ಕೊಪ್ಪಳ: ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರದಿಂದ ರೈತರ ಖಾತೆಗೆ ಜಮೆ ಆಗುವ ಬೆಳೆ ಪರಿಹಾರದ ಮೊತ್ತವನ್ನು ರೈತರ ಸಾಲದ ಖಾತೆಗೆ ಜಮೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಬ್ಯಾಂಕ್ಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ ರೈತರ ಖಾತೆಗೆ ಬೆಳೆ ಪರಿಹಾರವನ್ನು ಡಿಬಿಟಿ ಮೂಲಕ ನೇರ ಪಾವತಿ ಮಾಡಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಇನ್ನೂ ಕೆಲವು ರೈತರಿಗೆ ಬೆಳೆ ಪರಿಹಾರ ಮೊತ್ತ ಜಮೆ ಆಗಿರುವುದಿಲ್ಲ. ಬ್ಯಾಂಕ್ ಖಾತೆಗೆ ಸಂಬಂಧಿಸಿದ ತಾಂತ್ರಿಕ ತೊಂದರೆಗಳನ್ನು ಬ್ಯಾಂಕ್ ಸಿಬ್ಬಂದಿ ಪರಿಹರಿಸಿ ಕೊಡಬೇಕು. ರೈತರೊಂದಿಗೆ ಸೌಜನ್ಯದಿಂದ ವರ್ತಿಸಿ, ಬೆಳೆ ಪರಿಹಾರ ಮೊತ್ತ ಜಮೆ ಆಗಲು ಸಹಕರಿಸಬೇಕು. ಪರಿಹಾರ ಮೊತ್ತ ಜಮೆ ಆಗದ ರೈತರ ಸಹಾಯಕ್ಕೆ ಜಿಲ್ಲೆಯಾದ್ಯಂತ ತಾಲೂಕು ಹಾಗೂ ಹೋಬಳಿವಾರು ಸಹಾಯವಾಣಿಗಳನ್ನು ತೆರೆಯಲಾಗಿದ್ದು, ರೈತರು ಸಹಾಯವಾಣಿಗೆ ಕರೆ ಮಾಡಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ/ನಾಡ ಕಚೇರಿ ಅಥವಾ ಕಂದಾಯ ಇಲಾಖೆಗಳಿಗೆ ಸಂಪರ್ಕಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ., ಲೀಡ್ ಬ್ಯಾಂಕ್ ವ್ಯವಸ್ಥಾಪಕ ವೀರೇಂದ್ರ, ಆರ್ಬಿಐ ವ್ಯವಸ್ಥಾಪಕ ಮೋನಿ ರಾಜಬ್ರಹ್ಮ, ನಬಾರ್ಡ್ನ ಡಿಡಿಎಂ ಎಂ. ಮಹದೇವ ಕೀರ್ತಿ ಇತರರು ಉಪಸ್ಥಿತರಿದ್ದರು.