ಹಾನಗಲ್ಲ: ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಲು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವನೆ ಜಾಗೃತವಾಗಿ ಸೇವಾ ಮನೋಭಾವ ಮೂಡಿದರೆ ಮಾತ್ರ ಸಾಧ್ಯ ಎಂದು ಹಾವೇರಿ ವಿಶ್ವವಿದ್ಯಾಲಯದ ಎನ್ಎಸ್ಎಸ್ ಕೋಶದ ಸಂಯೋಜನಾಧಿಕಾರಿ ಡಾ. ಚನ್ನಬಸಪ್ಪ ಕುಮ್ಮೂರ ತಿಳಿಸಿದರು.ಹಾನಗಲ್ಲ ತಾಲೂಕಿನ ಮಲ್ಲಿಗಾರ ಗ್ರಾಮ ವ್ಯಾಪ್ತಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ 7 ದಿನಗಳ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಭಾರತದ ಜನಮನದಲ್ಲಿ ರಾಷ್ಟ್ರೀಯ ಭಾವನೆಯನ್ನು ಬಿತ್ತಿ ಬೆಳೆಯುವ ಅಗತ್ಯವಿದೆ. ಎಲ್ಲರೂ ಒಂದು ಎಂಬ ಭಾವನೆ ಬರುವುದರ ಜತೆಗೆ ಒಬ್ಬರಿಗೊಬ್ಬರು ಸಹಕಾರದಿಂದಿರುವ ಗುಣವನ್ನು ಬೆಳೆಸಿಕೊಳ್ಳಬೇಕು. ಎನ್ಎಸ್ಎಸ್ ಮೂಲಕ ವಿದ್ಯಾರ್ಥಿಗಳಲ್ಲಿ ಇಂತಹ ಗುಣಗಳನ್ನು ಬೆಳೆಸುವ ಮೂಲಕ ಸೇವಾ ಭಾವನೆಯನ್ನು ತಿಳಿಸುವ ಅಗತ್ಯವಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಕೇಶವ ಪವಾರ, ಇಂದಿನ ಯುವ ಜನತೆಯಲ್ಲಿ ತಾಳ್ಮೆ ಸಹನೆ ಕಡಿಮೆಯಾಗುತ್ತಿದೆ. ಪ್ರೀತಿ, ವಾತ್ಸಲ್ಯಗಳು ಕಣ್ಮರೆಯಾಗುತ್ತಿವೆ. ಸಾಮಾಜಿಕ ಮೌಲ್ಯಗಳು ಅವನತಿಯತ್ತ ಸಾಗುತ್ತಿವೆ. ರಾಷ್ಟ್ರೀಯ ಭಾವನೆಗಳು ಇಲ್ಲದಂತಾಗುತ್ತಿವೆ. ವಿದ್ಯಾರ್ಥಿ ದೆಸೆಯಿಂದಲೇ ಸದ್ಭಾವನೆಗಳನ್ನು ಬೆಳೆಸಿಕೊಳ್ಳುವುದು ಅಗತ್ಯ. ಈ ದೇಶದ ಅಭಿವೃದ್ಧಿಗೆ ಯುವಕರ ಪಾತ್ರ ದೊಡ್ಡದಿದೆ. ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿಯೂ ಇದೆ. ನಮ್ಮ ಪರಿಶ್ರಮದ ಫಲ ದೇಶಕ್ಕಾಗುತ್ತದೆ. ಯುವಕರು ಉತ್ತಮ ದುಡಿಮೆಯನ್ನು ಕಂಡುಕೊಳ್ಳಬೇಕು ಎಂದರು.ಪ್ರೊ. ಜಗದೀಶ ತೆವರಿ, ಪ್ರೊ. ಸಿದ್ದಲಿಂಗಯ್ಯ ಮಠದ, ಪ್ರೊ. ಮಹೇಶ ಎಚ್.ಎಂ., ಪ್ರೊ. ನವೀನ್ ಮಾಳಮ್ಮನವರ, ಪ್ರೊ. ವೈ.ಜಿ. ತಳವಾರ ಪಾಲ್ಗೊಂಡಿದ್ದರು. ಪ್ರೊ. ಅಮಿತಕುಮಾರ ಸ್ವಾಗತಿಸಿದರು. ಪ್ರೊ. ಚೈತ್ರ ಗುಣಕಿ ನಿರೂಪಿಸಿದರು. ಪ್ರೊ. ಅಮೃತ್ ಕೋಟಿ ವಂದಿಸಿದರು.ಮಂತ್ರವಾಡಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ತಾಲೂಕಿನ ಮಂತ್ರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಜನರ ದೈನಂದಿನ ಜೀವನದಲ್ಲಿ ವಿಜ್ಞಾನ ಅವಿಭಾಜ್ಯ ಅಂಗವಾಗಿದೆ ಎಂದರು.ಕಾರ್ಯಕ್ರಮವನ್ನು ಗ್ರಾಪಂ ಆಧ್ಯಕ್ಷ ಬಾಪುಗೌಡ ಕೊಪ್ಪದ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಎಂ.ಬಿ. ಬಾವಿಕಟ್ಟಿ ಶಿಕ್ಷಕರು ವಿಜ್ಞಾನಿಗಳ ಅನ್ವೇಷಣೆ ಹಾಗೂ ಮಾನವನ ಶರೀರದ ಬಗ್ಗೆ ಮಕ್ಕಳಿಗೆ ಮನ ಮುಟ್ಟುವಂತೆ ಬೋಧನೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಭಾರ ಶಿಕ್ಷಕಿ ಎಸ್.ಸಿ. ಸಜ್ಜನ, ಶಿಕ್ಷಕರಾದ ಅಶೋಕ ಲಮಾಣಿ, ಜೆ.ಎಚ್. ಬೇಲೆರಿ, ಕಾಂತೇಶ ವಾಲ್ಮೀಕಿ, ಶಿದ್ದನಗೌಡ ಪಾಟೀಲ, ನೀಲಮ್ಮ ಗಂಜಿಗಟ್ಟಿ ಹಾಗೂ ಗ್ರಾಮಸ್ಥರು ಇದ್ದರು.