ಮಂಗಳೂರು: ನಗರದ ಬಂದರು ನಿವಾಸಿಯೊಬ್ಬರ ಬ್ಯಾಂಕ್ ಖಾತೆಯನ್ನು ವಂಚನೆಗೆ ಬಳಸಿಕೊಂಡಿದ್ದ ಅಂತಾರಾಜ್ಯ ಸೈಬರ್ ಕ್ರೈಂ ಜಾಲವನ್ನು ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ತಂಡ ಪತ್ತೆಹಚ್ಚಿದೆ. ಹೈದರಾಬಾದ್ನಲ್ಲಿ ಐವರು ಹಾಗೂ ಮಂಗಳೂರಿನಲ್ಲಿ ಓರ್ವ ಆರೋಪಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರಿನ ಶೇಖ್ ಕರೀಮುಲ್ಲಾ ಯಾನೆ ರಸೂಲ್ (೨೭), ಕರ್ನೂರ್ನ ಬುಡಿದಿನ್ನೆ ವಂಶಿ ಯಾನೆ ಗುರು (೨೧), ತೆಲಂಗಾಣದ ಹೈದರಾಬಾದ್ನ ಪಂಡಿತಿ ಕ್ರಾಂತಿ ಕುಮಾರ್ (೩೬), ಮಂಗಳೂರಿನ ಮೂಲ್ಕಿ ನಿವಾಸಿ ಇಬ್ರಾಹಿಂ (೩೫), ಹೈದರಾಬಾದ್ನ ಬಡೆ ಶ್ರೀನಿವಾಸ್ (೩೮) ಮತ್ತು ನೆಲ್ಲೂರಿನ ಉತ್ಸಲ ಸಂತೋಷ್ ಕೃಷ್ಣ (೩೫) ಬಂಧಿತ ಆರೋಪಿಗಳು. ಇವರು ಸಾಮಾಜಿಕ ಮಾಧ್ಯಮಗಳ ಮೂಲಕ ಬ್ಯಾಂಕ್ ಖಾತೆದಾರರಿಗೆ ಕಮಿಷನ್ ಆಮಿಷವೊಡ್ಡಿ ವಂಚನೆ ಎಸಗುತ್ತಿದ್ದರು.
ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಆಕರ್ಷಕ ಜಾಹಿರಾತು ನೀಡಿ, ಬ್ಯಾಂಕ್ ಖಾತೆದಾರರಿಗೆ ಶೇ. ೪ ರಿಂದ ೬ ರಷ್ಟು ಕಮಿಷನ್ ನೀಡುವುದಾಗಿ ಆಮಿಷವೊಡ್ಡುತ್ತಿದ್ದರು. ದುರಾಸೆಗೊಳಗಾದವರಿಂದ ಖಾತೆ ವಿವರ ಮತ್ತು ಒಟಿಪಿ ಪಡೆದು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ರವಾನಿಸುತ್ತಿದ್ದರು. ತನಿಖೆಯ ವೇಳೆ ಇವರಿಂದ ಒಟ್ಟು ೭೨ ಬ್ಯಾಂಕ್ ಖಾತೆಗಳ ವಿವರ ಲಭ್ಯವಾಗಿದ್ದು, ಇವುಗಳ ಮೇಲೆ ದೇಶಾದ್ಯಂತ ೨೭೨ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ವಿಶೇಷವೆಂದರೆ ಫೆ.೨೬ ರಂದು ಒಂದೇ ದಿನ ಈ ತಂಡ ೨ ಕೋಟಿ ರು.ಗೂ ಅಧಿಕ ಹಣದ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ.
-----------