ಕನ್ನಡಪ್ರಭ ವಾರ್ತೆ ಸಾಗರ
ತಾಲೂಕಿನ ಎಲ್ಲಾ ದೇವಸ್ಥಾನಗಳ ಅಭಿವೃದ್ಧಿಗೆ ₹4 ಕೋಟಿ ಬಿಡುಗಡೆಯಾಗಿದ್ದು, ಮುಂದಿನ ವರ್ಷ ಮತ್ತೆ ₹5 ಕೋಟಿ ಅನುದಾನ ನೀಡಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ದೇವಾಲಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ 4 ಕೋಟಿ ರು.ವಿಶೇಷ ಅನುದಾನ ಬಳಕೆ ಕುರಿತು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಜನರು ಸಣ್ಣಪುಟ್ಟ ಗುಡಿಗಳನ್ನು ನಿರ್ಮಿಸಲು ಕಷ್ಟಪಡುತ್ತಿರುತ್ತಾರೆ. ಅವರಿಗೆ ತಕ್ಕಮಟ್ಟಿಗೆ ಆರ್ಥಿಕ ಸಹಕಾರ ನೀಡಲು ಸರ್ಕಾರಕ್ಕೆ ಮನವಿ ಮಾಡಿಕೊಂಡಾಗ ಮುಜರಾಯಿ ಸಚಿವ ರಾಮಲಿಂಗರೆಡ್ಡಿಯವರು ₹4 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.
ಕ್ಷೇತ್ರವ್ಯಾಪ್ತಿಯಲ್ಲಿ ದೇವಸ್ಥಾನಗಳ ಪುನರುಜ್ಜೀವನಕ್ಕಾಗಿ 2 ರಿಂದ 20 ಲಕ್ಷ ರು.ವರೆಗೆ ಹಣ ನೀಡಲಾಗಿದೆ.ಸರ್ಕಾರ ಕೇಳುವ ಸೂಕ್ತ ದಾಖಲೆಗಳನ್ನು ದೇವಸ್ಥಾನ ಸಮಿತಿಯವರು ನೀಡಬೇಕು. ಅನುದಾನಕ್ಕೆ ಅರ್ಜಿ ಹಾಕದೆ ಇದ್ದವರಿಗೂ ಸಹ ಅನುದಾನ ನೀಡಲಾಗಿದೆ ಎಂದರು.
ನಿರ್ಮಿತಿ ಕೇಂದ್ರದ ನಿರ್ವಹಣೆಯಲ್ಲಿ ದೇವಸ್ಥಾನ ಅಭಿವೃದ್ಧಿ ಕೆಲಸ ನಡೆಯುತ್ತದೆ. ಸ್ಥಳೀಯರು ಇದನ್ನು ಗಮನಿಸಿ ತಮಗೆ ಬೇಕಾದ ರೀತಿಯಲ್ಲಿ ಪುನರ್ ನಿರ್ಮಿಸಿಕೊಳ್ಳಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿಯ ಮುಜರಾಯಿ ಇಲಾಖೆ ತಹಸೀಲ್ದಾರ್ ಪ್ರದೀಪ್ ಮಾತನಾಡಿ, ಶಾಸಕರ ವಿಶೇಷ ಪ್ರಯತ್ನದಿಂದ ₹4 ಕೋಟಿ ಅನುದಾನ ಬಂದಿದ್ದು, ಇದರ ಸದ್ಭಳಕೆಯಾಗಬೇಕು. ಅನುದಾನಕ್ಕೆ ಅರ್ಜಿ ಸಲ್ಲಿಸಿರುವ ದೇವಸ್ಥಾನಗಳ ಆಡಳಿತ ಸಮಿತಿ ಅಗತ್ಯ ದಾಖಲೆ ನೀಡಬೇಕು ಎಂದು ತಿಳಿಸಿದರು.
ಚಂದ್ರಗುತ್ತಿ ದೇವಸ್ಥಾನ ₹10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದ್ದರೆ, ಸಾಗರದ ಗಣಪತಿ ದೇವಸ್ಥಾನ ಸುಮಾರು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ನೀಲನಕ್ಷೆ ಸಿದ್ದಪಡಿಸಿದೆ ಎಂದು ತಿಳಿಸಿದರು.ಈ ವೇಳೆ ಉಪವಿಭಾಗಾಧಿಕಾರಿ ಯತೀಶ್ ಆರ್, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್, ಮುಜರಾಯಿ ಇಲಾಖೆಯ ವಿವಿಧ ಅಧಿಕಾರಿಗಳು ಹಾಜರಿದ್ದರು.