ಮುಸ್ಲಿಂ ಮತಗಳಿಕೆ, ತುಷ್ಠಿಕರಣಕ್ಕಾಗಿ ವಕ್ಫ್ ಕಾಯ್ದೆ ರಚನೆ

KannadaprabhaNewsNetwork | Published : Nov 4, 2024 12:21 AM

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್. ದತ್ತತ್ರಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ರಾಜ್ಯದಲ್ಲಿ ವಕ್ಫ್ ಕಾಯ್ದೆ ದುರ್ಬಳಕೆ ಹಿನ್ನಲೆಯಲ್ಲಿ ರೈತರು, ಮಠಮಾನ್ಯಗಳು, ಹಿಂದೂ ದೇವಾಲಯಗಳು ಸೇರಿದಂತೆ ಎಲ್ಲರೂ ಆತಂಕದಲ್ಲಿದ್ದಾರೆ. ಹಿಂದೆ ಕಾಂಗ್ರೆಸ್‌ನವರು ರೂಪಿಸಿರುವ ವಕ್ಫ್ ಕಾಯ್ದೆ ಮುಸ್ಲಿಂ ತುಷ್ಠಿಕರಣಕ್ಕಾಗಿ, ಮತಗಳಿಕೆಯ ಆಸೆಯೊಂದಿಗೆ ರಚಿಸಿರುವ ಕಾಯ್ದೆಯಾಗಿದೆ. ಕೇಂದ್ರ ಸರ್ಕಾರ ತಕ್ಷಣ ಹೊಸ ವಕ್ಫ್ ಕಾಯ್ದೆ ಜಾರಿಗೊಳಿಸುವಂತೆ ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್. ದತ್ತತ್ರಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ರಾಜ್ಯ ಸರ್ಕಾರದ ಭಾಗವಾಗಿದ್ದರೂ ಸಹ ಸರ್ಕಾರದ ಹಿಡಿತದಲ್ಲಿ ಎಷ್ಟರಮಟ್ಟಿಗೆ ಇದೆ ಎನ್ನುವ ಪ್ರಶ್ನೆ ಮೂಡಿಸಿದೆ. ರಾಜ್ಯದ ಅಲ್ಪಸಂಖ್ಯಾತರ ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್‌ಖಾನ್‌ ಅವರು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ವಕ್ಫ್ ಪ್ರಗತಿ ಪರಿಶೀಲನೆ ಹಾಗೂ ವಕ್ಫ್ ಆದಾಲತ್‌ಗಳನ್ನು ನಡೆಸಿ ಸರ್ಕಾರದ1974ರ ಗೆಜೆಟ್ ಆಗಿರೋ ಪ್ರಕಾರ ರೈತರ ಕೃಷಿ ಜಮೀನುಗಳನ್ನು, ಮಠ-ಮಂದಿರಗಳ ಆಸ್ತಿಗಳನ್ನೂ ಸೇರಿದಂತೆ ಬಹುದೊಡ್ಡ ಪ್ರಮಾಣದ ಆಸ್ತಿಗಳನ್ನು ವಕ್ಫ್‌ ಹೆಸರಿನಲ್ಲಿ ತಕ್ಷಣ ಕಂದಾಯ ದಾಖಲೆಗಳಲ್ಲಿ ಇಂಡೀಕರಿಸಿಕೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

1974ರ ಸರ್ಕಾರದ ಗೆಜೆಟ್ ರಾಜ್ಯದಲ್ಲಿ ಉಂಟಾಗಿರುವ ಈ ಎಲ್ಲ ಸಮಸ್ಯೆಗಳಿಗೆ ಮೂಲವಾಗಿದೆ. 50 ವರ್ಷದವರೆಗೂ ಇಂಡೀಕರಣ ಮಾಡದ ಇಲಾಖೆಗೆ ಈ ತಕ್ಷಣ ಇಂಡೀಕರಿಸಿಕೊಳ್ಳುವ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ವಕ್ಫ್‌ ಕಾಯ್ದೆಯ ಕರಾಳತೆ ಅರಿತು ಹೊಸ ವಕ್ಫ್ ಕಾಯ್ದೆ ರಚಿಸುವ ಕ್ರಮಕ್ಕೆ ಮುಂದಾಗಿ, ಕರಡು ಕಾಯ್ದೆಯನ್ನು ಸದನದಲ್ಲಿ ಮಂಡಿಸಿದ್ದಾರೆ. ಆ ಕಾಯ್ದೆಯನ್ನು ಇನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ದೃಷ್ಟಿಯಿಂದ ಸಂಸತ್ತಿನ ಸಮಿತಿಗೆ ಒಪ್ಪಿಸಲಾಗಿದೆ. ಬಹುತೇಕ ಮುಂದಿನ ಅಧಿವೇಶನದಲ್ಲಿ ಮಂಜೂರಾಗಬಹುದು ಎನ್ನುವ ಆತಂಕದೊಂದಿಗೆ ಸ್ವತಃ ಸಿಎಂ ಸಿದ್ದರಾಮಯ್ಯರವರ ಸೂಚನೆ ಮೇರೆಗೆ ಜಮೀರ್ ಅಹ್ಮದ್ ಖಾನ್ ಅವರು ಎಲ್ಲ ಜಿಲ್ಲೆಗಳಿಗೂ ಹೋಗಿ, ಅಧಿಕಾರಿಗಳ ಮೇಲೆ ಒತ್ತಡ ನಿರ್ಮಾಣ ಮಾಡಿ ರೈತರ ಜಮೀನುಗಳನ್ನು, ಮಠ-ಮಂದಿರಗಳನ್ನು ಕಂದಾಯ ದಾಖಲೆಗಳಲ್ಲಿ ವಕ್ಫ್ ಆಸ್ತಿಯಾಗಿ ದಾಖಲೆಯನ್ನು ಸೃಷ್ಟಿಸುವ ಹುನ್ನಾರ ಮಾಡಿದ್ದಾರೆಂದು ಆರೋಪಿಸಿದರು.

ಕಂದಾಯ ದಾಖಲೆಗಳಲ್ಲಿ ತಮ್ಮ ಮಾಲೀಕತ್ವವದ ಆಸ್ತಿಗಳು ವಕ್ಫ್ ಪಾಲಾಗಿವೆಯೇ ಎನ್ನುವುದನ್ನು ದೃಢೀಕರಿಸಿಕೊಳ್ಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇಂದು ಕಂದಾಯ ದಾಖಲೆಗಳಲ್ಲಿ ರೈತರ ಹೆಸರನ್ನು ತೆಗೆದು ಹಾಕದೆ 1974ರ ಗೆಜೆಟ್ ಪ್ರಕಾರ ಇದೀಗ 50 ವರ್ಷಗಳ ನಂತರ ಇಂಡೀಕರಿಸಲು ಸೂಚನೆ ನೀಡಿದ್ದರ ಪರಿಣಾಮ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ವಕ್ಫ್ ಬೋರ್ಡ್ ಅಲ್ಪಸಂಖ್ಯಾತರ ನಿರ್ದಿಷ್ಟ ಕೋಮಿನವರಿಗೆ ಸೇರಿದ ಸಂಸ್ಥೆಯಾಗಿರುವುದರಿಂದ, ಬೇರೆ ಬೇರೆ ಸರ್ಕಾರಗಳ ಸಂದರ್ಭದಲ್ಲಿ ಕೂಡ ಚಿತಾವಣೆ ಮಾಡಿರುವ ಸಾಧ್ಯತೆ ಇದೆ. ಬಿಜೆಪಿ ಸೇರಿದಂತೆ ಯಾವುದೇ ಸರ್ಕಾರದ ಸಂದರ್ಭದಲ್ಲಿ ಚಿತಾವಣೆ ನಡೆದಿದ್ದರೂ, ರೈತರ ಆಸ್ತಿ ಮುಟ್ಟುವ ಪ್ರಯತ್ನ ನಡೆದಿದ್ದರೂ ಅದನ್ನು ನಾವು ಖಂಡಿಸುತ್ತೇವೆ. ಸರಿ ಮಾಡುವ ಗುರುತರ ಜವಾಬ್ದಾರಿ ಈಗ ಆಡಳಿತದಲ್ಲಿರುವ ಸರ್ಕಾರಕ್ಕೆ ಇರುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ, ಮಂಗೋಟೆ ರುದ್ರೇಶ್, ಜಿ. ಆನಂದ ಕುಮಾರ್, ಎಂ.ಮಂಜುನಾಥ್, ಎಚ್. ತೀರ್ಥಯ್ಯ, ಬಿ.ಕೆ ಶ್ರೀನಾಥ್, ಅಣ್ಣಪ್ಪ, ಚನ್ನೆಶ್, ರಾಜಶೇಖರ್ ಉಪ್ಪಾರ, ಅವಿನಾಶ್, ಪಿ.ಜಿ ರಾಮಲಿಂಗಯ್ಯ, ಸೇರಿದಂತೆ ಇತರರು ಇದ್ದರು.

Share this article