ಪುಸ್ತಕ ಓದುವ ಜೊತೆ ಪ್ರವಾಸದಹವ್ಯಾಸ ಬೆಳೆಸಿಕೊಳ್ಳಿ: ಪಾಟೀಲ್‌

KannadaprabhaNewsNetwork | Published : Jan 26, 2024 1:46 AM

ಪುಸ್ತಕ ಓದಿನ ಜೊತೆಗೆ ಪ್ರವಾಸದ ಹವ್ಯಾಸ ರೂಢಸಿಕೊಳ್ಳಿ, ಇದರಿಂದ ಮಾನಸಿಕ, ದೈಹಿಕ ಬೆಳವಣಿಗೆ ಸಾಧ್ಯ ಎಂದು ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶ ಸುತ್ತು ಕೋಶ ಓದು ಎನ್ನುವ ನಾಣ್ನುಡಿಯಂತೆ ಮನುಷ್ಯ ಪುಸ್ತಕ ಓದಿನ ಜೊತೆಗೆ ಐತಿಹಾಸಿಕ, ಧಾರ್ಮಿಕ, ಪಾರಂಪರಿಕ, ಪ್ರಾಕೃತಿಕ ತಾಣಗಳನ್ನೂ ಸುತ್ತಿದಾಗ ಮಾತ್ರ ಜ್ಞಾನಾಧಾರಿತ, ಮಾನಸಿಕ ಹಾಗೂ ದೈಹಿಕ ಸದೃಢತೆಯೊಂದಿಗೆ ಪರಿಪೂರ್ಣನಾಗಲು ಸಾಧ್ಯ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದರು.

ನಗರದ ಸೆಂಟ್‌ ಕ್ಲಾರೆಟ್‌ ಕಾಲೇಜು ವತಿಯಿಂದ ಕೇಂದ್ರ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಪುಸ್ತಕ ಓದುವ ಹವ್ಯಾಸದ ಜೊತೆಗೆ ಉತ್ತಮ ಪ್ರವಾಸದ ಅಭಿವೃಚಿ ಬೆಳೆಸಿಕೊಳ್ಳಬೇಕು. ವಿಶ್ವವೇ ಒಂದು ತೆರೆದ ಪುಸ್ತಕ. ಅದರ ಪುಟಗಳನ್ನು ಓದಬೇಕಾದರೆ. ದೇಶ ಸುತ್ತಬೇಕು. ಪ್ರತೀ ವರ್ಷ ಎಲ್ಲರೂ ತಮ್ಮ ಕುಟುಂಬ, ಸ್ನೇಹಿತರ ಜೊತೆ ಅಥವಾ ವೈಯಕ್ತಿಕವಾಗಿಯಾದರೂ ಕರ್ನಾಟಕವು ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳ ಪ್ರವಾಸ ಕೈಗೊಳ್ಳುವಂತೆ ಮನವಿ ಮಾಡಿದರು.

24,150 ಸ್ಮಾರಕ ರಕ್ಷಿಸಬೇಕಿದೆ: ಕರ್ನಾಟಕದಲ್ಲೇ ಸುಮಾರು 25 ಸಾವಿರ ಸ್ಮಾರಕಗಳು ರಾಜ್ಯದಲ್ಲಿವೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಸುಮಾರು 850 ಸ್ಮಾರಕಗಳನ್ನು ಗುರುತಿಸಿ, ಸಂರಕ್ಷಿಸಲಾಗಿದೆ. ಇನ್ನೂ 24,150 ಸ್ಮಾರಕಗಳನ್ನು ಗುರುತಿಸಿ ರಕ್ಷಿಸಬೇಕಾಗಿದೆ. ಇದು ಸವಾಲಿನ ಕಾರ್ಯ. ಇದನ್ನು ಸರ್ಕಾರ ಒಂದೇ ಮಾಡಲಾಗುವುದಿಲ್ಲ. ಸಮಾಜ ಕೈ ಜೋಡಿಸಬೇಕು ಎಂದರು.

ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಇಂಡಿಯಾ ಟೂರಿಸಂ ಬೆಂಗಳೂರು ನಿರ್ದೇಶಕ ಮೊಹಮದ್‌ ಫಾರೂಕ್‌ ಮಾತನಾಡಿ, ಅನೇಕ ದೇಶಗಳಲ್ಲಿ ಪ್ರವಾಸೋದ್ಯಮ ಒಂದು ವಿಶೇಷ ಆರ್ಥಿಕ ಶಕ್ತಿಯಾಗಿದೆ. ಇಡೀ ವಿಶ್ವದಲ್ಲಿ ಹೆಚ್ಚು ಉದ್ಯೋಗಾವಕಾಶಗಳಿರುವುದೂ ಈ ಕ್ಷೇತ್ರದಲ್ಲೇ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕಿ ಕಮಲಾ ಬಾಯಿ ಬಿ., ಸೆಂಟ್‌ ಕ್ಲಾರೆಟ್‌ ಕಾಲೇಜಿನ ಪ್ರಾಂಶುಪಾಲ ಡಾ। ಥಾಮಸ್‌ ತೆನ್ನಡಿಯಿಲ್‌, ಫಾದರ್‌ ಉಪ ಪ್ರಾಂಶುಪಾಲ ಎಸ್‌.ಜೋಸೆಫ್‌ ಉಪಸ್ಥಿತರಿದ್ದರು.