದ್ದರು.