ವಿದ್ಯಾರ್ಥಿಗಳಲ್ಲಿ ಪ್ರೀತಿಯ ಭಾವನೆ ಬೆಳೆಸಿ: ವಿಜಯಾ ನಾಯ್ಕ

KannadaprabhaNewsNetwork | Published : Feb 5, 2024 1:48 AM

ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪ್ರೀತಿಯ ಭಾವನೆಯನ್ನು ಬೆಳೆಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ವಿಜಯಾ ಡಿ. ನಾಯ್ಕ ಹೇಳಿದರು. ಕುಮಟಾದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕುಮಟಾ: ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪ್ರೀತಿಯ ಭಾವನೆಯನ್ನು ಬೆಳೆಸಬೇಕು ಹಾಗೂ ಕುಟುಂಬದವರನ್ನು, ನೆರೆಹೊರೆಯವರನ್ನು ಪ್ರೀತಿಯಿಂದ ಕಾಣಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ವಿಜಯಾ ಡಿ. ನಾಯ್ಕ ಹೇಳಿದರು.

ಇಲ್ಲಿನ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ರಾಷ್ಟ್ರೀಯ ಸೇವಾ ಯೋಜನಾಕೋಶದ ಸಹಯೋಗದಲ್ಲಿ ಇತ್ತಿಚೆಗೆ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ ಮಟ್ಟದ ''''ಯುವ ಸಂವಾದ-ಭಾರತ @೨೦೪೭’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ, ನಿವೃತ್ತ ಪ್ರಾಧ್ಯಾಪಕ ಡಾ. ಶಂಕರ ಭಟ್ಟ ಮಾತನಾಡಿ, ಬ್ರಿಟಿಷರು ಬರುವ ಪೂರ್ವದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಶ್ರೀಮಂತವಾಗಿತ್ತು. ಸ್ವಸ್ಥ ಸಮಾಜ ನಿರ್ಮಾಣ ಪ್ರಮುಖ ಧ್ಯೇಯವಾಗಬೇಕು ಎಂದರು.

ಮುಖ್ಯ ಅತಿಥಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಂ.ಬಿ ದಳಪತಿ, ಸಂವಿಧಾನದ ಮೌಲ್ಯಗಳನ್ನು, ವಿಚಾರಗಳನ್ನು ಗೌರವಿಸೋಣ. ಭಾರತವು ಯುವಜನರಿಂದ ಕೂಡಿದ ದೇಶ ಹಾಗಾಗಿ ಶ್ರಮಿಸಿ, ದುಡಿದು ೨೦೪೭ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಪ್ರೀತಿ ಪಿ. ಭಂಡಾರಕರ್, ತತ್ವ, ಆದರ್ಶ ಹೊಂದಿದ ವ್ಯಕ್ತಿಗಳಾಗಿ ಭಾರತದ ಪ್ರಜೆಗಳು ನಿರ್ಮಾಣವಾಗಬೇಕು. ಶ್ರಮಸಂಸ್ಕೃತಿ ಪ್ರಜೆಗಳಲ್ಲಿ ಹೆಚ್ಚಬೇಕು ಎಂದರು.

ಬಳಿಕ ನಡೆದ ಯುವ ಸಂವಾದದಲ್ಲಿ ವಿದಾರ್ಥಿಗಳ ಸಂದೇಹಗಳನ್ನು ಪ್ರಶ್ನೋತ್ತರದ ಮೂಲಕ ನಿವಾರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಬಿಂಬಿಸುವ ನೃತ್ಯದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನಾಗಶ್ರೀ ಹೆಗಡೆ ಪ್ರಾರ್ಥಿಸಿದರು. ಎನ್.ಎಸ್.ಎಸ್. ಸಂಯೋಜನಾಧಿಕಾರಿ ಪ್ರೊ. ರೇಖಾ ಯಲಿಗಾರ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಪ್ರೊ. ಸುಬ್ರಹ್ಮಣ್ಯ ಭಟ್ ಸ್ಪರ್ಧಾ ವಿಜೇತರ ವಿವರ ಮಂಡಿಸಿದರು. ಮಹೇಶ ಕಲ್ಯಾಣಕರ್, ವಿ. ಅನ್ವಿತಾ ಕಾರ್ಯಕ್ರಮ ನಿರೂಪಿಸಿದರು.