ಪರಿಸರ ದಿನಾಚರಣೆ । ವಲಯ ಅರಣ್ಯಾಧಿಕಾರಿಗಳ ಕಚೇರಿ ಆಯೋಜನೆ
ಹತ್ತು ಬಾವಿ ಒಂದು ಕೆರೆಗೆ ಸಮ, ಹತ್ತು ಕೆರೆಗಳು ಒಂದು ಸರೋವರಕ್ಕೆ ಸಮ, ಹತ್ತು ಸರೋವರಗಳು ಒಂದು ಸಾಗರಕ್ಕೆ ಸಮ, ಹತ್ತು ಸಾಗರಗಳು ಒಬ್ಬ ಸತ್ಪುತ್ರನಿಗೆ ಸಮ, ಹತ್ತು ಸತ್ಪುತ್ರರು ತಾಯಿಗೆ ಸಮ, ಹತ್ತು ತಾಯಂದಿರು ಒಂದು ಮರಕ್ಕೆ ಸಮ ಎಂಬ ಉಲ್ಲೇಖವು ಮರದ ಮಹತ್ವಕ್ಕೆ ನೀಡಿರುವ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ. ಆದ್ದರಿಂದ ಗಿಡ ಮರಗಳನ್ನು ರಕ್ಷಿಸಿ, ಪೋಷಿಸಬೇಕಾದ್ದು ನಿತ್ಯದ ಕಾರ್ಯವಾಗಬೇಕಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸಪ್ನ ಕೆ.ಎಚ್. ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಶುಶ್ರೂಷಕ ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ ವಲಯ ಅರಣ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ವಿಶ್ವ ಪರಿಸರ ದಿನಾಚರಣೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಒಬ್ಬ ವ್ಯಾಪಾರಿ ಅಥವಾ ಮರಗೆಲಸಗಾರ ಮರದ ಮೌಲ್ಯವನ್ನು ಅದರ ಮರ ಬಳಕೆಯ ಅಥವಾ ಉಪಯೋಗದ ಬಗ್ಗೆ ಅರಿತು ಬೆಲೆ ನಿಗದಿ ಮಾಡುತ್ತಾರೆ. ಆದರೆ ಒಂದು ಮರ ನೀಡುವ ಆಮ್ಲಜನಕಕ್ಕೆ ಬೆಲೆ ಕಟ್ಟಲು ಸಾಧ್ಯವೇ ಎಂದು ಪ್ರಶ್ನಿಸಿ, ಕೊರೋನಾ ಸಂಕಷ್ಟದ ಸಮಯದಲ್ಲಿ ಆಮ್ಲಜನಕದ ಮಹತ್ವವನ್ನು ಎಲ್ಲರೂ ಕಂಡಿದ್ದೇವೆ’ ಎಂದು ತಿಳಿಸಿದರು.‘ಮರಗಳನ್ನು ಬೆಳೆಸುವುರಿಂದ ಭೂಮಿಯ ೧೦ ಸೆಂಟಿಮೀಟರ್ ಮಣ್ಣು ಕೋಟಿ ರು. ನೀಡಿದರು ಪಡೆಯಲು ಸಾಧ್ಯವಾಗುವುದಿಲ್ಲ, ಅಷ್ಟು ಫಲವತ್ತತೆ ಹೊಂದಿರುವ ಮಣ್ಣಿನ ಸವಕಳಿಯನ್ನು ತಡೆಯಲು ಸಾಧ್ಯವಾಗುತ್ತದೆ. ಅಲ್ಲದೆ ಅಂತರ್ಜಲ ಹೆಚ್ಚಿಸುತ್ತದೆ. ಬ್ರಹ್ಮಗಿರಿಯ ಹುಲಿಗೂ ಬೆಂಗಳೂರಿನ ನೀರಿಗೂ ಏನು ಸಂಬಂಧವೆಂದು ಮಾತನಾಡುತ್ತಾರೆ. ಆದರೆ ಹುಲಿಗಳು ಇಲ್ಲವೆಂದರೆ ಸಸ್ಯಾಹಾರಿ ಪ್ರಾಣಿಗಳು ಹೆಚ್ಚಿ, ಗಿಡಗಳನ್ನು ತಿಂದು ಕಾಡಿನ ಬೆಳವಣಿಗೆಗೆ ಮಾರಕವಾಗುತ್ತವೆ, ಮರಗಳು ಇಲ್ಲದೇ ಮಳೆಯಿಲ್ಲ, ಮಳೆಯಿಲ್ಲದೇ ನೀರಿಲ್ಲ, ಆದ್ದರಿಂದ ಅಹಾರ ಸರಪಳಿಯ ಸಲುವಾಗಿ ಎಲ್ಲಾ ಪ್ರಾಣಿ ಪಕ್ಷಿಗಳ ರಕ್ಷಣೆ ಅಗತ್ಯವಾಗಿದೆ’ ಎಂದು ಹೇಳಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್, ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ದಿಲೀಪ್ ಕುಮಾರ್ ಪಿ.ಸಿ. ಮಾತನಾಡಿದರು.