ಮಡಿಕೇರಿ: ವಿಶ್ವ ಕ್ಷಯರೋಗ ದಿನಾಚರಣೆ

KannadaprabhaNewsNetwork | Published : Mar 25, 2025 12:46 AM

ಸಾರಾಂಶ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷಯ ರೋಗ ವಿಭಾಗ ಮಡಿಕೇರಿ ಕೊಡಗು ಜಿಲ್ಲೆ ವತಿಯಿಂದ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಡಿ ಕ್ಷಯ ಮುಕ್ತ ಭಾರತ-2025ರ ಅಭಿಯಾನ ಸಂಬಂಧ ವಿಶ್ವ ಕ್ಷಯ ರೋಗ ದಿನಾಚರಣೆಯು ಸೋಮವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷಯ ರೋಗ ವಿಭಾಗ ಮಡಿಕೇರಿ ಕೊಡಗು ಜಿಲ್ಲೆ ವತಿಯಿಂದ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಡಿ ಕ್ಷಯ ಮುಕ್ತ ಭಾರತ-2025ರ ಅಭಿಯಾನ ಸಂಬಂಧ ವಿಶ್ವ ಕ್ಷಯ ರೋಗ ದಿನಾಚರಣೆಯು ಸೋಮವಾರ ನಡೆಯಿತು.ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ‘ಹೌದು ನಾವು ಕ್ಷಯ ರೋಗವನ್ನು ಕೊನೆಗೊಳಿಸಬಹುದು’ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ನಡೆಯಿತು.ಕೊಡಗು ವೈದ್ಯಕೀಯ ವಿದ್ಯಾಸಂಸ್ಥೆ ನಿರ್ದೇಶಕ ಡಾ.ಲೋಕೇಶ್‌ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ.ಆನಂದ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ರವೀಂದ್ರ ರೈ, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಉಪಸ್ಥಿತರಿದ್ದರು.

21 ಗ್ರಾ.ಪಂ. ಕ್ಷಯರೋಗ ಮುಕ್ತ:

ಜಿಲ್ಲೆಯಲ್ಲಿ 21 ಗ್ರಾಮ ಪಂಚಾಯಿತಿಗಳು ಕ್ಷಯಮುಕ್ತ ಎಂದು ಆಯ್ಕೆಯಾಗಿವೆ. ಅವುಗಳಲ್ಲಿ ಬಲ್ಲಮಾವಟಿ, ಅಯ್ಯಂಗೇರಿ, ಕಾಕೋಟುಪರಂಬು ಗ್ರಾ.ಪಂ.ಗಳ 3 ಬೆಳ್ಳಿಯ ಪದಕ, ಮಡಿಕೇರಿ ತಾಲೂಕಿನ ಹಾಕತ್ತೂರು, ಮಕ್ಕಂದೂರು, ನಾಪೋಕ್ಲು, ಸಂಪಾಜೆ ಮತ್ತು ಎಮ್ಮೆಮಾಡು, ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕಿನ ವಾಲ್ನೂರು, ತ್ಯಾಗತ್ತೂರು, ಆಲೂರು ಸಿದ್ದಾಪುರ, ಬೆಟ್ಟದಳ್ಳಿ, ಬ್ಯಾಡಗುಟ್ಟ, ಗರ್ವಾಲೆ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಕದನೂರು, ಪಾಲಿಬೆಟ್ಟ, ದೇವರಪುರ ಮತ್ತು ಪೊನ್ನಪ್ಪಸಂತೆ ಪಂಚಾಯಿತಿ ಕಂಚಿನ ಪದಕ ಪಡೆದಿದ್ದು, ಇದರ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸನ್ಮಾನಿಸಿ, ಪ್ರಶಸ್ತಿ ಪತ್ರ ಹಾಗೂ ಪದಕ ನೀಡಲಾಯಿತು.

ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ಟನ್ನು ನೀಡಿದ ದಾನಿಗಳಾದ ಡಾ.ಆನಂದ್, ರವೀಂದ್ರ ರೈ ಹಾಗೂ ರವಿಚಂದ್ರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಸಂಬಂಧ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ ಹಾಗೂ ರಸಪ್ರಶ್ನೆ ಆಯೋಜಿಸಲಾಗಿತ್ತು. ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಮುದಾಯ ಆರೋಗ್ಯ ವಿಭಾಗ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಅಧ್ಯಕ್ಷತೆ ವಹಿಸಿದ್ದರು.ಕ್ಷಯ ರೋಗದ ಅರಿವಿಗಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜಿಂಗಲ್ಸ್ ಹಾಗೂ ಆರೋಗ್ಯ ಶಿಕ್ಷಣ ಮಳಿಗೆ ತೆರೆದು ಮಾಹಿತಿ ನೀಡಲಾಯಿತು.

ಡಾ.ಅಶ್ವಿನಿ ಹಾಗೂ ಅಮೃತ ಪ್ರಾರ್ಥಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ಕುಮಾರ್ ಸ್ವಾಗತಿಸಿದರು. ಡಿಟಿಒ ಡಾ.ಸನತ್ ಕುಮಾರ್ ಜಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಕಿತ್ಸೆ ಮೇಲ್ವಿಚಾರಕ ಎಂ.ಮಾದೇವಪ್ಪ ನಿರೂಪಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಾಥ್ ವಂದಿಸಿದರು.

Share this article