ಸಮಾಜದಲ್ಲಿ ಒಳ್ಳೆಯದನ್ನು ಹುಡುಕುವ, ಒಳ್ಳೆಯದನ್ನು ಮಾಡುವ ಗುಣವನ್ನು ಎಲ್ಲರೂ ರೂಡಿಸಿಕೊಂಡರೆ ದೇವರು ನಿಮ್ಮ ಹೃದಯ ಮಂದಿರದಲ್ಲಿ ನೆಲೆಸಲಿದ್ದಾನೆ. ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಶಿರಾ
ಸಮಾಜದಲ್ಲಿ ಒಳ್ಳೆಯದನ್ನು ಹುಡುಕುವ, ಒಳ್ಳೆಯದನ್ನು ಮಾಡುವ ಗುಣವನ್ನು ಎಲ್ಲರೂ ರೂಡಿಸಿಕೊಂಡರೆ ದೇವರು ನಿಮ್ಮ ಹೃದಯ ಮಂದಿರದಲ್ಲಿ ನೆಲೆಸಲಿದ್ದಾನೆ. ಮರದಲ್ಲಿಯೇ ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿ ದೇವರು ಉದ್ಭವವಾಗಿ ಭಕ್ತರ ನಂಬಿಕೆಗೆ ಪೂರಕವಾಗಿ ಇಷ್ಟಾರ್ಥ ಸಿದ್ಧಿಗೊಳಿಸುತ್ತಿರುವುದಕ್ಕೆ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಒಗ್ಗೂಡಿರುವದೇ ಸಾಕ್ಷಿ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ಸೋಮವಾರ ತಾಲೂಕಿನ ನಾದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಾಪುರ ಗ್ರಾಮದಲ್ಲಿ ನಡೆದ ಪುರಾತನ ಪ್ರಸಿದ್ಧ ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿ ಕಳಸ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ವಾಲ್ಮೀಕಿ ಸಮುದಾಯಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ಸಿಕ್ಕಿಲ್ಲ, ಸರ್ಕಾರಕ್ಕೆ ಶೇ.೭ ರಷ್ಟು ಮೀಸಲಾತಿ ಏರಿಕೆ ಮಾಡುತ್ತೇವೆ ಎಂಬ ವಚನಕ್ಕೆ ಬದ್ಧವಾಗಿ ಮೀಸಲಾತಿ ಏರಿಕೆ ಅನುಷ್ಠಾನ ಮಾಡಿ ವಾಲ್ಮೀಕಿ ಸಮುದಾ ಯದ ಶೈಕ್ಷಣಿಕ, ಸಾಮಾಜಿಕ , ಉದ್ಯೋಗಿಕವಾಗಿ ಪ್ರಗತಿ ಸಾಧಿಸಲು ಆದ್ಯತೆ ನೀಡಬೇಕು ಎಂದರು.
ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ, ರಾಜ್ಯದಲ್ಲಿ ಬರ ಆವರಿಸಿದ್ದು, ಶ್ರೀ ಬೊಮ್ಮಲಿಂಗೇಶ್ವ ರ ಸ್ವಾಮಿ ಕೃಪಾ ಆಶೀರ್ವಾದದಿಂದ ಉತ್ತಮ ಮಳೆ, ಬೆಳೆ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ. ದೇವರು ಸಂತೃಪ್ತನಾದರೆ, ಭಕ್ತರ ಇಷ್ಟಾರ್ಥ ಸಾಕಾರಗೊಳ್ಳಲಿದೆ, ಭಕ್ತರರೆಲ್ಲರೂ ಒಗ್ಗೂಡಿ ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿ ದೇವರಿಗೆ ಭವ್ಯ ದೇಗುಲ ನಿರ್ಮಾಣ ಮಾಡುವ ಸಂಕಲ್ಪ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಡ್ಲೆಕೋಣ ವಾಲ್ಮೀಕಿ ಸಂಜಯ ಕುಮಾರ ಸ್ವಾಮೀಜಿ, ಉತ್ತಮರ ಸಂಘ ಮನುಷ್ಯನನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ. ಸಮಾಜದಲ್ಲಿ ನಾವು ಇತರರನ್ನು ಪ್ರೀತಿಸುವ, ಗೌರವಿಸುವ ಸಂಸ್ಕಾರದೊಂದಿಗೆ ಬದುಕು ಕಟ್ಟಿಕೊಂಡಾಗ ಸಮಾಜ ನಮ್ಮನ್ನು ಗೌರವ ಸ್ಥಾನದಲ್ಲಿ ಕಾಣುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆಂಕೆರೆ ಮಲ್ಲಿಕಾರ್ಜುನ್ ಸಾರಥ್ಯದ ಸ್ವರ ಸಿಂಚನ ಜನಪದ ಕಲಾ ತಂಡದಿಂದ ಸುಗಮ ಸಂಗೀತ ನಡೆಯಿತು. ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ, ಶಾಸಕ ಸುರೇಶ್ ಬಾಬು, ಬಿಜೆಪಿ ಮುಖಂಡ ಬಿ.ಕೆ. ಮಂಜುನಾಥ್, ಮಾಜಿ ಶಾಸಕ ಸಾಲಿಂಗಯ್ಯ, ಅಧ್ಯಕ್ಷ ಅಶ್ವಥ್ ನಾರಾಯಣ್ ಬಾಬು, ಶಿವು ಚಂಗಾವರ, ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಜಣ್ಣ, ಬಂಡೆ ರಾಮಕೃಷ್ಣ, ಬಿ.ಮೋಹನ್, ಮುಖಂಡ ಪಾಲನೇತ್ರ ನಾಯಕ, ನಾದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್, ಗ್ರಾ. ಪಂ ಮಾಜಿ ಅಧ್ಯಕ್ಷೆ ರಕ್ಷಿತಾ ಆರ್.ಕೆ.ಮಾರುತಿ, ಶಿವಕುಮಾರ್ ನಾಯಕ, ಎಸ್.ಬಿ.ಮೋಹನ್, ಎನ್.ನರಸಪ್ಪ, ಬಿ.ಜಿ. ಕರಿಯಣ್ಣ, ಲಿಂಗಣ್ಣ, ಪುಟ್ಟಲಿಂಗಯ್ಯ, ಕೃಷ್ಣಪ್ಪ, ಕರಿಯಣ್ಣ, ನಾಗರಾಜು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.