ಮತದಾನ ಜಾಗೃತಿಗೆ ಬಂದ ಮಂಗಳಮುಖಿಯರಿಂದ ಅಳಲು

KannadaprabhaNewsNetwork |  
Published : Apr 26, 2024, 12:51 AM IST
25ಎಚ್‌ಪಿಟಿ6- ಹೊಸಪೇಟೆಯಲ್ಲಿ ಮತದಾನ ಜಾಗೃತಿ ಅಭಿಯಾನಕ್ಕೆ ಆಗಮಿಸಿದ್ದ ಮಂಗಳಮುಖಿಯರು ಸೌಲಭ್ಯ ನೀಡಿಲ್ಲ ಎಂದು ದೂರಿ ವಾಪಾಸಾದರು. | Kannada Prabha

ಸಾರಾಂಶ

ಇನ್ನೇನು ಜಾಥಾ ಆರಂಭವಾಗಬೇಕೆನ್ನುವಷ್ಟರಲ್ಲಿ ತಿರುಗಿ ಬಿದ್ದ ಮಂಗಳಮುಖಿಯರು, ನಿಮ್ಮ ಕೆಲಸಕ್ಕೆ ಮಾತ್ರ ನಮ್ಮನ್ನು ಕರೆದು ಪ್ರಚಾರ ತೆಗೆದುಕೊಳ್ಳುತ್ತೀರಿ, ನಮ್ಮ ಕಷ್ಟಗಳನ್ನು ಹೇಳಿಕೊಂಡರೆ ನೋಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಸಪೇಟೆ: ನಗರದಲ್ಲಿ ಮತದಾನ ಜಾಗೃತಿ ಜಾಥಾ ನಡೆಸಲು ಕರೆ ತಂದಿದ್ದ ಮಂಗಳಮುಖಿಯರು, ನಮಗೇನು ಸೌಲಭ್ಯ ಕೊಟ್ಟಿದ್ದೀರಿ ಅಂತ ಜಾಗೃತಿ ಮೂಡಿಸಬೇಕು? ನಿಮಗೆ ಬೇಕಾದಾಗ ಮಾತ್ರ ನಮ್ಮನ್ನು ಕರೆದು ನಮ್ಮ ಕಷ್ಟಗಳಿಗೆ ಸ್ಪಂದಿಸದೇ ನಿರ್ಲಕ್ಷಿಸುತ್ತೀರಿ ಎಂದು ದೂರಿ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳದೇ ವಾಪಸಾದ ಪ್ರಸಂಗ ಗುರುವಾರ ನಡೆಯಿತು.

ನಗರಸಭೆ, ತಾಲೂಕು ಸ್ವೀಪ್ ಸಮಿತಿ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ತಾಲೂಕು ಕಚೇರಿಯಿಂದ ನಡೆಸಲುದ್ದೇಶಿಸಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಮಂಗಳಮುಖಿಯರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಕರೆ ತಂದಿದ್ದರು. ಇನ್ನೇನು ಜಾಥಾ ಆರಂಭವಾಗಬೇಕೆನ್ನುವಷ್ಟರಲ್ಲಿ ತಿರುಗಿ ಬಿದ್ದ ಮಂಗಳಮುಖಿಯರು, ನಿಮ್ಮ ಕೆಲಸಕ್ಕೆ ಮಾತ್ರ ನಮ್ಮನ್ನು ಕರೆದು ಪ್ರಚಾರ ತೆಗೆದುಕೊಳ್ಳುತ್ತೀರಿ, ನಮ್ಮ ಕಷ್ಟಗಳನ್ನು ಹೇಳಿಕೊಂಡರೆ ನೋಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಜೀವನದ ಬಗ್ಗೆ ಯಾರಿಗೂ ಚಿಂತೆ ಇಲ್ಲ. ತಲೆ ಮೇಲೆ ಸರಿಯಾದ ಸೂರಿಲ್ಲ. ಚಪ್ಪರದ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ರೇಷನ್ ಕಾರ್ಡ್ ಕೊಟ್ಟರೆ ಹೊಟ್ಟೆಗೆ ಅನ್ನ ಸಿಗುತ್ತದೆ. ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ. ಹಾಗಾಗಿ ಮನೆ ನಿರ್ಮಿಸಿ, ರೇಷನ್ ಕಾರ್ಡ್ ಕೊಟ್ಟು ಗೌರವಯುತ ಜೀವನ ನಡೆಸಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ನಮಗೆ ನೀಡಿರುವ ಹಕ್ಕು. ನಾವು ನಮ್ಮ ಹಕ್ಕು ಚಲಾಯಿಸುತ್ತೇವೆ. ಆದರೆ, ನಮ್ಮನ್ನು ಬಳಸಿಕೊಂಡು ಕೈ ಬಿಡುವ ಇಲಾಖೆಗಳ ಕೆಲಸಕ್ಕೆ ಹೋಗಲ್ಲ ಎಂದರು.

ಮಂಗಳಮುಖಿಯರಾದ ಸುಧಾ, ಮಂಜು, ಶಿವಾನಿ, ಲಕ್ಷ್ಮೀ, ಶೃತಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ