ಬೆಳೆಗಾರರ ಮೇಲೆ ಜೀತ ಪದ್ಧತಿ ಆರೋಪದಡಿ ಪ್ರಕರಣ ಸತ್ಯಕ್ಕೆ ದೂರ: ಸ್ಪಷ್ಟನೆ

KannadaprabhaNewsNetwork |  
Published : Feb 24, 2024, 02:34 AM IST
ಚಿತ್ರ : 23ಎಂಡಿಕೆ4 : ಕುಟ್ಟ ಕೊಡವ ಸಮಾಜದಲ್ಲಿ ಸಭೆ. | Kannada Prabha

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಹಿಂದಿನಿಂದಲೂ ಬೆಳೆಗಾರರು ಹಾಗೂ ಕಾರ್ಮಿಕರ ನಡುವೆ ಉತ್ತಮ ಬಾಂಧವ್ಯವಿದೆ. ಕೆಲವೊಂದು ಎನ್‌ಜಿಒಗಳ ಕುಮ್ಮಕ್ಕಿನಿಂದ ಕಾರ್ಮಿಕರನ್ನು ದಾರಿ ತಪ್ಪಿಸಿ ಯಾವುದೋ ಆಮಿಷಗಳನ್ನೊಡ್ಡಿ ಬೆಳೆಗಾರರನ್ನು ಸುಲಿಗೆ ಮಾಡಲು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಹಾಗೂ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗು ಜಿಲ್ಲೆಯ ಹಲವು ಬೆಳೆಗಾರರ ಮೇಲೆ ಜಾತಿ ನಿಂದನೆ ಮತ್ತು ಜೀತ ವಿಮುಕ್ತಿ ಕಾಯ್ದೆಯ ಮೂಲಕ ಸತ್ಯಕ್ಕೆ ದೂರವಾದ ಪ್ರಕರಣ ದಾಖಲಿಸಲಾಗಿದೆ. ಇಂತಹ ದೂರುಗಳು ಬಂದ ಸಂದರ್ಭ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಬೆಳೆಗಾರರಿಗೆ ನೋಟಿಸ್ ಮಾಡಿ ಕರೆದು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಹಾಗೂ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಒತ್ತಾಯಿಸಿದ್ದಾರೆ.ಕುಟ್ಟ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದಿನಿಂದಲೂ ಬೆಳೆಗಾರರು ಹಾಗೂ ಕಾರ್ಮಿಕರ ನಡುವೆ ಉತ್ತಮ ಬಾಂಧವ್ಯವಿದ್ದು ಕೆಲವೊಂದು ಎನ್‌ಜಿಒಗಳ ಕುಮ್ಮಕ್ಕಿನಿಂದ ಕಾರ್ಮಿಕರನ್ನು ದಾರಿ ತಪ್ಪಿಸಿ ಯಾವುದೋ ಆಮಿಷಗಳನ್ನೊಡ್ಡಿ ಬೆಳೆಗಾರರನ್ನು ಸುಲಿಗೆ ಮಾಡಲು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಜಾತಿ ನಿಂದನೆ ಹಾಗೂ ಜೀತ ವಿಮುಕ್ತಿ ಕಾಯ್ದೆಯ ಮೂಲಕ ದಾಖಲು ಆಗಿರುವ ಪ್ರಕರಣದ ದೂರುದಾರರು ಆಧಾರ್ ಕಾರ್ಡ್ ಗಳನ್ನು ಹೊಂದಿದ್ದು, ಚುನಾವಣಾ ಗುರುತಿನ ಪತ್ರ ಹೊಂದಿದ್ದಾರೆ. ಪಡಿತರ ಚೀಟಿಯಲ್ಲಿ ತಮ್ಮ ಬೆರಳಚ್ಚನ್ನು ನೀಡಿ ಪಡಿತರ ಸೌಲಭ್ಯ ಪಡೆಯುತ್ತಿದ್ದಾರೆ. ಸಂತೆಗೆ ತಮ್ಮ ಸಾಮಗ್ರಿ ಖರೀದಿಸಲು ಹೋಗುತ್ತಿದ್ದಾರೆ. ಹಲವಾರು ಮಕ್ಕಳು ಸರ್ಕಾರಿ ಹಾಸ್ಟೆಲ್ ನಲ್ಲಿದ್ದಾರೆ. ಪ್ರಕರಣದ ದೂರುದಾರರು ಶಾಲೆ ಹಾಗೂ ಹಾಸ್ಟೆಲ್ ಗಳಲ್ಲಿ ಪೋಷಕರ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ . ದೂರುದಾರ ಕಾರ್ಮಿಕರಲ್ಲಿ ಬಹುತೇಕ ಎಲ್ಲರಲ್ಲಿ ಸ್ಮಾರ್ಟ್ ಫೋನ್ ಗಳಿವೆ. ಸ್ವಂತ ವಾಹನಗಳನ್ನು ಹೊಂದಿದ್ದು ಕೆಲಸದ ಬಿಡುವು ಹಾಗೂ ರಜೆ ದಿನಗಳಲ್ಲಿ ತಮ್ಮ ಇಷ್ಟ ಬಂದಲ್ಲಿಗೆ ತೆರಳುತ್ತಿದ್ದಾರೆ. ಅವರ ಮನೆಗಳಲ್ಲಿ ಟಿವಿಗಳು ಇವೆ .ಹೀಗಿರುವಾಗ ಜೀತಪದ್ಧತಿಯಡಿ ಪ್ರಕರಣ ದಾಖಲಿಸಿ ಕಿರುಕುಳ ನೀಡುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಪ್ರಕರಣದ ವಿಚಾರಣೆ ವೇಳೆಯಲ್ಲಿ ದೂರುದಾರರ ಕುಟುಂಬವನ್ನು ತಹಸಿಲ್ದಾರರ ಮೂಲಕ ಪರಿಶೀಲನೆ ಸಂದರ್ಭ, ತಮಗೆ ಸೂಕ್ತ ರೀತಿಯ ವೇತನ ನೀಡುತ್ತಿದ್ದು ರಜೆಗಳನ್ನು ನೀಡಲಾಗುತ್ತಿದೆ. ಸ್ವತಂತ್ರವಾಗಿ ಎಲ್ಲಿಗಾದರೂ ಹೋಗಿ ಬರಲು ಬಿಡುವು ಹಾಗೂ ರಜದಿನದಲ್ಲಿ ಅವಕಾಶಗಳಿವೆ ಎಂದು ಹೇಳಿಕೆ ನೀಡಿದ್ದಾರೆ.ಇದರ ನಡುವೆಯೂ ಹಾಗೂ ಜಾತಿ ನಿಂದನೆ ಕೇಸುಗಳನ್ನು ದಾಖಲಿಸಿರುವುದು ಸರಿಯಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು .ಹೊರಗಿನ ಏನ್‌ಜಿಒಗಳು ಹಾಗೂ ಕೆಲವು ಕಾರ್ಮಿಕ ಮುಖಂಡರು ಸ್ಥಳೀಯ ಕಾರ್ಮಿಕರನ್ನು ದಾರಿ ತಪ್ಪಿಸುವ ಹಾಗೂ ಯಾವುದೋ ಅಮಿಷಗಳನ್ನು ಒಡ್ಡಿ ಪ್ರಕರಣ ದಾಖಲಿಸಲು ಕುಮ್ಮಕ್ಕು ನೀಡುತ್ತಿರುವುದು ಕಂಡುಬಂದಿದೆ. ಇದು ಬೆಳೆಗಾರರು ಹಾಗೂ ಕಾರ್ಮಿಕರ ನಡುವಿನ ಸಾಮರಸ್ಯ ಕದಡುವ ಪ್ರಯತ್ನವಾಗಿದೆ ಎಂದು ಕಿಡಿ ಕಾರಿದರು.

ಹಲವು ವರ್ಷಗಳ ಹಿಂದೆ ಜೀತ ಪದ್ಧತಿಯ ಬಗ್ಗೆ ಆರೋಪ ಮಾಡಲಾಗಿದ್ದು ಈ ಬಗ್ಗೆ ಉನ್ನತ ಅಧಿಕಾರಿಗಳು ಹಾಗೂ ಸಂಬಂಧಿಸಿದ ಎಲ್ಲಾ ಇಲಾಧಿಕಾರಿಗಳು ಪರಿಶೀಲನೆ ನಡೆಸಿ ಅಂತಹ ಯಾವುದೇ ಪದ್ಧತಿ ಇಲ್ಲ ಎಂಬುದು ಸಾಬೀತಾಗಿದೆ ಹೀಗಿರುವಾಗ ಮತ್ತೆ ಮತ್ತೆ ಬೆಳೆಗಾರರಿಗೆ ಕಿರುಕುಳ ನೀಡುವದು ಸರಿಯಲ್ಲ ಎಂದು ಹೇಳಿದರು.ಕುಟ್ಟ ಕೊಡವ ಸಮಾಜದ ಉಪಾಧ್ಯಕ್ಷ ಹೊಟ್ಟೆಂಗಡ ರಮೇಶ್, ಕಾರ್ಯದರ್ಶಿ ಕೊಂಗಂಡ ಸುರೇಶ್, ಖಜಾಂಚಿ ಮಚ್ಚಮಾಡ ಸುಬ್ರಮಣಿ, ಜಂಟಿ ಕಾರ್ಯದರ್ಶಿ ತೀತಿರ ಮಂದಣ್ಣ, ಆಡಳಿತ ಮಂಡಳಿ ಸದಸ್ಯರಾದ ಚೆಪ್ಪುಡೀರ ಪಾರ್ಥ, ಚೆಪ್ಪುಡೀರ ಬೋಪಣ್ಣ ,ಚೆಕ್ಕೇರ ಕಾರ್ಯಪ್ಪರಾಬಿನ್, ಪೆಮ್ಮಣಮಾಡ ವಾಸು ಉತ್ತಪ್ಪ, ತೀತಿರಕಬೀರ್, ಕೆ.ಬಾಡಗ ಗ್ರಾ.ಪಂ.ಅಧ್ಯಕ್ಷ ಮುಕ್ಕಾಟೀರ ರಿತೇಶ್ ಬಿದ್ದಪ್ಪ ,ಬೆಳೆಗಾರರಾದ ಮಚ್ಚಮಾಡ ಪ್ರಕಾಶ್, ವಕೀಲರಾದ ಬಾಚರಣಿಯಂಡ ಅಯ್ಯಪ್ಪ, ಕಳ್ಳಂಗಡ ಸೌರಭ್, ಅಳಮೇಂಗಡ ಮೋಟಯ್ಯ, ಗುಡಿಯಂಗಡ ರಾಜ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ